ಉಜಿರೆ : ‘ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಬಗ್ಗೆ ಅವಹೇಳನ ಮುಂದುವರಿದರೆ ಜೈನರ ಧ್ವನಿ ವಿಧಾನಸೌಧದ ಮುಂದೆ ಮೊಳಗಲಿದೆ’ ಎಂದು ಜೈನ ಭಟ್ಟಾರಕರು ಎಚ್ಚರಿಕೆ ನೀಡಿದರು.
ಧರ್ಮಸ್ಥಳ ಮುಖ್ಯದ್ವಾರದ ಗೋಪುರದ ಬಳಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ‘ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದ ಜೈನ ಕ್ಷೇತ್ರಗಳ ಭಟ್ಟಾರಕರು, ಶ್ರಾವಕ-ಶ್ರಾವಕಿಯರು ಹಾಗೂ ಸ್ಥಳೀಯರ ಸಮಾವೇಶ’ದಲ್ಲಿ ವೀರೇಂದ್ರ ಹೆಗ್ಗಡೆಯವರನ್ನು ಸನ್ಮಾನಿಸಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭರವಸೆ ನೀಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಚೆನ್ನೈನ ಅರಿಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಧರ್ಮಸ್ಥಳದ ಹೆಸರಿಗೆ ಚ್ಯುತಿಯುಂಟುಮಾಡಲು ಹೊಟ್ಟೆಕಿಚ್ಚಿನ ಅಧರ್ಮಿಗಳು ಕುತಂತ್ರ ಮಾಡಿದ್ದಾರೆ. ಈ ಅನ್ಯಾಯವನ್ನು ಸರ್ಕಾರ ಹಿಮ್ಮೆಟ್ಟಿಸದೇ ಇದ್ದರೆ ವಿಧಾನಸೌಧಕ್ಕೆ ಹೋಗುವುದು ಖಚಿತ’ ಎಂದು ಎಚ್ಚರಿಕೆ ನೀಡಿದ್ದಾರೆ.
“ಧರ್ಮಸ್ಥಳಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಇದು ಶಮನ ಆಗದೇ ಇದ್ದರೆ ಜೈನಧರ್ಮೀಯರಿಗೆ ಶೀಘ್ರದಲ್ಲಿಯೇ ಕರೆ ನೀಡಲಾಗುವುದು. ಅದಕ್ಕೆ ಓಗೊಟ್ಟು ಎಲ್ಲರೂ ವಿಧಾನಸೌಧದ ಬಳಿ ಬರಬೇಕು’ ಎಂದು ಕರೆ ನೀಡಿದ್ದಾರೆ.
ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಅವರು, ‘ಧರ್ಮಸ್ಥಳದ ಮೇಲೆ ಮಾಡಿರುವ ಆರೋಪಗಳೆಲ್ಲ ಇಲ್ಲಿ ತೋಡಿರುವ ಗುಂಡಿಗಳಲ್ಲಿ ಮುಚ್ಚಿಹೋಗಿದೆ. ಆಪಕೀರ್ತಿ ತರಲು ಬಯಸುವವರು ತೋಡುವ ಗುಂಡಿಗಳಲ್ಲಿ ಮತ್ತೆ ಯಾರೂ ಬೀಳಬಾರದು. ಅಲ್ಲಿ ಗಿಡಗಳನ್ನು ನೆಟ್ಟು ಹಣ್ಣುಗಳನ್ನು ಬೆಳೆದು ತಿಂದು ಒಳ್ಳೆಯವರಾಗಲು ಪ್ರಯತ್ನಿಸಿ’ ಎಂದು ಸಲಹೆ ನೀಡಿದ್ದಾರೆ.
ಸಾಹಿತಿ ಹಂಪ ನಾಗರಾಜಯ್ಯ ಅವರು, ‘ಧರ್ಮಸ್ಥಳಕ್ಕೆ ಈಗ ಆಗಿರುವ ನೋವು ಇಡೀ ಸಮಾಜದ ನೋವು. ನಾವೆಲ್ಲ ಈ ಕ್ಷೇತ್ರದ ಜೊತೆ ಇರುವುದಾಗಿ ತಿಳಿಸಲು ಬಂದಿದ್ದೇವೆ. ಅಗಾಧ ಸಂಯಮದ ವೀರೇಂದ್ರ ಹೆಗ್ಗಡೆಯವರು ಭಗವದ್ಗೀತೆಯಲ್ಲಿ ಹೇಳಿರುವ ಸ್ಥಿತಪ್ರಜ್ಞರ ಲಕ್ಷಣಗಳ ಮನುಷ್ಯ ರೂಪ. ಮೌನಕ್ಕೆ ಮಹಾಶಕ್ತಿ ಇದೆ ಎಂದು ಪ್ರಕರಣದಲ್ಲಿ ತೋರಿಸಿಕೊಟ್ಟಿದ್ದಾರೆ. ಆ ಮೌನಕ್ಕೆ ಈಗ ಕರ್ನಾಟಕವೇ ಧನಿಯಾಗಿದೆ’ ಎಂದಿದ್ದಾರೆ.
ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ, ಆರತಿಪುರದ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ, ಸೋಂದ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ, ನರಸಿಂಹರಾಜಪುರ ಜೈನಮಠ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ ಅವರು ಪಾಲ್ಗೊಂಡಿದ್ದರು.



















