ನವದೆಹಲಿ: ಜನಪ್ರಿಯ ಪಾನೀಯ ರೂಹ್ ಅಫ್ಜಾವನ್ನು ಗುರಿಯಾಗಿಸಲು “ಶರ್ಬತ್ ಜಿಹಾದ್” ಎಂಬ ಅವಹೇಳನಕಾರಿ ಪದವನ್ನು ಬಳಸಿರುವ ಯೋಗಗುರು ಬಾಬಾ ರಾಮ್ದೇವ್(Baba Ramdev Sharbat Jihad) ವಿರುದ್ಧ ದೆಹಲಿ ಹೈಕೋರ್ಟ್ ಮಂಗಳವಾರ ಚಾಟಿ ಬೀಸಿದೆ.
ರಾಮದೇವ್ ಅವರ ಹೇಳಿಕೆಯ ವಿರುದ್ಧ ರೂಹ್ ಅಫ್ಜಾ ಪಾನೀಯ ತಯಾರಕ ಕಂಪನಿ ಹಮ್ದರ್ದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಇಂತಹ “ಸಮರ್ಥನೀಯವಲ್ಲದ” ಹೇಳಿಕೆಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇತ್ತೀಚೆಗೆ ಬಾಬಾ ರಾಮದೇವ್ ಅವರು ತಮ್ಮ ಪತಂಜಲಿ ಕಂಪನಿಯ ಗುಲಾಬಿ ಶರ್ಬತ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ವೇಳೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ನಿಮಗೆ ಶರ್ಬತ್ ನೀಡುವ ಕಂಪನಿಯೊಂದಿದೆ. ಅದು ಶರ್ಬತ್ ಮಾರಾಟ ಮಾಡಿ ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸುತ್ತದೆ. ನೀವು ಆ ಶರ್ಬತ್ ಕುಡಿದರೆ, ಮದರಸಾಗಳು ಮತ್ತು ಮಸೀದಿಗಳು ತಲೆ ಎತ್ತುತ್ತವೆ. ಆದರೆ ನೀವೆಲ್ಲರೂ ಪತಂಜಲಿಯ ಗುಲಾಬಿ ಶರ್ಬತ್ ಅನ್ನು ಕುಡಿದರೆ ದೇಶಾದ್ಯಂತ ಗುರುಕುಲಗಳು ತಲೆಎತ್ತಲಿವೆ.
ಆಚಾರ್ಯ ಕುಲ ಅಭಿವೃದ್ಧಿಯಾಗಲಿದೆ, ಪತಂಜಲಿ ವಿಶ್ವವಿದ್ಯಾಲಯ ನಿರ್ಮಾಣಗೊಳ್ಳಲಿದೆ ಮತ್ತು ಭಾರತೀಯ ಶೈಕ್ಷಣಿಕ ವ್ಯವಸ್ಥೆ ಬೆಳೆಯಲಿದೆ” ಎಂದು ಬಾಬಾ ರಾಮ್ ದೇವ್ ಹೇಳಿದ್ದರು. ಜೊತೆಗೆ, ಲವ್ ಜಿಹಾದ್ ನಂತೆಯೇ, ಇದು ಕೂಡ ಒಂದು ರೀತಿಯಲ್ಲಿ “ಶರ್ಬತ್ ಜಿಹಾದ್” ಆಗಿದೆ. ಈ ಶರ್ಬತ್ ಜಿಹಾದ್ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಈ ಸಂದೇಶವು ಎಲ್ಲರಿಗೂ ತಲುಪಬೇಕು” ಎಂದೂ ಅವರು ಹೇಳಿದ್ದರು. ಈ ವೇಳೆ ಅವರು ಹಮ್ದರ್ದ್ ಕಂಪನಿ ಅಥವಾ ರೂಹ್ ಅಫ್ಜಾ ಹೆಸರನ್ನು ಉಲ್ಲೇಖಿಸದಿದ್ದರೂ, ಅವರ ಟೀಕೆಗಳು ಇದೇ ಪಾನೀಯವನ್ನು ಗುರಿಯಾಗಿಸಿಕೊಂಡಿವೆ ಎಂದೇ ವಿಶ್ಲೇಷಿಸಲಾಗಿತ್ತು.
ಈ ಹೇಳಿಕೆಯು ಭಾರೀ ಸುದ್ದಿಯಾದ ಬಳಿಕ ಹಮ್ದರ್ದ್ ಕಂಪನಿಯು ಬಾಬಾ ರಾಮ್ದೇವ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಮಂಗಳವಾರ ದೆಹಲಿ ಹೈಕೋರ್ಟ್ನಲ್ಲಿ ಹಮ್ದರ್ದ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, “ಇದೊಂದು ಆಘಾತಕಾರಿ ಪ್ರಕರಣವಾಗಿದೆ. ಇದು ದ್ವೇಷ ಭಾಷಣಕ್ಕೆ ಹೋಲುವಂಥ ಹಾಗೂ ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಕರಣವಾಗಿದೆ” ಎಂದಿದ್ದಾರೆ. ಅಲ್ಲದೇ ಬಾಬಾ ರಾಮ್ ದೇವ್ ಅವರು ಶರ್ಬತ್ ಬ್ರಾಂಡ್ ಅನ್ನು ಟಾಯ್ಲೆಟ್ ಸ್ವಚ್ಛಗೊಳಿಸುವ ದ್ರಾವಣಕ್ಕೆ ಹೋಲಿಸಿದ್ದಾರೆ.
ಈ ಟಾಯ್ಲೆಟ್ ಕ್ಲೀನರ್ ನಂಥ ವಿಷದಿಂದ ನಿಮ್ಮ ಮಕ್ಕಳನ್ನು ರಕ್ಷಿಸಿ ಎಂದೂ ಅವರು ಕರೆ ನೀಡಿದ್ದಾರೆ ಎಂದೂ ರೋಹಟಗಿ ಉಲ್ಲೇಖಿಸಿದ್ದಾರೆ. ರಾಮ್ ದೇವ್ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇಂಥ ಅಸಮಂಜಸ ಹೇಳಿಕೆಗಳು ನ್ಯಾಯಾಲಯದ ಸಾಕ್ಷಿಪ್ರಜ್ಞೆಯನ್ನೇ ಕಲಕುತ್ತಿದೆ ಎಂದು ಹೇಳಿದೆ.
ಬಾಬಾ ರಾಮದೇವ್ ಮತ್ತು ಪತಂಜಲಿ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಎರಡು ವರ್ಷಗಳಲ್ಲಿ, ಪತಂಜಲಿ ಮತ್ತು ಅದರ ಸಂಸ್ಥಾಪಕರು ಹಾದಿ ತಪ್ಪಿಸುವ ಜಾಹೀರಾತುಗಳನ್ನು ನೀಡಿ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.