ನವದೆಹಲಿ: ಕಳೆದ ವಾರ ಪಹಲ್ಗಾಮ್(Pahalgam Attack)ನಲ್ಲಿ 26 ಅಮಾಯಕರ ಹತ್ಯಾಕಾಂಡ ನಡೆಸಿದ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಜ್ಞೆ ಮಾಡಿದ್ದಾರೆ.
ನವದೆಹಲಿಯಲ್ಲಿ ಶನಿವಾರ ಅಂಗೋಲಾ ಅಧ್ಯಕ್ಷ ಜೊವಾವೊ ಲೌರೆನ್ಕೊ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಯೋತ್ಪಾದನೆ ಎನ್ನುವುದು ಮಾನವತೆಗೆ ಅತಿದೊಡ್ಡ ಬೆದರಿಕೆಯಾಗಿದೆ ಎನ್ನುವುದು ನಮ್ಮ ಒಮ್ಮತದ ನಿರ್ಧಾರವಾಗಿದೆ” ಎಂದು ಹೇಳಿದರು.
ಇದೇ ವೇಳೆ ಪಹಲ್ಗಾಮ್ ದಾಳಿಯಲ್ಲಿ ಆದ ಜೀವಹಾನಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಬೆಂಬಲ ಸೂಚಿಸಿದ್ದಕ್ಕಾಗಿ ಮೋದಿ ಅವರು ಅಧ್ಯಕ್ಷ ಲೌರೆನ್ಕೊ ಅವರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.
ಇದೇ ವೇಳೆ, ಭಾರತ ಮತ್ತು ಅಂಗೋಲಾ ನಡುವಿನ ದೀರ್ಘಕಾಲದ ಸಂಬಂಧವನ್ನು ಶ್ಲಾಘಿಸಿದ ಅವರು, “ಭಾರತ ಮತ್ತು ಅಂಗೋಲಾ ತಮ್ಮ ರಾಜತಾಂತ್ರಿಕ ಪಾಲುದಾರಿಕೆಯ 40ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ. ಆದಾಗ್ಯೂ, ನಮ್ಮ ಸಂಬಂಧವು ಅತ್ಯಂತ ಹಿಂದಿನದ್ದು. ಅಂಗೋಲಾ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ, ಭಾರತವು ನಂಬಿಕೆ ಮತ್ತು ಸ್ನೇಹದಿಂದ ಅದರ ಬೆನ್ನಿಗೆ ನಿಂತಿತ್ತು” ಎಂದಿದ್ದಾರೆ.
ಪಾಕಿಸ್ತಾನದ ವಿರುದ್ಧದ ಮತ್ತೊಂದು ಮಹತ್ವದ ಕ್ರಮದಲ್ಲಿ, ಭಾರತವು ಎಲ್ಲಾ ಪಾಕಿಸ್ತಾನಿ ಸರಕುಗಳ ನೇರ ಅಥವಾ ಪರೋಕ್ಷ ಆಮದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತ ಸರ್ಕಾರ ನಿಷೇಧಿಸಿದೆ. ಇದಲ್ಲದೆ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಆದೇಶದ ಪ್ರಕಾರ, ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳನ್ನು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದನ್ನು ಭಾರತ ನಿಷೇಧಿಸಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಪ್ರಧಾನಿ ಮೋದಿಯವರು ಈ ಹೇಳಿಕೆ ನೀಡಿದ್ದಾರೆ.
ಭಾರತ-ಅಂಗೋಲಾ ಸಂಬಂಧ
ಕಳೆದ 10 ವರ್ಷಗಳಲ್ಲಿ ಭಾರತವು ಆಫ್ರಿಕನ್ ರಾಷ್ಟ್ರಗಳೊಂದಿಗೆ ಸಹಕಾರ ಸಾಧಿಸುವಲ್ಲಿ ವೇಗ ಪಡೆದಿದೆ. ನಮ್ಮ ನಡುವಿನ ವ್ಯಾಪಾರ ವಹಿವಾಟು ಸುಮಾರು 100 ಶತಕೋಟಿ ಡಾಲರ್ಗೆ ತಲುಪಿದೆ. ನಾವು ರಕ್ಷಣಾ ಸಹಕಾರ ಮತ್ತು ಕಡಲ ಭದ್ರತೆಯನ್ನು ಸುಧಾರಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ. “ಕಳೆದ ತಿಂಗಳು, ಭಾರತ ಮತ್ತು ಆಫ್ರಿಕಾ ತನ್ನ ಮೊದಲ ನೌಕಾ ಸಮರಾಭ್ಯಾಸ ನಡೆಸಿವೆ. ಕಳೆದ 10 ವರ್ಷಗಳಲ್ಲಿ ನಾವು ಆಫ್ರಿಕಾದಲ್ಲಿ 17 ಹೊಸ ರಾಯಭಾರ ಕಚೇರಿಗಳನ್ನು ತೆರೆದಿದ್ದೇವೆ. ಆಫ್ರಿಕಾಕ್ಕೆ 12 ಶತಕೋಟಿ ಡಾಲರ್ ಮೌಲ್ಯದ ಸಾಲ ನೀಡಲಾಗಿದೆ. ಆಫ್ರಿಕನ್ ರಾಷ್ಟ್ರಗಳಿಗೆ 700 ಮಿಲಿಯನ್ ಡಾಲರ್ ಅನುದಾನವನ್ನು ನೀಡಲಾಗಿದೆ. ನಾವು ಆಫ್ರಿಕಾದ 8 ದೇಶಗಳಲ್ಲಿ ವೃತ್ತಿಪರ ತರಬೇತಿ ಕೇಂದ್ರಗಳನ್ನು ತೆರೆದಿದ್ದೇವೆ. ಐದು ದೇಶಗಳಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸಲು ನಾವು ಸಹಾಯ ಮಾಡುತ್ತಿದ್ದೇವೆ” ಎಂದೂ ಮೋದಿ ಹೇಳಿದ್ದಾರೆ.