ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಆರ್ಸಿಬಿ ಅಭಿಮಾಗಳು ಮಡಿದಿದ್ದಾರೆ. ಕಣ್ಣೀರಿಡುತ್ತಾ.. ಗೋಳಿಡುತ್ತಾ ಕಾಲ್ತುಳಿತದಲ್ಲಿ ಉಸಿರು ಚೆಲ್ಲಿದ ಕುಟುಂಬದ ಕುಡಿಗಳಿಗಾಗಿ ಪೋಷಕರು ಇನ್ನೂ ಮಮ್ಮಲ ಮರುಗುತ್ತಿದ್ದಾರೆ. ಕಾಲ್ತುಳಿತದ ದುರಂತಕ್ಕೆ ಭಾರಿ ಸಂತಾಪ ವ್ಯಕ್ತವಾಗಿದ್ದು, ಘಟನೆಗೆ ನಿಖರ ಕಾರಣ ತಿಳಿಯಲು ಸರ್ಕಾರ ತನಿಖೆಗೆ ಆದೇಶಿಸಿದೆ. ತನಿಖೆ ಮಾಡಿ ವರದಿ ನೀಡುವಂತೆ ಮ್ಯಾಜಿಸ್ಟ್ರೇಟ್ಗೆ ಸೂಚಿಸಿದೆ.
ಅದರಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದ ಮ್ಯಾಜಿಷ್ಟ್ರಿಯಲ್ ಟೀಂ ತನಿಖೆ ವೇಗ ಹೆಚ್ಚಿಸಿದೆ. ದುರ್ಘಟನೆಯ ಅಸಲಿ ಸತ್ಯಾಂಶ ಕಲೆ ಹಾಕಲು ಮಡಿದ ಆರ್ಸಿಬಿ ಅಭಿಮಾನಿಗಳ ಕುಟುಂಬಸ್ಥರ ಹೇಳಿಕೆ ದಾಖಲಿಸಲು ಡೇಟ್ ಫಿಕ್ಸ್ ಮಾಡಿದೆ.
ಜಿಲ್ಲಾಧಿಕಾರಿ ಜಗದೀಶ್ ಈಗಾಗಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿ, ಕಾಲ್ತುಳಿತದ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಇದೀಗ ತನಿಖೆ ಮುಂದುವರಿದ ಭಾಗವಾಗಿ ಕಾಲ್ತುಳಿತದಲ್ಲಿ ಜೀವ ಬಿಟ್ಟ 11 ಕುಟುಂಬಗಳ ಹೇಳಿಕೆ ದಾಖಲಿಸಲು ಸಜ್ಜಾಗಿದ್ದಾರೆ. ಮಕ್ಕಳನ್ನ ಕಳೆದುಕೊಂಡು ನೋವಲ್ಲಿದ್ದ ಕುಟುಂಬಸ್ಥರನ್ನು ಮಾತನಾಡಿಸಲು ಮ್ಯಾಜಿಸ್ಟೇಟ್ ಗೆ ಇಷ್ಟು ದಿನ ಸಾಧ್ಯ ಆಗಿರಲಿಲ್ಲ. ದುರಂತ ನಡೆದು ಐದು ದಿನಗಳ ಬಳಿಕ 11 ಕುಟುಂಬಕ್ಕೂ ನೋಟಿಸ್ ಕೊಡಲಾಗಿದೆ.
ಜೂನ್ 16ಕ್ಕೆ ಹೇಳಿಕೆ ದಾಖಲಿಸಲು ಡಿಸಿ ದಿನಾಂಕ ನಿಗದಿ ಮಾಡಿದ್ದು, ಅಂದು ಬೆಳಗ್ಗೆಯಿಂದ ಸಂಜೆವರೆಗೆ ಕುಟುಂಬಸ್ಥರ ಹೇಳಿಕೆ ಪಡೆಯಲಾಗುತ್ತೆ. ಹೀಗಾಗಿ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಸಮಯ ನೀಡಲಾಗಿದೆ. ತನಿಖೆ ಮುಂದುವರೆದ ಭಾಗವಾಗಿ ಮ್ಯಾಜಿಸ್ಟ್ರೇಟ್ ಹೇಳಿಕೆ ದಾಖಲು ಮಾಡುತ್ತಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಅವ್ಯವಸ್ಥೆ ಸಂಬಂಧ ಸಾಲು ಸಾಲು ದೂರು ಕೇಳಿ ಬಂದಿವೆ. ಅಂದು ಆ ಜಾಗದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇರಲಿಲ್ಲ. ಪ್ರಥಮ ಚಿಕಿತ್ಸೆಯಂತೂ ದೂರದ ಮಾತಾಗಿತ್ತು. ಜೊತೆಗೆ ಅಗ್ನಿಶಾಮಕ ದಳವೂ ಸ್ಥಳದಲ್ಲಿ ಇರಲಿಲ್ಲ. ಈ ಎಲ್ಲಾ ಅಂಶಗಳ ಬಗ್ಗೆಯೂ ಡಿಸಿ ಜಗದೀಶ್ ತನಿಖೆ ಮುಂದುವರೆಸಿದ್ದಾರೆ.