ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆಂಡ್ ಗ್ಯಾಂಗ್ ಜೈಲು ಸೇರಿ 16 ದಿನಗಳು ಕಳೆದಿವೆ.
ದರ್ಶನ್ ಸ್ಥಿತಿ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ ಎನ್ನಲಾಗುತ್ತಿದೆ. ದರ್ಶನ್ ದಿನದಿಂದ ದಿನಕ್ಕೆ ಸೊರಗುತ್ತಿದ್ದಾರೆ. ಹೈರಾಣಾಗಿ ಹೋಗುತ್ತಿದ್ದಾರೆ.
16 ದಿನಗಳಿಂದಲೂ ನಟ ದರ್ಶನ್ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದವರಂತೆ ಬದುಕುತ್ತಿದ್ದಾರೆ. ಹೊರಗೆ ಇದ್ದಾಗ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಅವರಿಗೆ ಜೈಲು ವಾಸ ತುಂಬಾ ಕಷ್ಟ ಹಾಗೂ ನೋವು ತರುತ್ತಿದೆ. ಜೈಲಿಗೆ ಸೇರಿದ ದಿನದಿಂದಲೂ ಸರಿಯಾಗಿ ಊಟ, ನಿದ್ದೆ ಮಾಡುತ್ತಿಲ್ಲ. ಆರೋಗ್ಯ ಸೇರಿದಂತೆ ಮಾನಸಿಕ ಸ್ಥಿತಿ ಹೈರಾಣಾಗಿ ಹೋಗಿದೆ ಎಂಬುವುದು ಅವಲ ದಿನಚರಿಯಿಂದಲೇ ತಿಳಿದು ಬರುತ್ತಿದೆ.
ಪ್ರತಿ ದಿನ ಜಿಮ್, ವರ್ಕೌಟ್, ಫಿಲ್ಮ್ ಶೂಟಿಂಗ್ ಎಂದು ಬ್ಯೂಸಿ ಆಗಿರುತ್ತಿದ್ದ ದರ್ಶನ್ ಅವರು ಪರಪ್ಪನ ಅಗ್ರಹಾರಕ್ಕೆ ಬಂದ ನಂತರ ದಿನಚರಿ ತಲೆ ಕೆಳಗಾಗಿದೆ. ಜೈಲಿನಲ್ಲಿ ಜಿಮ್ ಇಲ್ಲ, ಇಷ್ಟವಾದ ಮಾಂಸಹಾರ ಊಟವಿಲ್ಲ. ಇದರಿಂದಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ದರ್ಶನ್ ಕಂಗಾಲಾಗಿದ್ದಾರೆ.

ಜೈಲಿನಲ್ಲಿ ಮಂಗಳವಾರ ಅಥವಾ ಶುಕ್ರವಾರದ ಒಂದು ದಿನದಲ್ಲಿ ಮಾಂಸಹಾರ ಊಟ ನೀಡಲಾಗುತ್ತದೆ. ಜೈಲಿನಲ್ಲಿ ವಾರಕ್ಕೆ ಒಮ್ಮೆ, ಅದು ಕೂಡ ಒಂದೇ ಹೊತ್ತು ಮಾಂಸದೂಟ ಸಿಗುತ್ತದೆ. ಜಿಮ್ ಹಾಗೂ ಮಾಂಸಹಾರ ಇಲ್ಲದ ಕಾರಣ ಈಗ ಅವರ ತೂಕ ಬರೋಬ್ಬರಿ 10 ಕೆಜಿ ಇಳಿಕೆ ಕಂಡಿದೆ. ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿರುವ ಅವರು ದುಗುಡದಿಂದ ಮೌನಕ್ಕೆ ಶರಣಾಗಿದ್ದಾರೆ.
ಅವರನ್ನು ಕಂಡು ಮಾತನಾಡಿಸಲು ಬರುತ್ತಿರುವ ಸಂಬಂಧಿಗಳು ಹಾಗೂ ಸ್ನೇಹಿತರೊಂದಿಗೆ ಕೂಡ ದರ್ಶನ್ ಸರಿಯಾಗಿ ಮಾತನಾಡುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಭದ್ರತಾ ಬ್ಯಾರಕ್ ನ ಕೊಠಡಿಯಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಭೇಟಿ ನೀಡಿದ ಬಳಿಕ ದರ್ಶನ್ ಕೊಂಚ ನಿರಾಳಗೊಂಡಿದ್ದರು. ಮಗನನ್ನು ಅಪ್ಪಿಕೊಂಡು ಅವರು ಕಣ್ಣೀರಿಟ್ಟಿದ್ದರು. ಜೈಲಿನ ಹತ್ತಿರ ನಿರಂತರವಾಗಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ವಿಶೇಷ ಚೇತನ ಅಭಿಮಾನಿ ಕೂಡ ತಂದೆ-ತಾಯಿ ಜೊತೆ ಜೈಲಿನ ಬಳಿ ಬಂದಿದ್ದ ವಿಷಯ ತಿಳಿದು ದರ್ಶನ್ ತುಂಬಾ ಬೇಸರಗೊಂಡು ಕಣ್ಣೀರು ಸುರಿಸಿದ್ದಾರೆ. ಇಷ್ಟೆಲ್ಲ ಆದ ಮೇಲೆಯೂ ಅಭಿಮಾನಿಗಳು ಜೊತೆಗೆ ಇದ್ದಿದ್ದಕ್ಕೆ ತುಂಬಾ ಭಾವುಕರಾಗುತ್ತಿದ್ದಾರೆ.

ಹೀಗಾಗಿಯೇ ಇತ್ತೀಚೆಗೆ ಜೈಲಿನ ಅಧಿಕಾರಿಗಳ ಮುಖಾಂತರ ಅಭಿಮಾನಿಗಳಲ್ಲಿ ದರ್ಶನ್ ಮನವಿ ಮಾಡಿದ್ದರು. ಜೈಲಿನ ಬಳಿ ಅಭಿಮಾನಿಗಳು ಬರುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರು. ದರ್ಶನ್ ಗೆಳತಿ ರಕ್ಷಿತಾ ಪ್ರೇಮ್ ದಂಪತಿ ಜೈಲಿಗೆ ಭೇಟಿ ಸಮಾಧಾನ ಹೇಳಿದ್ದರು. ಅವರ ಆಪ್ತ ವಲಯದಲ್ಲಿದ್ದ ನಾಯಕ ನಟ ವಿನೋದ್ ಪ್ರಭಾಕರ್ ಮುಂತಾದವರು ಕೂಡ ಭೇಟಿ ನೀಡಿದರು. ಆದರೂ ದರ್ಶನ್ ಕಣ್ಣೀರು ಸುರಿಸಿದ್ದಾರೆಯೇ ಹೊರತು, ಯಾರೊಂದಿಗೆ ಬಿಚ್ಚಿ ಮಾತನಾಡಿಲ್ಲ ಎನ್ನಲಾಗುತ್ತಿದೆ.
ಹಿಂದಿನ ವಾರ ದರ್ಶನ್ ಅವರ ಇಡೀ ಫ್ಯಾಮಿಲಿ ಜೈಲಿಗೆ ಭೇಟಿ ನೀಡಿತ್ತು. ತಾಯಿ, ತಮ್ಮ, ಪತ್ನಿ, ಸಹೋದರಿ ಎಲ್ಲರೂ ಜೈಲಿಗೆ ಬಂದಿದ್ದರು. ತಾಯಿ ಮೀನಾ ಅವರನ್ನು ನೋಡಿ ದರ್ಶನ್ ಕಣ್ಣೀರು ಹಾಕಿದ್ದರು. ಅಣ್ಣನನ್ನು ಅಪ್ಪಿಕೊಂಡು ಸಹೋದರ ದಿನಕರ್ ತೂಗುದೀಪ್ ಧೈರ್ಯ ತುಂಬಿದ್ದರು. ಘಟನೆಯ ಕುರಿತು ಕುಟುಂಬಸ್ಥರು ಮಾಹಿತಿ ಪಡೆದುಕೊಂಡು, ಸಮಾಧಾನ ಹೇಳಿದ್ದರು. ಆಗ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದರು. ಜಾಮೀನಿಗೆ ಅರ್ಜಿ ಸಲ್ಲಿಸುವ ಬಗ್ಗೆ ಅವರು ಸಮಾಲೋಚನೆ ಮಾಡಿದರು. ಆದರೂ ಇನ್ನೂ ದರ್ಶನ್ ಮೌನವಾಗಿಯೇ ಉಳಿದಿದ್ದಾರೆ. ಮೌನದಿಂದಲೇ ಏಕಾಂತ ಕಳೆಯುತ್ತಿದ್ದಾರೆ. ಆಡಂಬರದ ಬದುಕು ಕಂಡು ಏಕಾಏಕಿ, ಜೈಲು ಹಕ್ಕಿಯಾಗಿ ಅನಾಥವಾಗಿದ್ದಾರೆ ದರ್ಶನ್.
