ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪರಿಶೀಲನೆ ನಡೆಸಿದ್ದಾರೆ.
ಆಡಳಿತಗಾರರಿಂದ ಸಾಯಿ ಲೇಔಟ್ ಪರಿಶೀಲನೆ:
ನಗರದ ಮಹದೇವಪುರ ವಲಯದ ಸಾಯಿ ಲೇಔಟ್ ಗೆ ಆಡಳಿತಗಾರ ತುಷಾರ್ ಗಿರಿ ನಾಥ್ ಭೇಟಿ ನೀಡಿ ಟ್ರ್ಯಾಕ್ಟರ್ ಮೂಲಕ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಯಿ ಲೇಔಟ್ ಹಾಗೂ ಪಕ್ಕದಲ್ಲಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಾವೃತವಾಗಿದೆ. ಗೆದ್ದಲಹಳ್ಳಿ ಬಳಿ ರೈಲ್ವೆ ವೆಂಟ್ ಅಗಲೀಕರಣ ಮಾಡಬೇಕಿದ್ದು, ಅದಕ್ಕೆ ಈಗಾಗಲೇ ಕಾರ್ಯಾದೇಶ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಹೆಬ್ಬಾಳ ವ್ಯಾಲಿ, ನಾಗವಾರ ಸೇರಿದಂತೆ ಇನ್ನಿತರೆ ಪ್ರದೇಶಗಳಿಂದ ಗೆದ್ದಲಹಳ್ಳಿ ಮೂಲಕ ಹಾದುಹೋಗುವ ರಾಜಕಾಲುವೆಯಲ್ಲಿಯೇ ಮಳೆ ನೀರು ಹೋಗುತ್ತಿದ್ದು, ಸಾಯಿ ಲೇಔಟ್ ಪ್ರದೇಶ ಕೆಳಮಟ್ಟದಲ್ಲಿರುವ ಪರಿಣಾಮ ಜಲಾವೃತವಾಗುತ್ತಿದ್ದು, ಈ ಜಾಗದಲ್ಲಿ ಬಿಟ್ಟು ಬೇರೆ ಜಾಗಗಳಲ್ಲಿ ಜಲಾವೃತವಾಗುತ್ತಿಲ್ಲ ಎಂದು ಹೇಳಿದರು.
ಬಿಡಿಎ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಖಾಸಗಿ ವ್ಯಕ್ತಿ ಕೋರ್ಟ್ ಗೆ ಹೋಗಿರುವ ಪರಿಣಾಮ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಜಲಾವೃತವಾಗಿರುವ ಪ್ರದೇಶದಲ್ಲಿ ನಿವಾಸಿಗಳಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಸತಿ ವ್ಯವಸ್ಥೆ ಕುಡ ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯ ಆಯುಕ್ತರಿಂದ ಬೆಳ್ಳಂದೂರು ಪರಿಶೀಲನೆ:
ಬೆಳ್ಳಂದೂರು ಕೆರೆಯ ಇನ್ಲೆಟ್ ಜಂಕ್ಷನ್ ಬಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ-100, ಕೆ-200 ಬೃಹತ್ ನೀರುಗಾಲುವೆಗಳು ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಗಲೀಕರಣ ಕಡಿಮೆ ಇರುವ ಪರಿಣಾಮ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಮಡಿವಾಳದ ಡಾಲರ್ಸ್ ಕಾಲೋನಿ, ಕೋರಮಂಗಲದ 6ನೇ ಬ್ಲಾಕ್, ಈಜೀಪುರ ಪ್ರದೇಶಗಳು ಜಲಾವೃತವಾಗಿರುತ್ತದೆ.
ಈ ಸಂಬಂಧ ಬೆಳ್ಳಂದೂರು ಬಳಿ ಮಳೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆಸಿಬಿ ಮೂಲಕ ಬಂದ್ ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಕೂಡಲೆ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯಂತ್ರಣ ಕೊಠಡಿಗೆ & ICCC ಗೆ ಭೇಟಿ ನೀಡಿ ಪರಿಶೀಲನೆ:
ಆಡಳಿತಗಾರರು ಹಾಗೂ ಮುಖ್ಯ ಆಯುಕ್ತರು ಕೇಂದ್ರ ಕಚೇರಿಯಲ್ಲಿನ ಇಂಟಿಗ್ರೇಟೆಡ್ ಕಮಾಂಡ್ & ಕಂಟ್ರೋಲ್ ಸೆಂಟರ್ ಹಾಗೂ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ನಿನ್ನೆ ಮಳೆಯಿಂದಾಗಿ ಎಲ್ಲೆಲ್ಲಿ ಸಮಸ್ಯೆಗಳಾಗಿವೆ ಎಂಬುವುದನ್ನು ವೀಕ್ಷಿಸಿ ಎಲ್ಲ ವಲಯ ಅಧಿಕಾರಿಗಳಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದ್ದಾರೆ.
ಈ ವೇಳೆ ಬಿಡಿಎ ಆಯುಕ್ತರಾದ ಜಯರಾಮ್, ಮುಖ್ಯ ಅಭಿಯಂತರ ರಂಗನಾಥ್, ರಾಜೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.