ಜನರಿಗೆ ಗೊಂದಲ..ವಿಪಕ್ಷಗಳಿಗೆ ರಸದೌತಣ..ಪಕ್ಷದಲ್ಲಿದ್ದವರಿಗೆ ಮುಜುಗುರ…ನಾಯಕರಿಗೆ ತಲೆ ಚಚ್ಚಿಕೊಳ್ಳುವಷ್ಟು ಕೋಪ..ಆಂತರಿಕ ವಿರೋಧಿಗಳಿಗೆ ಮುಸಿಮುಸಿ ನಗು…ಹೌದು! ಇದು ಸದ್ಯದ ಕಾಂಗ್ರೆಸ್ ಸರ್ಕಾರದ ಫಜೀತಿಯಾಗಿದೆ. ಈ ಸನ್ನಿವೇಶದಿಂದ ಪಕ್ಷವನ್ನು ತರುವುದಕ್ಕಾಗಿ ಹೈಕಮಾಂಡ್ ಈಗ ಮಧ್ಯಸ್ಥಿಕೆ ವಹಿಸಿದೆ.
ಸ್ವಪಕ್ಷದವರಿಂದಲೇ ಸರ್ಕಾರ ಬೆತ್ತಲೆ
ಸರ್ಕಾರವನ್ನು ಬೀದಿಗೆ ತಂದು ಜನರ ಮುಂದೆ ಬೆತ್ತಲೆ ಮಾಡಬೇಕೆಂಬುವುದು ವಿರೋಧ ಪಕ್ಷಗಳ ಗುರಿಯಾಗಿರುತ್ತದೆ. ಆದರೆ, ಅದಕ್ಕೆ ವಿರೋಧಿಗಳೇ ದಾರಿ ಮಾಡಿಕೊಟ್ಟರೆ ಇನ್ನೂ ಖುಷಿಯಾಗುತ್ತದೆ. ಅಂತಹ ಪರಿಸ್ಥಿತಿ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಬಂದೋದಗಿದೆ. ಕಾಂಗ್ರೆಸ್ ನಾಯಕರೇ ಬಿಜೆಪಿಗೆ ವಿರೋಧ ಮಾಡುವುದಕ್ಕೆ ವಿಷಯಗಳನ್ನು ತಂದು ನೀಡುತ್ತಿದ್ದಾರೆ. ಹೀಗಾಗಿ ಪಕ್ಷಕ್ಕೆ ದೊಡ್ಡ ಮಟ್ಟದ ಮುಜುಗುರ ಉಂಟಾಗುತ್ತಿದೆ.
ಭ್ರಷ್ಟಾಚಾರ, ಅಭಿವೃದ್ಧಿಗೆ ಹಣ ಇಲ್ಲದಿರುವುದು, ಆಡಳಿತದ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಕಾಂಗ್ರೆಸ್ ಶಾಸಕರೇ ಟೀಕೆ ಮಾಡುತ್ತಿದ್ದಾರೆ. ಇದು ಪಕ್ಷಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾಯಕರಿಗೆ ಮುಜುಗುರ ಉಂಟು ಮಾಡುತ್ತಿದೆ. ಸೋಮವಾರ ಹೈಕಮಾಂಡ್ ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೂ ಇದೇ ವಿಚಾರ ಮುಜುಗುರಕ್ಕೆ ಕಾರಣವಾಗಿ, ಹೈಕಮಾಂಡ್ ಜೊತೆ ಕೂಡ ಈ ವಿಷಯ ಚರ್ಚಿಸಿದ್ದಾರೆ. ಈ ವಿಷಯವಾಗಿ ಹೈಕಮಾಂಡ್ ಬೇಸರ ವ್ಯಕ್ತಪಡಿಸಿದೆ ಎನ್ನಲಾಗಿದೆ. ಹೀಗಾಗಿ ಪಕ್ಷದ ನಿಷ್ಠೆ ಮರೆತವರ ಬಾಯಿ ಮುಚ್ಚಿಸುವಂತೆ ಖಡಕ್ ಆಗಿ ತಾಕೀತು ಮಾಡಿದೆ.
ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವರ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಸಿದ್ದರಾಮಯ್ಯ ಹಾಗೂ ಅವರ ತಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಭೇಟಿಯಾಗಿದ್ದರು. ಈ ವೇಳೆ ವರಿಷ್ಠರು ಪಕ್ಷದಲ್ಲಿನ ಕೆಲವರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದ್ದೇವೆ. ಆ ರೀತಿ ಪಕ್ಷದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಬೇಕು.
ಇಲ್ಲವಾದರೆ ಸರ್ಕಾರ ಹಾಗೂ ಪಕ್ಷ, ವಿರೋಧಿಗಳ ಬಾಯಿಗೆ ಆಹಾರವಾಗುತ್ತದೆ. ಜನರ ಮುಂದೆ ಬೆತ್ತಲೆಯಾಗಿ ನಿಲ್ಲಬೇಕಾಗುತ್ತದೆ. ಎಷ್ಟೇ ಉತ್ತಮ ಯೋಜನೆಗಳನ್ನು ಜಾರಿಗೆ ತಂದರೂ ಪಕ್ಷದವರೇ ಹೇಳುವ ಹೇಳಿಕೆಗಳು ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಮಾಡುತ್ತವೆ. ಪಕ್ಷದಿಂದ ಏನೂ ಆಗುತ್ತಿಲ್ಲ ಎಂಬ ಸಂದೇಶವನ್ನು ಜನರಿಗೆ ನೀಡಿದಂತಾಗುತ್ತದೆ. ಹಲವರು ಸರ್ಕಾರದ ಬಳಿ ದುಡ್ಡಿಲ್ಲ ಎಂಬುವುದನ್ನು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ಖಡಕ್ ವಾರ್ನಿಂಗ್ ನೀಡಿ, ಬಾಯಿ ಮುಚ್ಚಿಕೊಂಡು ಇರುವಂತೆ ಸೂಚಿಸಬೇಕು ಎಂದು ಹೈಕಮಾಂಡ್ ಖಡಕ್ ವಾರ್ನಿಂಗ್ ನೀಡಿದೆ ಎನ್ನಲಾಗಿದೆ.
ವಸತಿ ಇಲಾಖೆಯಲ್ಲಿನ ನಿವೇಶನ ಹಂಚಿಕೆಯ ವಿಚಾರ, ಚರಂಡಿ ದುರಸ್ಥಿಯೂ ಆಗುತ್ತಿಲ್ಲ. ರಸ್ತೆ ದುರಸ್ಥಿಯಾಗುತ್ತಿಲ್ಲ. ಅನುದಾನ ಇಲ್ಲ. ಸರ್ಕಾರದ ಬಳಿ ದುಡ್ಡೇ ಇಲ್ಲ. ಎಲ್ಲವೂ ಗ್ಯಾರಂಟಿಗೆ ಹೋಗುತ್ತಿವೆ. ನಮಗೆ ಅನುದಾನ ಬರುತ್ತಿಲ್ಲ ಎಂಬ ಹೇಳಿಕೆಯನ್ನು ಯಾರೂ ನೀಡದಂತೆ ನೋಡಿಕೊಳ್ಳಬೇಕು ಎಂದು ಹೈಕಮಾಂಡ್ ನಾಯಕರ ಕಿವಿಗೆ ಚುಚ್ಚಿ ಕಳುಹಿಸಿದೆ.
ಶಾಸಕರ ಹೇಳಿಕೆ ಪಕ್ಷಕ್ಕೆ ಆಗುತ್ತಿದೆ ಡ್ಯಾಮೇಜ್
ಇತ್ತೀಚೆಗಷ್ಟೇ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ, ಎನ್. ವೈ. ಗೋಪಾಲಕೃಷ್ಣ ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಇದು ಪಕ್ಷಕ್ಕೆ ತೀವ್ರ ಮುಜುಗುರ ಉಂಟಾಗಿ ವಿರೋಧಿಗಳಿಗೆ ಸರದೌತಣ ಸಿಕ್ಕಂತಾಗಿದೆ. ಪಕ್ಷದಲ್ಲಿನ ಶಾಸಕರು ಹೇಳಿದ್ದನ್ನೇ ಉದಾಹರಣೆಯಾಗಿ ಮುಂದಿಟ್ಟುಕೊಂಡು ಜನರ ಮುಂದೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಯತ್ನಿಸುತ್ತಿವೆ.
ಈ ಎಲ್ಲ ಕಾರಣಗಳಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ ಸಿಎಂ ಹಾಗೂ ಅವರ ತಂಡಕ್ಕೆ ಹೈಕಮಾಂಡ್ ಖಡಕ್ ವಾರ್ನಿಂಗ್ ನೀಡಿದೆ. ಪಕ್ಷದಲ್ಲಿ ಆಂತರಿಕವಾಗಿ ಸಮಸ್ಯೆ ಏನೇ ಇದ್ದರೂ ಪಕ್ಷದ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಹೀರೋ ಆಗೋಕೆ ಯತ್ನಿಸಿದಂತೆ ನೋಡಿಕೊಳ್ಳಬೇಕು. ವಿರೋಧ ಪಕ್ಷದವರ ಬಾಯಿಗೆ ಪಕ್ಷ ಹಾಗೂ ಸರ್ಕಾರ ಆಹಾರವಾಗದಂತೆ ನೋಡಿಕೊಳ್ಳಬೇಕು. ಸರ್ಕಾರದ ಬಳಿ ಹಣ ಇಲ್ಲ ಎಂಬುವುದನ್ನು ಜನರ ಮನದಾಳದಲ್ಲಿ ಬೇರೂರುವಂತೆ ಮಾಡಬಾರದು ಎಂದು ಹೈಕಮಾಂಡ್ ಕಟ್ಟಪ್ಪಣೆ ನೀಡಿದೆ.
ಅಲ್ಲದೇ, ಅನುದಾನ ಹಂಚಿಕೆ ವಿಚಾರದಲ್ಲಿ ಶಾಸಕರಲ್ಲಿ ವಿಶ್ವಾಸ ತುಂಬಬೇಕು. ಯಾವುದೇ ಕಾರಣಕ್ಕೆ ಪಕ್ಷ ನಿಮ್ಮೊಂದಿಗೆ ಇರುತ್ತದೆ ಎಂಬುವುದನ್ನು ಮನವರಿಕೆ ಮಾಡಿಕೊಡಬೇಕು. ಹಲವಾರು ಶಾಸಕರಿಗೆ ಸಚಿವರ ಬಗ್ಗೆ ಅಪಸ್ವರ ಇರುವದರಿಂದ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು. ನಕಾರಾತ್ಮಕ ಚರ್ಚೆಯ ವಿಷಯವನ್ನು ಪಕ್ಷದ ಅಂಗಳದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ಕೈಗೊಳ್ಳಬೇಕು. ಆರೋಪ ಬಂದ ಕೂಡಲೇ ಅದಕ್ಕೆ ಸ್ಪಷ್ಟನೆ ನೀಡಬೇಕು. ವಿರೋಧ ಪಕ್ಷದವರ ಹೇಳಕೆಗಳಿಗೆ ತಡ ಮಾಡದೆ ಸ್ಪಷ್ಟನೆ ನೀಡಬೇಕು ಎಂದು ಹೈಕಮಾಂಡ್ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಕಿವಿ ಮಾತು ಹೇಳಿದೆ.