ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧವು ಕೇವಲ ಭೌಗೋಳಿಕ ಸಂಘರ್ಷವಾಗಿ ಉಳಿಯುವ ಬದಲಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಚ್ಚಾ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ಮೂಲಸೌಕರ್ಯಗಳ ಮೇಲಿನ ದಾಳಿಯಿಂದಾಗಿ, ಈ ಯುದ್ಧವು ನಾಳೆಯೇ ಅಂತ್ಯಗೊಂಡರೂ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ತಕ್ಷಣಕ್ಕೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಬಿಕ್ಕಟ್ಟು ಆರಂಭವಾಗುವುದಕ್ಕೂ ಮುನ್ನ ಪ್ರತಿ ಬ್ಯಾರೆಲ್ಗೆ 60 ರಿಂದ 70 ಡಾಲರ್ ಆಸುಪಾಸಿನಲ್ಲಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ, ಇದೀಗ 100 ಡಾಲರ್ ಗಡಿ ದಾಟಿದ್ದು 110 ಡಾಲರ್ ಬಳಿ ವಹಿವಾಟು ನಡೆಸುತ್ತಿದೆ. ಕೇವಲ ಕೆಲವೇ ವಾರಗಳಲ್ಲಿ ತೈಲ ಬೆಲೆಯಲ್ಲಿ ಶೇಕಡಾ 50 ರಿಂದ 60 ರಷ್ಟು ಭಾರೀ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಅಂದಾಜಿನ ಪ್ರಕಾರ, ಈ ಯುದ್ಧದ ತೀವ್ರತೆಯಿಂದಾಗಿ ಪ್ರತಿದಿನ ಬರೋಬ್ಬರಿ ಎಂಟರಿಂದ ಹತ್ತು ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಅಡ್ಡಿಯಾಗಿದೆ. ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ ಕೇವಲ ಉತ್ಪಾದನೆ ಮಾತ್ರವಲ್ಲದೆ, ಇಡೀ ಪೂರೈಕಾ ವ್ಯವಸ್ಥೆಯೇ ಹದಗೆಟ್ಟಿದೆ. ಅಮೆರಿಕದ ಇಂಧನ ಮಾಹಿತಿ ಆಡಳಿತದ (EIA) ಪ್ರಕಾರ, ವಿಶ್ವದ ಶೇ.20ರಷ್ಟು ಕಚ್ಚಾ ತೈಲ ವ್ಯಾಪಾರ ನಡೆಯುವ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಬಿಗಿ ಹಿಡಿತ ಸಾಧಿಸಿದೆ. ಅಮೆರಿಕದ ಡೊನಾಲ್ಡ್ ಟ್ರಂಪ್ ಅವರು ಜಲಸಂಧಿಯನ್ನು ಮುಕ್ತಗೊಳಿಸುವಂತೆ ಕಠಿಣ ಎಚ್ಚರಿಕೆಗಳನ್ನು ನೀಡುತ್ತಿದ್ದರೂ, ಮಾರ್ಗವು ಇನ್ನೂ ಸುಗಮವಾಗಿಲ್ಲ. ಇದರಿಂದಾಗಿ ತೈಲ ಸಾಗಣೆ ಹಡಗುಗಳು ಬೇರೆ ಮಾರ್ಗಗಳನ್ನು ಹುಡುಕಬೇಕಾಗಿದ್ದು, ಸಾಗಣೆ ವಿಳಂಬವಾಗುತ್ತಿದೆ ಹಾಗೂ ವಿಮೆ ಮತ್ತು ಸಾರಿಗೆ ವೆಚ್ಚಗಳು ಗಗನಕ್ಕೇರಿವೆ.
ದಶಕಗಳಲ್ಲೇ ಅತಿ ದೊಡ್ಡ ತೈಲ ಬಿಕ್ಕಟ್ಟು
ಪ್ರಸ್ತುತ ಉಂಟಾಗಿರುವ ಈ ಬಿಕ್ಕಟ್ಟನ್ನು ಇತ್ತೀಚಿನ ಇತಿಹಾಸದಲ್ಲೇ ಅತಿ ದೊಡ್ಡ ತೈಲ ಪೂರೈಕೆ ಆಘಾತ ಎಂದು ಐಇಎ ಬಣ್ಣಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಯುದ್ಧದ ಅವಧಿ ಹಾಗೂ ಮೂಲಸೌಕರ್ಯಗಳಿಗೆ ಆಗಿರುವ ಹಾನಿಯ ಪ್ರಮಾಣವು ಮುಂಬರುವ ದಿನಗಳ ಆರ್ಥಿಕತೆಯ ದಿಕ್ಕನ್ನು ನಿರ್ಧರಿಸಲಿದೆ ಎಂದು ಹೇಳಿದೆ. ಸದ್ಯಕ್ಕೆ ತುರ್ತು ತೈಲ ಸಂಗ್ರಹಗಳನ್ನು ಬಳಸುವ ಮೂಲಕ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ನಿಭಾಯಿಸಲಾಗುತ್ತಿದ್ದರೂ, ಇದು ಅಲ್ಪಾವಧಿಯ ಪರಿಹಾರವಷ್ಟೇ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿನ ಅನೇಕ ತೈಲ ಸಂಸ್ಕರಣಾ ಕೇಂದ್ರಗಳು ಹಾನಿಗೀಡಾಗಿದ್ದು, ಯುದ್ಧ ನಿಂತರೂ ಅವುಗಳನ್ನು ಮರುನಿರ್ಮಾಣ ಮಾಡಿ, ಹಳೆಯ ಸ್ಥಿತಿಗೆ ತರಲು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು. ಒಪೆಕ್ (OPEC) ರಾಷ್ಟ್ರಗಳಲ್ಲೂ ಬಿಕ್ಕಟ್ಟು ನಿಭಾಯಿಸುವಷ್ಟು ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವಿಲ್ಲದಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ. ಹೀಗಾಗಿ ಯುದ್ಧ ನಿಂತರೂ ತೈಲ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಭಾರತದ ಮೇಲೆ ಪರಿಣಾಮ
ಕಚ್ಚಾ ತೈಲದ ಬೆಲೆ ಏರಿಕೆಯ ಬಿಸಿ ಕೇವಲ ಇಂಧನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ರಸಗೊಬ್ಬರ, ಕೃಷಿ, ವಿಮಾನಯಾನ ಮತ್ತು ಉತ್ಪಾದನಾ ವಲಯಗಳ ಮೇಲೂ ತೀವ್ರ ಒತ್ತಡ ಬೀಳುತ್ತಿದೆ. ಇದು ನೇರವಾಗಿ ಆಹಾರ ಹಣದುಬ್ಬರಕ್ಕೆ ದಾರಿಮಾಡಿಕೊಡುತ್ತಿದೆ. ಭಾರತದಂತಹ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ ಇದು ನುಂಗಲಾರದ ತುತ್ತಾಗಿದೆ. ದುಬಾರಿ ತೈಲವು ದೇಶದ ವ್ಯಾಪಾರ ಕೊರತೆಯನ್ನು ವಿಸ್ತರಿಸುವುದಲ್ಲದೆ, ಹಣದುಬ್ಬರವನ್ನು ಏರಿಸಿ ರೂಪಾಯಿ ಮೌಲ್ಯದ ಮೇಲೆ ತೀವ್ರವಾದ ಪೆಟ್ಟು ನೀಡಲಿದೆ. ಒಟ್ಟಾರೆಯಾಗಿ, ಜಾಗತಿಕ ಮಾರುಕಟ್ಟೆಯು ಈ ಹಠಾತ್ ಆಘಾತದಿಂದ ಸುಧಾರಿಸಿಕೊಳ್ಳಲು ಇನ್ನೂ ಬಹಳಷ್ಟು ಸಮಯ ಬೇಕಾಗಲಿದ್ದು, ಯುದ್ಧ ಮುಗಿದರೂ ದುಬಾರಿ ತೈಲದ ಬಿಸಿ ಮಾತ್ರ ಜಗತ್ತನ್ನು ಕಾಡಲಿದೆಯೆಂಬುದು ಸ್ಪಷ್ಟ.
ಇದನ್ನೂ ಓದಿ : ರಾಷ್ಟ್ರೀಯ ಆರೋಗ್ಯ ಮಿಷನ್ನಲ್ಲಿ 35 ಹುದ್ದೆಗಳ ನೇಮಕಾತಿ.. ಸಂದರ್ಶನದ ದಿನಾಂಕ ಇಲ್ಲಿದೆ!



















