ನವದೆಹಲಿ: ಔಪಚಾರಿಕ ಅನುಮೋದನೆ ಪಡೆಯದೆಯೇ ಪಾಕಿಸ್ತಾನಿ ಯುವತಿಯನ್ನು ವಿವಾಹವಾದ ಸಿಆರ್ಪಿಎಫ್ ಯೋಧ ಮುನೀರ್ ಅಹ್ಮದ್ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಮುನೀರ್ ಅವರ ಈ ನಡೆಯು ಕಾರ್ಯವಿಧಾನದ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಮೂಡಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ 41 ನೇ ಬೆಟಾಲಿಯನ್ ನಲ್ಲಿ ನಿಯೋಜಿತರಾಗಿರುವ ಕಾನ್ ಸ್ಟೇಬಲ್ ಮುನೀರ್ ಈ ಹಿಂದೆ ಮೇನಾಲ್ ಖಾನ್ ಎಂಬ ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಲು ಅನುಮತಿ ಕೋರಿ ಮನವಿಯನ್ನು ಸಲ್ಲಿಸಿದ್ದರು ಎಂದು ಸಿಆರ್ಪಿಎಫ್ ತಿಳಿಸಿದೆ. ಆದಾಗ್ಯೂ, ಇಲಾಖೆಯು ಅನುಮೋದನೆ ನೀಡುವ ಮೊದಲೇ, ಮುನೀರ್ ಅವರು ಮೇ 24, 2024 ರಂದು ವಾಟ್ಸಾಪ್ ವೀಡಿಯೊ ಕರೆ ಮೂಲಕ ಅದೇ ಪಾಕಿಸ್ತಾನಿ ಯುವತಿಯನ್ನು ವಿವಾಹವಾದರು ಎಂದು ವರದಿಯಾಗಿದೆ. ಈ ಅನಧಿಕೃತ ನಡೆಯ ಹಿನ್ನೆಲೆಯಲ್ಲಿ ಔಪಚಾರಿಕ ಪರಿಶೀಲನೆ ಮತ್ತು ಶಿಸ್ತು ಪ್ರಕ್ರಿಯೆಗೆ ಸಿಆರ್ಪಿಎಫ್ ಮುಂದಾಗಿದೆ.

ಪಾಕಿಸ್ತಾನಿ ಹುಡುಗಿಯೊಂದಿಗಿನ ಮದುವೆ ವಿಚಾರ ಹಾಗೂ ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವುದರಿಂದ ಮುನೀರ್ ಅವರ ಕೋರಿಕೆಯನ್ನು ಸಿಆರ್ಪಿಎಫ್, ಪತ್ರದ ಮೂಲಕ ಪ್ರಸ್ತಾಪವನ್ನು ಜಮ್ಮು ಕಾಶ್ಮೀರ ವಲಯದ ಪ್ರಧಾನ ಕಚೇರಿಗೆ ಸಲ್ಲಿಸಿತ್ತು ಎನ್ನಲಾಗಿದೆ.
ವರದಿಯ ಪ್ರಕಾರ, ಕಾನ್ಸ್ಟೇಬಲ್ ಮುನೀರ್ ನಡವಳಿಕೆಯಲ್ಲಿ ಹಲವಾರು ಲೋಪಗಳು ಕಂಡುಬಂದಿವೆ. ಅಲ್ಲದೇ ಅವರ ಪತ್ನಿ ವೀಸಾದ ಸಿಂಧುತ್ವದ ಅವಧಿ ಮೀರಿ ಭಾರತದಲ್ಲೇ ವಾಸ ಮುಂದುವರಿಸಿರುವ ಬಗ್ಗೆ ಇಲಾಖೆಗೆ ತಿಳಿಸಲು ವಿಫಲರಾಗಿರುವುದು ಮತ್ತು ನ್ಯಾಯಾಲಯದ ಕಲಾಪಗಳಲ್ಲಿ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿರುವುದು ಕೂಡ ಕಂಡುಬಂದಿದೆ.
ವರದಿಯ ಪ್ರಕಾರ, ಮುನೀರ್ ಅಹ್ಮದ್ ಹಲವು ವಿಚಾರಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿಲ್ಲ. “ಪಾಕಿಸ್ತಾನಿ ಹುಡುಗಿಯೊಂದಿಗೆ ಮದುವೆಗೆ ಅನುಮತಿ ನೀಡುವ ವಿಚಾರವು ಇಲಾಖೆಯಲ್ಲಿ ಅಂದರೆ ಸಿಆರ್ಪಿಎಫ್ ನಲ್ಲಿ ಬಾಕಿ ಉಳಿದಿದೆ. ಆದರೆ ಮುನೀರ್ ಅಹ್ಮದ್ ಇಲಾಖೆಯ ನಿರ್ಧಾರ / ಅನುಮತಿಗಾಗಿ ಕಾಯದೆ ಮೇನಾಲ್ ಖಾನ್ ಅವರನ್ನು ವಿವಾಹವಾಗಿದ್ದಾರೆ” ಎಂದು ಸಿಆರ್ ಪಿಎಫ್ ವರದಿ ತಿಳಿಸಿದೆ.
“ಮುನೀರ್ ಅಹ್ಮದ್ ಅವರ ಪತ್ನಿ ಮೆನಾಲ್ ಖಾನ್ ಅವರು ಪಾಕಿಸ್ತಾನದ ಪಾಸ್ಪೋರ್ಟ್ ಮೂಲಕ ಪ್ರವಾಸಿ ವೀಸಾದಲ್ಲಿ ವಾಘಾ ಗಡಿಯಿಂದ ಭಾರತದ ಪ್ರವೇಶಿಸಿದ್ದರು.ಈ ವೀಸಾ 22/03/2025 ರವರೆಗೆ ಮಾನ್ಯವಾಗಿತ್ತು. ಆದರೆ ವೀಸಾ ಅವಧಿ ಮುಗಿದ ನಂತರವೂ ಅವರ ಪತ್ನಿ ಇನ್ನೂ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂಬ ವಿಚಾರವನ್ನು ಮುನೀರ್ ಇಲಾಖೆಗೆ ತಿಳಿಸಿಲ್ಲ. ಇದಲ್ಲದೆ, ತನ್ನ ಪತ್ನಿ ದೀರ್ಘಾವಧಿ ವೀಸಾಗೆ ಅರ್ಜಿ ಸಲ್ಲಿಸಿದ್ದಾಳೆ ಎಂದು ಅವರು ಹೇಳಿದ್ದಾರೆ. ಆದರೆ ಈ ಸಂಗತಿಯನ್ನೂ ವೈಯಕ್ತಿಕವಾಗಿ ಇಲಾಖೆಗೆ ತಿಳಿಸಲಾಗಿಲ್ಲ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತನ್ನ ಮದುವೆಯ ಬಗ್ಗೆ ಸಿಆರ್ಪಿಎಫ್ಗೆ ಮಾಹಿತಿ ನೀಡಿದ್ದಾಗಿ ಕಾನ್ಸ್ಟೇಬಲ್ ಮುನೀರ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಂತಹ ಯಾವುದೇ ಅನುಮೋದನೆಯನ್ನು ನೀಡಲಾಗಿಲ್ಲ ಎಂದು ಸಿಆರ್ಪಿಎಫ್ ತನ್ನ ವರದಿಯಲ್ಲಿ ತಿಳಿಸಿದೆ. “ವಾಟ್ಸಾಪ್ ಕರೆ ಮೂಲಕ ಮದುವೆಯನ್ನು ಡಿಜಿಟಲ್ ಆಗಿ ನಡೆಸಲಾಯಿತು. ಇದು ನಿಯಮದ ಉಲ್ಲಂಘನೆಯಾಗಿದೆ. ತನ್ನ ಪಾಕಿಸ್ತಾನಿ ಸಂಗಾತಿಯ ಉಪಸ್ಥಿತಿ ಮತ್ತು ವೀಸಾ ಸ್ಥಿತಿಯನ್ನು ಬಹಿರಂಗಪಡಿಸಲೂ ಅವರು ವಿಫಲರಾಗಿರುವುದು ಸಂಭಾವ್ಯ ಭದ್ರತಾ ಕಳವಳವನ್ನುಂಟು ಮಾಡುತ್ತದೆ” ಎಂದೂ ವರದಿ ಹೇಳಿದೆ.
ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗಡೀಪಾರು ಮಾಡಲು ಭಾರತ ಸರ್ಕಾರ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ, ಯೋಧ ಮುನೀರ್ ಅವರ ಪತ್ನಿ ಖಾನ್ ಅವರೂ ಗಡೀಪಾರು ಭೀತಿ ಎದುರಿಸಿದ್ದು, ವಾಪಸ್ ಪಾಕಿಸ್ತಾನಕ್ಕೆ ತೆರಳಲೆಂದು ವಾಘಾ ಗಡಿಗೆ ಬಂದಾಗ ಈ ವಿಚಾರ ಭಾರೀ ಸುದ್ದಿಯಾಯಿತು. ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಏಪ್ರಿಲ್ 29, 2025 ರಂದು ಅವರ ಗಡೀಪಾರಿಗೆ 10 ದಿನಗಳ ತಡೆಯಾಜ್ಞೆಯನ್ನು ನೀಡಿತು.
ಆದರೆ, ಸಿಸಿಎಸ್ (ನಡವಳಿಕೆ) ನಿಯಮಗಳು, 1964ರ ನಿಯಮ 21 (3) ರ ಅಡಿಯಲ್ಲಿ ಕಾನ್ಸ್ಟೇಬಲ್ ನಡವಳಿಕೆಯು ನಮ್ಮ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಸ್ಪಷ್ಟವಾಗಿಸಿದೆ. ಹೀಗಾಗಿ ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮವನ್ನು ಪರಿಗಣಿಸಲಾಗುತ್ತಿದೆ ಎಂದು ಸಿಆರ್ಪಿಎಫ್ ಹೇಳಿದೆ.