ಹಾವೇರಿ: ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಆಚಾರ- ವಿಚಾರಗಳಿವೆ. ದೇವರ ಮೇಲೆ ಅಪಾರವಾದ ನಂಬಿಕೆಯಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ದೇವರ ಹೆಸರಿನಲ್ಲಿ ನಾಟಕವಾಡಿ ನಂಬಿಕೆ ಹಾಳು ಮಾಡುತ್ತಿದ್ದಾರೆ. ಇಲ್ಲೊಂದು ಕಡೆ ದೇವರು ಮೈಮೇಲೆ ಬಂದಂತೆ ಹೈಡ್ರಾಮ್ ಸೃಷ್ಟಿಸಿ ಒಂದು ಕುಟುಂಬವನ್ನೇ ಹಾಳು ಮಾಡಿದ್ದಾರೆ.
ಜಿಲ್ಲೆಯ ಕಬ್ಬೂರು ಗ್ರಾಮದಲ್ಲಿ ವಿಚಿತ್ರವಾದ ಘಟನೆ ನಡೆದಿದೆ. 1 ವರ್ಷದ ಹಿಂದಷ್ಟೇ ಮೃತ್ಯುಂಜಯ ಮತ್ತು ಚೇತನಾ ಎಂಬ ಜೋಡಿ ಮದುವೆಯಾಗಿತ್ತು. ಮದುವೆಯಾದ ಹೊಸದರಲ್ಲಿ ಗಂಡ – ಹೆಂಡತಿ ಆಗಾಗ ಜಗಳ ಆಗಿ ಇಬ್ಬರ ಮಧ್ಯೆ ಬಿರುಕು ಮೂಡಿತ್ತು. ಈ ಸಮಸ್ಯೆಗೆ ಪಾರವ್ವ ಎಂಬ ಅಜ್ಜಿ ಪರಿಹಾರ ನೀಡುತ್ತಾಳೆ ಎಂದು ನಂಬಿ ಕಬ್ಬರೂ ಗ್ರಾಮಕ್ಕೆ ತೆರಳಿದ್ದಾರೆ.
ಆಗ ದೇವರು ಮೈಮೇಲೆ ಬಂದಂತೆ ಹೇಳಿ ಪಾರವ್ವ ಚೇತನಾಳಿಗೆ ಗಂಡನ ಮನೆಗೆ ತೆರಳಬೇಡ ಅಪಾಯವಿದೆ ಎಂದು ಹೇಳಿಕೆ ನೀಡಿದ್ದರು. ಇದು ಸ್ವತಃ ದೇವರೇ ನೀಡಿರುವ ಹೇಳಿಕೆ ಎಂದು ಭಾವಿಸಿ ಚೇತನಾ ಗಂಡನ ಮನೆಯನ್ನು ತೊರೆದಿದ್ದಳು.. ಇದೀಗ ಪತಿ ಮೃತ್ಯುಂಜಯ ನ್ಯಾಯಕ್ಕಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿ ಹಾವೇರಿ ಶಹರಾ ಠಾಣೆಗೆ ದೂರು ನೀಡಿದ್ದಾರೆ. ದೇವರ ಹೇಳಿಕೆ ಅಂತ ಹೈಡ್ರಾಮ್ ಸೃಷ್ಟಿಸಿರುವ ಪಾರವ್ವ ಮತ್ತು ಆಕೆ ಪುತ್ರ ಸೇರಿ 8 ಜನರ ವಿರುದ್ಧ ದೂರು ದಾಖಲಾಗಿದೆ.