ಆರ್ ಸಿಬಿ 11 ಅಮಾಯಕ ಅಭಿಮಾನಿಗಳ ಜೀವ ಹಿಂಡಿದ ಸಂಭ್ರಮೋತ್ಸವ ಪ್ರಕರಣದಲ್ಲಿ ತಲೆದಂಡ ಪರ್ವ ಮುಂದುವರಿದಿದೆ. ನಿನ್ನೆಯಷ್ಟೇ ಬೆಂಗಳೂರು ನಗರ ಆಯುಕ್ತರನ್ನು ಇತಿಹಾಸದಲ್ಲೇ ಮೊದಲ ಬಾರಿ ಅಮಾನತು ಮಾಡಿ ಚರಿತ್ರೆ ಸೃಷ್ಟಿಸಿದ್ದ ಸಿದ್ದು ಸರ್ಕಾರ ಮತ್ತೊಮ್ಮೆ ಕಠಿಣ ನಿರ್ಧಾರದ ಹಾದಿ ಹಿಡಿದಿದೆ.
ಹೌದು! ಈ ಬಾರಿ ಈ ತೂಗುಗತ್ತಿಗೆ ಬಲಿಯಾದವರು ಬೇರಾರು ಅಲ್ಲ, ಸಿಎಂ ಸಿದ್ದರಾಮಯ್ಯರ ಹಿಂದೆ ಮುಂದೆಯೇ ಅಂಟಿಕೊಂಡು ಓಡಾಡುತ್ತಿದ್ದ ಪರಮಾಪ್ತ ಕೆ. ಗೋವಿಂದರಾಜುರನ್ನು ಅವರ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜುರನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಜವಾಬ್ದಾರಿಯಿಂದ ವಿಮುಕ್ತಗೊಳಿಸಲಾಗಿದೆ.
ವಿಧಾನಸೌಧ ಕಾರ್ಯಕ್ರಮಕ್ಕೆ ಸಮ್ಮತಿಸಿರಲಿಲ್ಲವಾ ಸಿಎಂ?
ಸಿದ್ದರಾಮಯ್ಯರ ಮೇಲೆ ಒತ್ತಡ ಹೇರಿ ಪೇಚಿಗೆ ಸಿಲುಕಿದ ಆಪ್ತ
ಆರ್ ಸಿಬಿ ಕಪ್ ಗೆದ್ದ ಸಂಭ್ರಮೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧಿಸಿದ್ದರು ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ವಿಧಾನಸೌಧ ಮುಂಭಾಗದಲ್ಲಿ ಯಾವ ಕಾರಣಕ್ಕೂ ವಿಜಯೋತ್ಸವ ಬೇಡವೇ ಬೇಡ ಅಂತಾ ಅಂದಿದ್ದರಂತೆ ಸಿಎಂ. ಅಷ್ಟಕ್ಕೂ ಸಿಎಂ ಆಪ್ತ ವಲಯದ ಹಿರಿಯ ಅಧಿಕಾರಿಗಳು ಕೂಡ ವಿಧಾನಸೌಧದ ಮುಂದೆ ಬೇಡ, ತುಂಬಾ ರಿಸ್ಕ್, ಅನಗತ್ಯ ಸಮಸ್ಯೆ ಸೃಷ್ಟಿಯಾಗೋ ಸಾಧ್ಯತೆಗಳಿವೆ ಅಂತಾ ತಿಳಿಸಿ ಹೇಳಿದ್ದರಂತೆ.
ಆದರೆ, ಸದಾ ಸಿಎಂ ಜೊತೆ ಜೊತೆಯೇ ಇರುವ ಮಿಸ್ಟರ್ ಗೋವಿಂದರಾಜು ಮಾತ್ರ ತಮ್ಮ ಪ್ರತಿಷ್ಠೆ ಪ್ರಶ್ನೆಗೆ ವಿಧಾನಸೌಧವೇ ಆಗಬೇಕು ಅಂತಾ ಪಟ್ಟು ಹಿಡಿದಿದ್ದರಂತೆ. ಹಾಗೆ ನೋಡಿದರೆ ಕ್ರೀಡಾ ವಲಯದೊಂದಿಗೆ ಮೊದಲಿಂದ ನಂಟು ಹೊಂದಿರುವ ಗೋವಿಂದರಾಜು ಹಾಲಿ ಬ್ಯಾಸ್ಕೆಟ್ ಬಾಲ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
ಇದೇ ಗೋವುಂದರಾಜು, ಸಿಎಂ ಮೇಲೆ ಇನ್ನಿಲ್ಲದ ಒತ್ತಡ ಹೇರಿಯೇ ವಿಧಾನಸೌಧದ ಮುಂದೆ ಸನ್ಮಾನ ಮಾಡಿದರೆ ಚರಿತ್ರೆ ಸೃಷ್ಟಿಯಾಗುತ್ತೆ ಅಂತಾ ಪುಸಲಾಯಿಸಿ, ಕಾರ್ಯಕ್ರಮಕ್ಕೆ ಸಮ್ಮತಿ ನೀಡುವಂತೆ ಮಾಡಿದ್ದಾರೆ. ಸಾಲದ್ದಕ್ಕೆ ಆ ಕಾರ್ಯಕ್ರಮದಲ್ಲಿ ಖುದ್ದು ಸಿಎಂ ಭಾಗಿಯಾಗುವಂತೆಯೂ ಮಾಡಿದ್ದಾರೆ. ಈ ಸ್ವಪ್ರತಿಷ್ಠೆಯ ಹಠಮಾರಿ ಧೋರಣೆಗೀಗ ಗೋವಿಂದರಾಜು ಸೂಕ್ತ ಬೆಲೆ ತೆತ್ತಿದ್ದಾರೆ.
ನನ್ನ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ-ಸಿಎಂ ಅಳಲು
ಗುಪ್ತಚರ ಇಲಾಖೆಯಿಂದ ನಿಂಬಾಳ್ಕರ್ ಗೆ ಕೊಕ್
ಆರ್ ಸಿಬಿ ಕಪ್ ಗೆಲ್ಲುತ್ತಿದ್ದಂತೆ ರಾಜ್ಯದಲ್ಲಿ ಭರ್ಜರಿ ವಿಜಯೋತ್ಸವ ಆಚರಿಸೋಣ ಎನ್ನುವ ಸಲಹೆ ವ್ಯಕ್ತವಾಗಿತ್ತಂತೆ. ಆದರೆ ಆರ್ ಸಿಬಿ ಒಂದು ಖಾಸಗಿ ಫ್ರಾಂಚೈಸಿ, ಸರ್ಕಾರದ ವತಿಯಿಂದ ಕಾರ್ಯಕ್ರಮ ಬೇಡ, ಬೇಕಿದ್ದರೆ ಫ್ರಾಂಚೈಸಿಗಳೇ ಏನಾದರು ಮಾಡಿಕೊಳ್ಳಲಿ ಅಂದಿದ್ದರಂತೆ ಸಿಎಂ. ಆದರೆ ಆರ್ ಸಿಬಿ ಎಡೆಗಿನ ಯುವಜನರ ಸೆಳೆತ ಸರ್ಕಾರಕ್ಕೆ ವರವಾಗುತ್ತೆ, ನಾವೇ ಅದ್ಧೂರಿ ಕಾರ್ಯಕ್ರಮ ಮಾಡಿದ್ರೆ ಯುವ ಪೀಳೆಗೆಯನ್ನು ಸೆಳೆಯಬಹುದು ಅನ್ನೋ ಸಲಹೆ ವ್ಯಕ್ತವಾಗಿತ್ತು.
ಆದ್ರೆ, ತರಾತುರಿ ಬೇಡ, 3 ದಿನ ಬಿಟ್ಟು ವ್ಯವಸ್ಥೆ ಮಾಡಿಕೊಂಡು ಮಾಡೋಣ ಅಂತಲೂ ಸಿಎಂ ಸ್ಪಷ್ಟಪಡಿಸಿದ್ರು. ಆದ್ರೆ, ವಿರಾಟ್ ಕೊಹ್ಲಿ ಸೇರಿದಂತೆ ಶೆಫರ್ಟ್, ಸಾಲ್ಟ್, ಲಿವಿಂಗ್ಸ್ಟನ್ ಸೇರಿದಂತೆ ವಿದೇಶಿ ಆಟಗಾರೆಲ್ಲಾ ತವರಿಗೆ ವಾಪಸ್ ಆಗ್ತಾರೆ. ಆಗ ಕಾರ್ಯಕ್ರಮ ಮಾಡಿದ್ರೆ ಕಳೆ ಬರೋದಿಲ್ಲ ಅನ್ನೋ ಆತುರದಲ್ಲೇ ಈ ಪ್ರಮಾದ ನಡೆದು ಹೋಗಿದೆ. ಅಷ್ಟೇ ಅಲ್ಲಾ ಮೊನ್ನೆ ನಡೆದ ಸಂಪುಟ ಸಭೆ ಬಳಿಕ ತಮ್ಮ ಆಪ್ತರ ಮುಂದೆ ಸಿಎಂ ಈ ಕಾಲ್ತುಳಿತ ಪ್ರಕರಣ ನನ್ನ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ ಅಂತಾ ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ, ಎತ್ತಗಂಡಿ ಸರಣಿಯಲ್ಲಿ ಇದೀಗ ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಕೊಕ್ ನೀಡಲಾಗಿದೆ. ಆ ಜಾಗಕ್ಕೆ ಎಸ್ ರವಿಯವರನ್ನು ನೇಮಿಸಲಾಗಿದೆ. ಒಟ್ನಲ್ಲಿ ಯಾರದ್ದೋ ಪ್ರತಿಷ್ಠೆಗೆ ಸಿದ್ದರಾಮಯ್ಯರಂಥ ಜವಾಬ್ದಾರಿ ನಾಯಕರು ಕಿವಿಗೊಟ್ಟು 11 ಜೀವಗಳನ್ನು ಬಲಿ ಪಡೆದದ್ದು ಮಾತ್ರ ವಿಪರ್ಯಾಸವೇ ಸರಿ.