ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಘಟನೆಗೆ ದೇಶವೇ ಮರುಕ ಪಡುತ್ತಿರುವ ಹೊತ್ತಲ್ಲೇ, 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಗಡಿಯುದ್ದಕ್ಕೂ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್ (Surgical strike) ಅನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸಂಸದ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅಂದು ನಡೆದ ಸರ್ಜಿಕಲ್ ದಾಳಿಯನ್ನು “ನೋಡಿದವರು ಯಾರೂ ಇಲ್ಲ” ಎಂದು ಅವರು ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಂಥ ಹೇಳಿಕೆ ನೀಡುವ ಮೂಲಕ ಚನ್ನಿ ಅವರು ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
“ಇಲ್ಲಿಯವರೆಗೆ, ಸರ್ಜಿಕಲ್ ದಾಳಿ ಎಲ್ಲಿ ನಡೆಯಿತು, ಆ ಸಮಯದಲ್ಲಿ ಉಗ್ರರು ಎಲ್ಲಿ ಕೊಲ್ಲಲ್ಪಟ್ಟರು ಮತ್ತು ಪಾಕಿಸ್ತಾನದ ಯಾವ ಭಾಗದಲ್ಲಿ ಈ ದಾಳಿ ನಡೆಯಿತು ಎಂದು ಕಂಡುಹಿಡಿಯಲು ನನಗಂತೂ ಸಾಧ್ಯವಾಗಿಲ್ಲ. ಅಲ್ಲಿ ಏನೂ ಆಗಿರಲಿಲ್ಲ. ಎಲ್ಲಿಯೂ ಸರ್ಜಿಕಲ್ ಸ್ಟ್ರೈಕ್ ಆಗಿದ್ದು ಕಂಡುಬಂದಿಲ್ಲ. ಯಾರಿಗೂ ಗೊತ್ತೂ ಆಗಲಿಲ್ಲ” ಎಂದು ಚನ್ನಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ಅಲ್ಲದೇ, ಈ ದಾಳಿಗೆ ನಾನು ಹಲವು ಬಾರಿ ಪುರಾವೆಗಳನ್ನು ಕೇಳಿದ್ದೆ” ಎಂದೂ ಹೇಳಿದ್ದಾರೆ.
ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಘೋಷಿಸುವ ಮೂಲಕ ಕಾಂಗ್ರೆಸ್ ಪಕ್ಷವು ಸಾರ್ವಜನಿಕವಾಗಿ ಸರ್ಕಾರವನ್ನು ಬೆಂಬಲಿಸಿದ ಬೆನ್ನಲ್ಲೇ ಚನ್ನಿ ಅವರ ಈ ಹೇಳಿಕೆ ಹೊರಬಿದ್ದಿದೆ. “ಸರ್ಕಾರ ಏನಾದರೂ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ರೂವಾರಿಗಳು ಯಾರು ಎಂದು ಜನರಿಗೆ ತಿಳಿಸಿ ಮತ್ತು ಅವರನ್ನು ಶಿಕ್ಷಿಸಿ” ಎಂದು ಚನ್ನಿ ಒತ್ತಾಯಿಸಿದ್ದಾರೆ. ಪಹಲ್ಗಾಮ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಟೀಕಿಸಿದ ಅವರು, “ಪಹಲ್ಗಾಮ್ ದಾಳಿ ನಡೆದು ಹತ್ತು ದಿನಗಳು ಕಳೆದಿವೆ. ಆದರೆ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ತಾನದ ವಿರುದ್ಧ ಸರ್ಕಾರ ಯಾವಾಗ, ಏನು ಕ್ರಮ ತೆಗೆದುಕೊಳ್ಳಲಿದೆ ಎಂದು ಇಡೀ ದೇಶ ಕಾಯುತ್ತಿದೆ. 56 ಇಂಚಿನ ಎದೆ ಇನ್ನಾದರೂ ಕ್ರಮ ಕೈಗೊಳ್ಳಲಿ ಎಂದು ಜನರು ಕಾಯುತ್ತಿದ್ದಾರೆ” ಎಂದಿದ್ದಾರೆ.
‘ಪರಿಶೀಲಿಸಲು ಪಾಕಿಸ್ತಾನಕ್ಕೆ ಹೋಗಿ’
ಕಾಂಗ್ರೆಸ್ ನಾಯಕ ಚನ್ನಿ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ದೆಹಲಿಯ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, “ಚನ್ನಿ ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಸರ್ಜಿಕಲ್ ದಾಳಿಗೆ ಪುರಾವೆ ಬೇಕು ಎಂಬ ಚರಣ್ ಜೀತ್ ಸಿಂಗ್ ಚನ್ನಿ ಅವರ ಹೇಳಿಕೆಯು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಈ ಜನರು ಸೇನೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ” ಎಂದು ಕಿಡಿಕಾರಿದ್ದಾರೆ.
“ವೈಮಾನಿಕ ದಾಳಿಗೆ ಪುರಾವೆಗಳು ಬೇಕಿದ್ದರೆ, ನೀವು ರಾಹುಲ್ ಗಾಂಧಿ ಅವರೊಂದಿಗೆ ಪಾಕಿಸ್ತಾನಕ್ಕೆ ಹೋಗಬಹುದು. ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಭಾರತ ಸಾಕಷ್ಟು ಹಾನಿ ಮಾಡಿದೆ ಎಂದು ಪಾಕಿಸ್ತಾನವೇ ಹೇಳುತ್ತಿದೆ. ಯಾವಾಗಲೂ ಸೇನೆಯನ್ನು ಪ್ರಶ್ನಿಸುವ ಮತ್ತು ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಗಾಂಧಿ ಕುಟುಂಬದ ಕೊಳಕು ರಾಜಕೀಯ ಮತ್ತು ಕೊಳಕು ಮನಸ್ಥಿತಿಯನ್ನು ಚರಣ್ ಜೀತ್ ಸಿಂಗ್ ಚನ್ನಿ ಮತ್ತೊಮ್ಮೆ ತೋರಿಸಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ” ಎಂದಿದ್ದಾರೆ.
ಇದೇ ವೇಳೆ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಚನ್ನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರೂ, ಕಾಂಗ್ರೆಸ್ ಸಶಸ್ತ್ರ ಪಡೆಗಳು ಮತ್ತು ಭಾರತದ ಜನರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಹೊರಗಿನಿಂದ, ಅವರದ್ದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಆದರೆ ಒಳಗಿನಿಂದ ಅವರು ಪಿಡಬ್ಲ್ಯೂಸಿ (ಪಾಕಿಸ್ತಾನ ಕಾರ್ಯಕಾರಿ ಸಮಿತಿ). ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಚನ್ನಿ ಹೇಳಿದ್ದಾರೆ. ಪಾಕಿಸ್ತಾನಿ ಸೈನಿಕರಿಗೆ ಮತ್ತು ಪಾಕಿಸ್ತಾನ ಸೇನೆಗೆ ಆಮ್ಲಜನಕವನ್ನು ಒದಗಿಸಲು ಕಾಂಗ್ರೆಸ್ ಯಾವುದೇ ಅವಕಾಶವನ್ನು ಬಿಡುವುದಿಲ್ಲ” ಎಂದು ಬಿಜೆಪಿ ಸಂಸದ ಹೇಳಿದ್ದಾರೆ.