ಬೆಂಗಳೂರು : ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನಿಯಮಗಳನ್ನು ಗಾಳಿಗೆ ತೂರಿ ಸ್ವಹಿತಾಸಕ್ತಿಯಿಂದ ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ಐದು ಎಕರೆ ವಿಸ್ತೀರ್ಣದ ಉದ್ಯಾನವನದ ಜಾಗವನ್ನು ಉದ್ಯಮಿಗೆ ಗುತ್ತಿಗೆಗೆ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪರಿಸರ ಸಂರಕ್ಷಣೆಯನ್ನೇ ಪ್ರಮುಖ ಆದ್ಯತೆಯನ್ನಾಗಿಸಿಕೊಂಡು, 155 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕಬ್ಬನ್ ಪಾರ್ಕ್ ನಲ್ಲಿ ಇಲ್ಲಿಯವರೆಗೆ ನಡೆಸಿಕೊಂಡು ಬರುತ್ತಿರುವ ಶಿಷ್ಟಾಚಾರಗಳನ್ನು ಮೀರಿ ಅಭಿಷೇಕ್ ಪೊದ್ದಾರ್ ಎಂಬ ಉದ್ಯಮಿಗೆ ಜಾಗ ನೀಡಲು ಮುಂದಾಗಿದ್ದಾರೆ.
ಕಲೆ ಮತ್ತು ಛಾಯಾಗ್ರಹಣ ವಸ್ತು ಸಂಗ್ರಹಾಲಯ ಸಂಸ್ಥೆಗೆ ಗುತ್ತಿಗೆಗೆ ನೀಡಲು ಶಾಲಿನಿ ರಜನೀಶ್ ಅವರು ಮುಂದಾಗಿದ್ದಾರೆ. 10 ರಿಂದ 15 ಕೋಟಿ ರೂ.ನಷ್ಟು ಕಿಕ್ ಬ್ಯಾಕ್ ಪಡೆದು, ಕಾನೂನು ಬಾಹಿರ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.
ಈಗಾಗಲೇ ಕಲೆ ಮತ್ತು ಚಿತ್ರಕಲೆಗೆ ಸಂಬಂಧಿಸಿದಂತೆ ವೆಂಕಟಪ್ಪ ಕಲೆ ಗ್ಯಾಲರಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ಅದ್ಭುತವಾದ ಗ್ಯಾಲರಿ ಇರುವ ಕಬ್ಬನ್ ಪಾರ್ಕ್ ಆವರಣದಲ್ಲಿ ಮತ್ತೊಂದು ಗ್ಯಾಲರಿಯ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಸಂಸ್ಥೆಯೊಂದಕ್ಕೆ ಐದು ಎಕರೆಗಳಷ್ಟು ವಿಸ್ತೀರ್ಣದ ಜಾಗವನ್ನು ನೀಡಲು ಮುಂದಾಗಿರುವುದು ಜನ ವಿರೋಧಿ ಮತ್ತು ನಿಯಮಬಾಹಿರ ಕಾರ್ಯವಾಗಿರುತ್ತದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.