ಕೊಚ್ಚಿ: ಕೇರಳದ ಕೊಚ್ಚಿಯಿಂದ ಸುಮಾರು 38 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಲೀಬೀರಿಯಾದ ಧ್ವಜ ಹೊಂದಿರುವ MSC ELSA 3 ಎಂಬ ಸರಕು ಹಡಗು (Cargo Ship ) ಇಂದು ಮುಂಜಾನೆ 7:50ರ ವೇಳೆಗೆ ಒಂದು ಭಾಗ ಪೂರ್ತಿ ನೀರು ತುಂಬಿಕೊಂಡು, ಒಂದೆಡೆಗೆ ವಾಲಿ ಮುಳುಗಿದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಭಾರತೀಯ ಕರಾವಳಿ ರಕ್ಷಣಾ ಪಡೆ (ICG) ಹೈಅಲರ್ಟ್ ಘೋಷಿಸಿದೆ. ಹಡಗಿನಲ್ಲಿದ್ದ ಎಲ್ಲ 24 ಸಿಬ್ಬಂದಿಯನ್ನೂ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಹಡಗಿನಿಂದ ಸಮುದ್ರಕ್ಕೆ ಬಿದ್ದಿರುವ 640 ಕಂಟೈನರ್ಗಳಲ್ಲಿ 13 ಕಂಟೈನರ್ಗಳು ಅಪಾಯಕಾರಿ ವಸ್ತುಗಳನ್ನು ಹೊಂದಿದ್ದು, 12 ಕಂಟೈನರ್ಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಇದೆ. ಇದರ ಜೊತೆಗೆ, ಹಡಗು 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367.1 ಮೆಟ್ರಿಕ್ ಟನ್ ಫರ್ನೇಸ್ ಆಯಿಲ್ ಸಾಗಿಸುತ್ತಿತ್ತು. ಇದರಿಂದಾಗಿ ಕೇರಳದ ಪರಿಸರ ಸೂಕ್ಷ್ಮ ಕರಾವಳಿಯಲ್ಲಿ ಭಾರೀ ಮಾಲಿನ್ಯದ ಭೀತಿ ಎದುರಾಗಿದೆ.
ಎಂಎಸ್ಸಿ ಎಲ್ಸಾ 3 ಎಂಬ 184 ಮೀಟರ್ ಉದ್ದದ ಈ ಹಡಗು ಮೇ 23ರಂದು ಕೇರಳದ ವಿಝಿಂಜಂ ಬಂದರಿನಿಂದ ಕೊಚ್ಚಿಗೆ ಪ್ರಯಾಣ ಆರಂಭಿಸಿತ್ತು. ಮೇ 24ರ ಶನಿವಾರ ಕೊಚ್ಚಿಯ ಬಂದರಿಗೆ ತಲುಪಬೇಕಿತ್ತು. ಆದರೆ, ಶನಿವಾರ ಮಧ್ಯಾಹ್ನ 1:25 ಗಂಟೆಗೆ, ಹಡಗು 26 ಡಿಗ್ರಿ ಕೋನದಲ್ಲಿ ಒಂದು ಬದಿಗೆ ವಾಲುತ್ತಿರುವುದು ಕಂಡುಬಂತು. ಇದರಿಂದ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟಾಗುವ ಹಾಗೂ ಸಮುದ್ರದಲ್ಲಿ ಕಂಟೈನರ್ಗಳು ಮುಳುಗುವ ಸಾಧ್ಯತೆ ಇದ್ದುದರಿಂದ ಕೂಡಲೇ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಎಂದು ಹಡಗಿನ ನಿರ್ವಾಹಕರಾದ MSC ಶಿಪ್ ಮ್ಯಾನೇಜ್ಮೆಂಟ್ ಭಾರತೀಯ ಅಧಿಕಾರಿಗಳಿಗೆ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆ
ಭಾರತೀಯ ಕರಾವಳಿ ರಕ್ಷಣಾ ದಳವು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿತು. ಕೊಚ್ಚಿಯ ಮಾರಿಟೈಮ್ ರೆಸ್ಕ್ಯೂ ಸಬ್-ಸೆಂಟರ್ನಿಂದ ಡಾರ್ನಿಯರ್ ವಿಮಾನವನ್ನು ವೈಮಾನಿಕ ಗಸ್ತಿಗೆ ನಿಯೋಜಿಸಲಾಯಿತು. ಜೊತೆಗೆ, ಕರಾವಳಿ ರಕ್ಷಣಾ ದಳದ ಹಡಗುಗಳಾದ ಅರ್ನವೇಶ್ ಮತ್ತು ಇತರ ಹಡಗುಗಳನ್ನು ರಕ್ಷಣಾ ಕಾರ್ಯಕ್ಕೆ ರವಾನಿಸಲಾಯಿತು. ಭಾರತೀಯ ನೌಕಾಪಡೆಯ ಐಎನ್ಎಸ್ ಸುಜಾತ ಕೂಡ ಕಾರ್ಯಾಚರಣೆಗೆ ಇಳಿಯಿತು.
ಒಟ್ಟು 24 ಸಿಬ್ಬಂದಿಯಲ್ಲಿ 21 ಮಂದಿಯನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿತು. 9 ಮಂದಿಯನ್ನು ಸಿಂಗಾಪುರ್ನ ಹಾನ್ ಯಿ ಎಂಬ ಹಡಗು ರಕ್ಷಿಸಿತು. 12 ಜನರನ್ನು ಕರಾವಳಿ ರಕ್ಷಣಾ ಪಡೆಯ ಅರ್ನವೇಶ್ ಹಡಗು ರಕ್ಷಿಸಿತು. ಉಳಿದ ಮೂವರು—ಕ್ಯಾಪ್ಟನ್ (ರಷ್ಯಾದ ನಾಗರಿಕ), ಮುಖ್ಯ ಎಂಜಿನಿಯರ್, ಮತ್ತು ಎರಡನೇ ಎಂಜಿನಿಯರ್—ಕಂಪನಿಯ ಸೂಚನೆಯಂತೆ ಸಾಲ್ವೇಜ್ ಕಾರ್ಯಾಚರಣೆಗೆ ಸಹಾಯ ಮಾಡಲು ಹಡಗಿನಲ್ಲೇ ಉಳಿದಿದ್ದರು. ಆದರೆ, ಭಾನುವಾರ ಹಡಗು ಹೆಚ್ಚು ಹೆಚ್ಚು ಮುಳುಗಲು ಆರಂಭವಾದ ಕಾರಣ ಈ ಮೂವರನ್ನೂ ಐಎನ್ಎಸ್ ಸುಜಾತ ಯಶಸ್ವಿಯಾಗಿ ರಕ್ಷಿಸಿತು. ಸಿಬ್ಬಂದಿಯಲ್ಲಿ ಒಬ್ಬ ರಷ್ಯಾದವರು, ಇಬ್ಬರು ಉಕ್ರೇನಿಯನ್ನರು, ಒಬ್ಬ ಜಾರ್ಜಿಯಾದವರು, ಮತ್ತು 20 ಫಿಲಿಪೈನ್ಸ್ ನವರು ಇದ್ದರು.
ಪರಿಸರದ ಮೇಲೇನು ಪರಿಣಾಮ?
ಹಡಗಿನಿಂದ ಸಮುದ್ರಕ್ಕೆ ಬಿದ್ದಿರುವ ಕಂಟೈನರ್ಗಳು, ವಿಶೇಷವಾಗಿ ಅಪಾಯಕಾರಿ ವಸ್ತುಗಳನ್ನು ಹೊಂದಿರುವ 13 ಕಂಟೈನರ್ಗಳು ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ಒಳಗೊಂಡ 12 ಕಂಟೈನರ್ಗಳು, ಕೇರಳದ ಪರಿಸರ ಸೂಕ್ಷ್ಮ ಕರಾವಳಿಗೆ ಗಂಭೀರ ಧಕ್ಕೆ ತರುವ ಸಾಧ್ಯತೆಯಿದೆ. ಕ್ಯಾಲ್ಸಿಯಂ ಕಾರ್ಬೈಡ್ ನೀರಿನೊಂದಿಗೆ ಸಂಪರ್ಕಕ್ಕೆ ಬಂದರೆ ಸ್ಫೋಟಕ ಅನಿಲವನ್ನು ಉತ್ಪಾದಿಸಬಹುದು, ಇದರಿಂದ ಸ್ಫೋಟ ಉಂಟಾಗುವ ಭೀತಿಯೂ ಇದೆ. ಇದರ ಜೊತೆಗೆ, 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367.1 ಮೆಟ್ರಿಕ್ ಟನ್ ಫರ್ನೇಸ್ ಆಯಿಲ್ನಿಂದ ತೈಲ ಸೋರಿಕೆಯೂ ಸಂಭವಿಸಬಹುದು. ಆದರೆ, ಇಂಥ ಯಾವುದೇ ವರದಿ ಬಂದಿಲ್ಲ.
ಇದನ್ನೂ ಓದಿ: Radiation Oncology : ತಲೆ, ಕುತ್ತಿಗೆ ಕ್ಯಾನ್ಸರ್ ಆರೈಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ರೇಡಿಯೇಷನ್ಆಂಕೊಲಜಿ
ಕರಾವಳಿ ರಕ್ಷಣಾ ಪಡೆಯು ತನ್ನ ಸಕ್ಷಮ್ ಎಂಬ ಮಾಲಿನ್ಯ ನಿಯಂತ್ರಣ ಹಡಗನ್ನು ನಿಯೋಜಿಸಿದ್ದು, ಸುಧಾರಿತ ತೈಲ ಸೋರಿಕೆ ಗುರುತಿಸುವ ತಂತ್ರಜ್ಞಾನದೊಂದಿಗೆ ವಿಮಾನಗಳನ್ನು ಬಳಸಿಕೊಂಡು ನಿರಂತರ ಗಸ್ತು ತಿರುಗುತ್ತಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಜೊತೆ ಸಮನ್ವಯದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರಾವಳಿಯ ಜನರಿಗೆ ತೀರದಲ್ಲಿ ತೇಲಿಬರಬಹುದಾದ ಕಂಟೈನರ್ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಅವುಗಳ ಸಮೀಪಕ್ಕೆ ಹೋಗದಂತೆ ಎಚ್ಚರಿಸಲಾಗಿದೆ,
ಸಾಲ್ವೇಜ್ ಕಾರ್ಯಾಚರಣೆ
MSC ಶಿಪ್ ಮ್ಯಾನೇಜ್ಮೆಂಟ್ ಕಂಪನಿಯಿಂದ ಒಂದು ಸಹಾಯಕ ಹಡಗು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ದಳವು ಹಡಗಿನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಹಡಗನ್ನು ಎಳೆದುಕೊಂಡು ಹೋಗುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ, ಆದರೆ ವಾಲಿಕೊಂಡಿರುವ ಕೆಲವು ಕಂಟೈನರ್ಗಳು ಮತ್ತು ತೈಲ ಸೋರಿಕೆ ಭೀತಿಯಿಂದಾಗಿ ಈ ಕಾರ್ಯಾಚರಣೆ ಸಂಕೀರ್ಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.