ಬೆಂಗಳೂರು: ಮಧುಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಣಿ ಬರ್ತಾವಳೆ ಚಿತ್ರ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ. ಈಗಾಗಲೇ ನಿರ್ದೇಶಕರು 150 ಜನ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ತೋರಿಸಿ, ಸೈ ಅನಿಸಿಕೊಂಡು ಬಿಡುಗಡೆಗೆ ಮಾಡಲು ಮುಂದಾಗಿದ್ದಾರೆ.
ಈ ಚಿತ್ರದ ಕಥೆಯನ್ನು ನಿರ್ದೇಶಕ ಮಧುಚಂದ್ರ ಸುಮಾರು 700 ಜನಕ್ಕೆ ಹೇಳಿದ್ದರು. ಅವರಿಂದ ಫೀಡ್ ಬ್ಯಾಕ್ ತೆಗೆದುಕೊಂಡು ನಂತರವೇ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಅವರ ಈ ಪ್ರಾಮಾಣಿಕ ಮತ್ತು ವಿಭಿನ್ನ ಪ್ರಯತ್ನ ನೋಡಿ ಕುಟುಂಬದ 150 ಜನರು ಚಿತ್ರ ಮಾಡಲು ಮುಂದೆ ಬಂದಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರ ತಂಡದ 150 ಜನ ನಿರ್ಮಾಪಕರು ತಮ್ಮ ಫ್ಯಾಮಿಲಿ, ನೆಂಟರು, ಗೆಳೆಯರು ಎಲ್ಲರನ್ನೂ ಸೇರಿದಂತೆ ಸುಮಾರು 2 ಸಾವಿರ ಜನ ಸಿನಿಮಾ ನೋಡಿದ್ದಾರೆ. ಮೊದಲೇ ಪ್ರೇಕ್ಷಕರಿಗೆ ತೋರಿಸಿ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿ ನಂತರ ಇಡೀ ಕನ್ನಡ ಪ್ರೇಕ್ಷಕರ ಮುಂದೆ ಸಿನಿಮಾ ರಿಲೀಸ್ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ. ಸುಮಾರು 200 ಜನರಂತೆ 10 ಶೋಗಳನ್ನು ಸಣ್ಣ ಪ್ರಮಾಣದ ಥಿಯೇಟರ್ ನಲ್ಲಿ ಬಿಡುಗಡೆ ಮಾಡಿ ನಂತರ ಕೆಲವು ತಪ್ಪುಗಳನ್ನು ತಿದ್ದಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಚಿತ್ರದ ಬಗ್ಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದ್ದು, ಫೆ. 7ರಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.


















