ಒಟ್ಟಾವಾ: ಭಾರತದ ಮೇಲೆ ಸುಖಾಸುಮ್ಮನೆ ಗೂಬೆ ಕೂರಿಸುವ ಕೆಲಸವನ್ನು ಕೆನಡಾ ಮುಂದುವರಿಸಿದೆ. ಏಪ್ರಿಲ್ 28ರಂದು ಕೆನಡಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ನಮ್ಮ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ ಎಂದು ಕೆನಡಾ ಗುಪ್ತಚರ ಸಂಸ್ಥೆ (ಸಿಎಸ್ಐಎಸ್) ಆತಂಕ ವ್ಯಕ್ತಪಡಿಸಿದೆ. ಚೀನಾ, ರಷ್ಯಾ ಹಾಗೂ ಪಾಕಿಸ್ತಾನವೂ ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಬಹುದು ಎಂದೂ ಹೇಳಿದೆ.
ಖಲಿಸ್ತಾನಿ ಶಕ್ತಿಗಳ ವಿಚಾರದಲ್ಲಿ ಭಾರತ ಮತ್ತು ಕೆನಡಾ ಸಂಬಂಧ ಹದಗೆಟ್ಟಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಕೆನಡಾ ತನ್ನ ದೇಶದೊಳಗೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ಭಾರತದ ಆರೋಪ ಮತ್ತು ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪಗಳು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.
ಈಗ ಚೀನಾ ದೇಶವು ಕೆನಡಾದ ಚುನಾವಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಧನಗಳನ್ನು ಬಳಸಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ. ಅಲ್ಲದೇ, ಭಾರತ ಸರ್ಕಾರವು ಕೆನಡಾದ ಸಮುದಾಯಗಳಲ್ಲಿ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮತ್ತು ಸಾಮರ್ಥ್ಯ ಎರಡನ್ನೂ ಹೊಂದಿದೆ” ಎಂದು ಕೆನಡಾ ಗುಪ್ತಚರ ಸಂಸ್ಥೆ ಸಿಎಸ್ಐಎಸ್ನ ಉಪನಿರ್ದೇಶಕಿ ವನೆಸ್ಸಾ ಲಾಯ್ಡ್ ಹೇಳಿದ್ದಾರೆ.

“ನಮ್ಮ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ಸಾಧ್ಯತೆಗಳು ನಿಚ್ಚಳವಾಗಿವೆ. ಇವು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೋ, ಇಲ್ಲವೋ ಅನ್ನುವುದಕ್ಕಿಂತಲೂ, ಇಂಥ ಕೃತ್ಯಗಳು ಕೆನಡಾದ ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸಬಹುದು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ ಮತ್ತು ಪಾಕಿಸ್ತಾನವೂ ಕೆನಡಾದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಹಿಂದೆಯೂ ಇದೇ ಮಾದರಿ ಆರೋಪ
ಈ ಹಿಂದೆಯೂ ಕೆನಡಾವು ಭಾರತ ಮತ್ತು ಚೀನಾ ಮೇಲೆ ಹಸ್ತಕ್ಷೇಪದ ಆರೋಪಗಳನ್ನು ಹೊರಿಸಿತ್ತು. ಅದನ್ನು ಎರಡೂ ದೇಶಗಳು ನಿರಾಕರಿಸಿದ್ದವು. ಜನವರಿಯಲ್ಲಿ, ಕೆನಡಾದ ಆಯೋಗದ ವರದಿಯೊಂದು ಭಾರತದ ವಿದೇಶಾಂಗ ಸಚಿವಾಲಯವು ಕೆನಡಾದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿತ್ತು. ಆದರೆ, ಭಾರತ ಈ ಆರೋಪಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿತ್ತು.
2019 ಮತ್ತು 2021ರ ಚುನಾವಣೆಗಳಲ್ಲಿ ಭಾರತ ಮತ್ತು ಚೀನಾ ಹಸ್ತಕ್ಷೇಪ ಪ್ರಯತ್ನಗಳನ್ನು ನಡೆಸಿದ್ದವು ಎಂದು ಕೆನಡಾ ಆರೋಪಿಸಿತ್ತು. ಆದರೆ, ಆರೋಪಗಳಿಗೆ ಸೂಕ್ತ ಪುರಾವೆ ಒದಗಿಸುವಲ್ಲಿ ವಿಫಲವಾಗಿತ್ತು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ನಾವು ಕೆನಡಾ ಚುನಾವಣೆಯಲ್ಲಿ ಮೂಗು ತೂರಿಸಿಲ್ಲ. ಆದರೆ ನಮ್ಮ ಆಂತರಿಕ ವಿಚಾರಗಳಲ್ಲಿ ಕೆನಡಾ ಹಸ್ತಕ್ಷೇಪ ಮಾಡುತ್ತಿದೆ. ಅಕ್ರಮ ವಲಸೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಕೆನಡಾ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಭಾರತದ ಮೇಲಿನ ಕೆನಡಾದ ಆರೋಪಗಳನ್ನು ನಾವು ಖಂಡಿಸುತ್ತೇವೆ,” ಎಂದು ಹೇಳಿದ್ದರು.