ಜೈಪುರ: ವಿಜಯ್ ಹಜಾರೆ ಟ್ರೋಫಿ ಆಡಲು ಜೈಪುರಕ್ಕೆ ಬಂದಿರುವ ಭಾರತದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರಿಗೆ ಅಭಿಮಾನಿಗಳ ‘ಕ್ರೇಜ್’ ಬಿಸಿ ತಟ್ಟಿದೆ. ಅಭ್ಯಾಸದ ವೇಳೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳಿಂದಾಗಿ ರೋಹಿತ್ ಶರ್ಮಾ ಕೊಂಚ ಕಿರಿಕಿರಿ ಅನುಭವಿಸಿದ ಘಟನೆ ಮಂಗಳವಾರ (ಡಿ.23) ನಡೆದಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮುಂಬೈ ತಂಡದ ಪರ ರೋಹಿತ್ ಶರ್ಮಾ ನೆಟ್ಸ್ ಅಭ್ಯಾಸ ನಡೆಸುತ್ತಿದ್ದರು. ಅಭ್ಯಾಸ ಮುಗಿಸಿ ಅವರು ಮೈದಾನದಿಂದ ಡ್ರೆಸ್ಸಿಂಗ್ ರೂಮ್ಗೆ ಮರಳುತ್ತಿದ್ದಾಗ, ಅಭಿಮಾನಿಗಳ ದಂಡು ಅವರನ್ನು ಸುತ್ತುವರೆಯಿತು. ಈ ವೇಳೆ ಅತ್ಯುತ್ಸಾಹದ ಅಭಿಮಾನಿಯೊಬ್ಬರು ನಿಷೇಧಿತ ಪ್ರದೇಶದವರೆಗೂ (Restricted Area) ನುಗ್ಗಿ, ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದರು. ಭದ್ರತಾ ವಲಯವನ್ನು ಮೀರಿ ವರ್ತಿಸಿದ ಅಭಿಮಾನಿಯ ನಡೆ ರೋಹಿತ್ ಅವರಿಗೆ ಅಸಮಾಧಾನ ತಂದಿತು.
ಆದರೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ರೋಹಿತ್, ತಾಳ್ಮೆ ಕಳೆದುಕೊಳ್ಳದೆ ಮೌನವಾಗಿ ಡ್ರೆಸ್ಸಿಂಗ್ ರೂಮ್ ಕಡೆಗೆ ಹೆಜ್ಜೆ ಹಾಕಿದರು. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಅನುಚಿತವಾಗಿ ವರ್ತಿಸಿದ ಅಭಿಮಾನಿಯನ್ನು ಅಲ್ಲಿಂದ ತೆರವುಗೊಳಿಸಿದರು ಮತ್ತು ಹಾಲ್ವೇ ಬಾಗಿಲುಗಳನ್ನು ಮುಚ್ಚಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
7 ವರ್ಷಗಳ ಬಳಿಕ ದೇಶೀಯ ಕ್ರಿಕೆಟ್ಗೆ ವಾಪಸ್
ರೋಹಿತ್ ಶರ್ಮಾ ಸುಮಾರು 7 ವರ್ಷಗಳ ಸುದೀರ್ಘ ಅಂತರದ ನಂತರ ದೇಶೀಯ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಇಂದು ನಡೆಯಲಿರುವ ಪಂದ್ಯದಲ್ಲಿ ಅವರು ಸಿಕ್ಕಿಂ ವಿರುದ್ಧ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಅವರನ್ನು ನೋಡಲು ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ವಿಶ್ವಕಪ್ ಮೇಲೆ ಕಣ್ಣು
ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಹಿಟ್ಮ್ಯಾನ್, ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಇತ್ತೀಚೆಗೆ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಿರುವ ಅವರು, ತೂಕ ಇಳಿಸಿಕೊಂಡು ಹೊಸ ಲವಲವಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ, ರೋಹಿತ್ ಶರ್ಮಾ ಈ ದೇಶೀಯ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೂ ಓದಿ : ವಿಜಯ್ ಹಜಾರೆ ಟ್ರೋಫಿ : 15 ವರ್ಷಗಳ ಬಳಿಕ ದೇಶೀಯ ಏಕದಿನ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ವಾಪಸ್ | ರೋಹಿತ್ ಶರ್ಮಾ ಕೂಡ ಕಣಕ್ಕೆ


















