ಬೆಂಗಳೂರು : ನೇಮಕಾತಿಯಲ್ಲಿ ಒಳಮೀಸಲಾತಿ ಗೊಂದಲ ಬಗ್ಗೆ ಇಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಒಳಮೀಸಲಾತಿ ಹಂಚಿಕೆಯಲ್ಲಿ ಗೊಂದಲ ಆಗಿದೆ ಅಂತ ಸಮಸ್ಯೆ ಆಗಿದೆ. ರೋಸ್ಟರ್ ಮಾಡುವಾಗ ಒಂದು ವರ್ಗಕ್ಕೆ ಹೆಚ್ಚು ಮೀಸಲಾತಿ ಸಿಗುತ್ತದೆ ಎನ್ನುವುದಿದೆ. ಈಗ ಮತ್ತೆ ಸಂಪುಟದಲ್ಲಿ ವಿಷಯದ ಮೇಲೆ ಚರ್ಚೆ ಆಗುತ್ತದೆ. ಅಂತಿಮವಾಗಿ ಸಂಪುಟದಲ್ಲಿ ಏನು ಚರ್ಚೆ ಆಗುತ್ತೋ ಅದರಂತೆ ಮುಂದುವರಿಯುತ್ತೇವೆ. ಎಸ್ಸಿ ಸಮುದಾಯಕ್ಕೆ 17% ಒಳಮೀಸಲಾತಿ ಕೊಡುವ ತೀರ್ಮಾನ ಆಗಿತ್ತು. ಆದರೆ ಅಲೆಮಾರಿಗಳಿಗೆ ಪ್ರತ್ಯೇಕ 1% ಕೊಡಿ ಎಂದು ಬೇಡಿಕೆ ಇದೆ. ಕೋರ್ಟಿನಲ್ಲೂ 56% ಮೀಸಲಾತಿಗೆ ತಡೆ ಕೊಡಲಾಗಿದೆ. ಇದೆಲ್ಲ ದೊಡ್ಡ ಚರ್ಚೆ ನಡೆಸಿ ತೀರ್ಮಾನ ಮಾಡಬೇಕಾದ ವಿಚಾರ. ಭಿನ್ನಾಭಿಪ್ರಾಯಗಳು ಇದ್ದೇ ಇರ್ತವೆ. ಏನೇ ಇದ್ದರೂ ಸಂಪುಟದಲ್ಲಿ ಚರ್ಚೆ ಮಾಡಿ ಎಲ್ಲರ ಹಿತಾಸಕ್ತಿ ನೋಡಿ ತೀರ್ಮಾನ ಆಗುತ್ತೆ ಎಂದು ಭರವಸೆ ನೀಡಿದ್ದಾರೆ.
ಇನ್ನು 56% ಮೀಸಲಾತಿಯಡಿಯೇ ನೇಮಕಾತಿ ಹಾಗೂ ಒಳಮೀಸಲಾತಿ ಕೊಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಹೋರಾಟದ ಎಚ್ಚರಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿಯವರಿಗೂ ಗೊತ್ತಿದೆ, 56% ಮೀಸಲಾತಿ ಕೊಡಕ್ಕಾಗಲ್ಲ ಎಂದು. ಆದ್ರೆ ಬಿಜೆಪಿ ರಾಜಕೀಯ ಕಾರಣಕ್ಕೆ ಎಲ್ಲರಿಗೂ ಪ್ರಚೋದನೆ ಮಾಡುತ್ತಿದ್ದಾರೆ. ಅವರ ರಾಜಕೀಯ ಮೇಲ್ನೋಟಕ್ಕೇ ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇದೇ ವೇಳೆ ಖರ್ಗೆ ಭೇಟಿ ಬಗ್ಗೆ ಮಾತಾಡಿ, ಬುಧವಾರ ಭೇಟಿ ಮಾಡಿ ಒಳಮೀಸಲಾತಿ ಗೊಂದಲ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲ ರಾಜ್ಯಗಳಲ್ಲೂ ಈ ಗೊಂದಲ ಇದೆ. ಇದು ಹೊರತು ಬೇರೇನೂ ಚರ್ಚೆ ಮಾಡಿಲ್ಲ. ಅಧಿಕಾರ ಗೊಂದಲ ಬಗ್ಗೆ ಖರ್ಗೆಯವರ ಜೊತೆ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಯಾರ ಫೋನನ್ನೂ ಟ್ಯಾಪ್ ಮಾಡುತ್ತಿಲ್ಲ. ಹೆಚ್ಡಿಕೆ ಅಥವಾ ಬಿಜೆಪಿ ಬಳಿ ದಾಖಲೆ ಇದ್ರೆ ಕೊಡಲಿ. ಯಾರ ಫೋನ್ ಟ್ಯಾಪ್ ಆಗುತ್ತಿದೆ ಅಂತ ದಾಖಲೆ ಇದ್ರೆ ಕೊಡಲಿ ಅಂತ ಪರಮೇಶ್ವರ್ ಸವಾಲ್ ಹಾಕಿದರು. ಡಿಕೆಶಿ ಬಣದ ಶಾಸಕರ ಮೇಲೆ ಸಿಎಂ ಗುಪ್ತಚರ ಮಾಹಿತಿ ಪಡೆಯುವ, ಫೋನ್ ಟ್ಯಾಪ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್ಡಿಕೆ ಹಾಗೂ ಆರ್ ಅಶೋಕ್ ಇತ್ತೀಚೆಗೆ ಆರೋಪಿಸಿದ್ದಾರೆ.
ಇದನ್ನೂ ಓದಿ : ವಿಷಯುಕ್ತ ಮೇವು ತಿಂದು 70ಕ್ಕೂ ಹೆಚ್ಚು ಕುರಿಗಳು ಸಾವು!



















