ಅದು ಅದಮ್ಯ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಜಮ್ಮು-ಕಾಶ್ಮೀರದ ಒಂದು ಪುಟ್ಟ ಕಣಿವೆ. ಭೂಲೋಕವೇ ಧರೆಗಿಳಿದು ಬಂದಂತೆ ಭಾಸವಾಗುವ ರಮಣೀಯ ತಾಣ. ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ನ ಬೈಸರನ್ ಎಂಬ ಈ ಪ್ರದೇಶವು ಅದರ ಸೌಂದರ್ಯದಿಂದಲೇ ಮಿನಿ ಸ್ವಿಜರ್ಲೆಂಡ್ ಎಂದು ಕರೆಯಲ್ಪಡುತ್ತಿದೆ. ಇಡೀ ದೇಶದಲ್ಲಿ ಬೇಸಗೆಯ ಬಿಸಿಲಿನ ಝಳ ವ್ಯಾಪಿಸಿದ್ದರೆ, ಹಿಮದಿಂದ ಆವರಿಸಿರುವ ಈ ಪ್ರದೇಶವು ತನ್ನ ಆಹಾ… ಎನ್ನುವಂಥ ವಾತಾವರಣದಿಂದಲೇ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.
ಇಲ್ಲಿನ ಹಿಮಚ್ಛಾದಿತ ಶಿಖರಗಳು, ಪೈನ್ ಅರಣ್ಯ, ಹುಲ್ಲುಗಾವಲಿನ ಸೌಂದರ್ಯ ಸವಿಯಲೆಂದೇ ಭಾರೀ ಸಂಖ್ಯೆಯ ಪ್ರವಾಸಿಗರು ಮಂಗಳವಾರ(ಏಪ್ರಿಲ್ 22) ಬೈಸರನ್ನಲ್ಲಿ ನೆರೆದಿದ್ದರು. ಶಾಲೆ-ಕಾಲೇಜು, ಕೆಲಸದ ಒತ್ತಡದಿಂದ ಸ್ವಲ್ಪ ದೂರವಿದ್ದು, ಪ್ರಕೃತಿಯ ಮಡಿಲಲ್ಲಿ ವಿರಮಿಸೋಣ ಎಂದು ಹೋದವರಿಗೆ ಈ ಸಂಭ್ರಮದ ಮಂಗಳವಾರವು ಕರಾಳ ಮಂಗಳವಾರವಾಗಿ ಬದಲಾಗುತ್ತದೆ ಎಂಬ ಅರಿವು ಕಿಂಚಿತ್ತೂ ಇರಲಿಲ್ಲ. ಬೈಸರನ್ ಹುಲ್ಲುಹಾಸಿನಲ್ಲಿ ಕುಳಿತು, ಮಧ್ಯಾಹ್ನ ತಮ್ಮ ಪ್ರೀತಿಪಾತ್ರರೊಂದಿಗೆ ಆಹಾರ ಸೇವಿಸುತ್ತಾ ಕುಳಿತಿದ್ದರು. ನಿನ್ನೆ ಮೊನ್ನೆ ಮದುವೆಯಾಗಿದ್ದ ನವಜೋಡಿಗಳೂ ಅಲ್ಲಿದ್ದವು. ಅಷ್ಟರಲ್ಲೇ ಅಲ್ಲಿಗೆ ಆ ರಣಹೇಡಿ ರಕ್ಕಸರ ಪ್ರವೇಶವಾಗಿತ್ತು.
ಕಣಿವೆ ಪ್ರದೇಶದ ಮೇಲ್ಭಾಗದಿಂದ ಎಕೆ 47 ರೈಫಲ್ ಗಳನ್ನು ಹಿಡಿದು ಆ ರಾಕ್ಷಸರು ಕೆಳಗಿಳಿದು ಬರತೊಡಗಿದರು. ಬೈಸರನ್ ಹುಲ್ಲುಹಾಸಿನ ಮೇಲೆ ಕುಳಿತಿದ್ದ ಪ್ರವಾಸಿಗರ ಮೇಲೆ ಉಗ್ರರು ಒಂದೇ ಸಮನೆ ಗುಂಡಿನ ಮಳೆಗರೆಯತೊಡಗಿದರು. ಪ್ರಶಾಂತವಾಗಿದ್ದ ಹಸಿರು ಹುಲ್ಲುಗಾವಲು ಪ್ರದೇಶದಲ್ಲಿ ಏಕಾಏಕಿ ಗುಂಡಿನ ಸದ್ದು ಮೊಳಗಿತು. ಅದರ ಜೊತೆ ಜೊತೆಗೆ ಕಿರುಚಾಟ, ಅರಚಾಟ, ಆಕ್ರಂದನ, ರೋದನ… ಸೌಂದರ್ಯದ ಖನಿಯಾಗಿದ್ದ ಬೈಸರನ್ ಕ್ಷಣಮಾತ್ರದಲ್ಲಿ ಪ್ರವಾಸಿಗರ ರಕ್ತದಿಂದ ತೋಯ್ದುಹೋಯಿತು.
26 ಜನರ ಮಾರಣಹೋಮ
ಬೈಸರನ್ ಪ್ರದೇಶಕ್ಕೆ ವಾಹನಗಳ ಸಂಪರ್ಕ ಇಲ್ಲ. ಅದು ಕಣಿವೆ ಪ್ರದೇಶವಾದ ಕಾರಣ ಕಾಲ್ನಡಿಗೆ ಅಥವಾ ಕುದುರೆಗಳ ಮೂಲಕವಷ್ಟೇ ಅಲ್ಲಿಗೆ ತೆರಳಲು ಸಾಧ್ಯ. ಹೀಗಾಗಿ ಅಲ್ಲಿಗೆ ಬಂದಿದ್ದ ಎಲ್ಲ ಪ್ರವಾಸಿಗರೂ ಕಾಲ್ನಡಿಗೆ ಹಾಗೂ ಕುದುರೆ ಸವಾರಿ ಮೂಲಕವೇ ಆಗಮಿಸಿದ್ದರು. ಅಲ್ಲಿಗೆ ಏಕಾಏಕಿ ದಾಳಿ ನಡೆಸಿದ ಉಗ್ರರು ತಮ್ಮ ಕೈಯ್ಯಲ್ಲಿದ್ದ ದ ಎಕೆ 47 ರೈಫಲ್ ಗಳಿಂದ ನಿರಾಯುಧ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮನಬಂದಂತೆ ಗುಂಡು ಹಾರಿಸಿದ್ದಾರೆ. ಮಹಿಳೆಯರು, ಮಕ್ಕಳೆದುರೇ ಗಂಡಸರನ್ನು ಕೊಂದು ಹಾಕಿದ್ದಾರೆ. ಶಿವಮೊಗ್ಗದ ಮಂಜುನಾಥ್ ರಾವ್, ಬೆಂಗಳೂರಿನ ಭರತ್ ಭೂಷಣ್ ಸೇರಿದಂತೆ 26 ಮಂದಿ ಈ ದಾಳಿಗೆ ಬಲಿಯಾಗಿದ್ದಾರೆ. 2001ರಲ್ಲಿ ಶ್ರೀನಗರದಲ್ಲಿ ನಡೆದ ಉಗ್ರರ ದಾಳಿಯ ಬಳಿಕ ನಡೆದ ಅತಿದೊಡ್ಡ ಹಾಗೂ ಭೀಕರ ದಾಳಿ ಇದಾಗಿದೆ. ಅಂದು ಶ್ರೀನಗರದಲ್ಲಿ ನಾಗರಿಕರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ್ದ ದಾಳಿಯಲ್ಲಿ 36 ಮಂದಿ ಹತರಾಗಿದ್ದರು.
ಧರ್ಮ ಯಾವುದೆಂದು ಕೇಳಿ ಗುಂಡಿಕ್ಕಿದರು
ದಾಳಿ ನಡೆಯುತ್ತಲೇ ಪ್ರವಾಸಿಗರು ಭಯಭೀತರಾಗಿ ಓಡತೊಡಗಿದರು. ಕೆಲವರು ಸಿಕ್ಕ ಸಿಕ್ಕ ಟೆಂಟ್ ಗಳಲ್ಲಿ ಅಡಗಿದರು. ಕೆಲವರಂತೂ ಇದು ಉಗ್ರರು ಮತ್ತು ಯೋಧರ ನಡುವಿನ ಗುಂಡಿನ ಚಕಮಕಿಯಾಗಿರಬಹುದು ಎಂದು ಭಾವಿಸಿದ್ದರು. ಆದರೆ ಸತ್ಯ ಗೊತ್ತಾಗುವಷ್ಟರಲ್ಲಿ ತಡವಾಗಿತ್ತು. ಉಗ್ರರು ಕಣ್ಣೆದುರೇ ನಿಂತಿದ್ದರು. ನಿಮ್ಮ ಧರ್ಮ ಯಾವುದು ಎಂದು ಪ್ರಶ್ನಿಸಿದರು. ಇಸ್ಲಾಮಿಕ್ ಶ್ಲೋಕ ಹೇಳುವಂತೆ ಸೂಚಿಸಿದರು. “ಗೊತ್ತಿಲ್ಲ” ಎಂದವರ ತಲೆಗೆ ಕ್ಷಣಮಾತ್ರದಲ್ಲಿ ಗುಂಡು ಹೊಕ್ಕಿತ್ತು.
ಕಲಿಮ ಹೇಳಲು ಅಪ್ಪನಿಗೆ ಬರಲಿಲ್ಲ
ನಾವು 5-6 ಜನ ಒಟ್ಟಿಗೇ ಕಾಶ್ಮೀರಕ್ಕೆ ಬಂದಿದ್ದೆವು. ದಾಳಿಯ ಸಮಯದಲ್ಲಿ ಬೈಸರನ್ ನಲ್ಲಿ ಊಟ ಮಾಡುತ್ತಿದ್ದೆವು. ಗುಂಡಿನ ದಾಳಿ ಕೇಳಿಸುತ್ತಲೇ ಎಲ್ಲರೂ ಟೆಂಟ್ ನೊಳಗೆ ಅಡಗಿಕೊಂಡೆವು. ಅಲ್ಲಿಗೆ ಬಂದ ಉಗ್ರರು, “ಚೌಧರಿ ತೂ ಬಾಹರ್ ಆ ಜಾ” ಎಂದರು. ಅಲ್ಲಿ ಚೌಧರಿ ಹೆಸರಿನವರು ಯಾರೂ ಇರಲಿಲ್ಲ. ಆದರೂ ನನ್ನ ಅಪ್ಪ ಮತ್ತು ದೊಡ್ಡಪ್ಪ ಹೊರಗೆ ಬಂದರು. ಅವರನ್ನು ಉದ್ದೇಶಿಸಿ, “ಕಲಿಮಾ ಹೇಳು” ಎಂದರು. ಅಪ್ಪ ಮತ್ತು ದೊಡ್ಡಪ್ಪ ಗೊತ್ತಿಲ್ಲ ಎಂದು ತಲೆಯಾಡಿಸಿದರು. ಕೂಡಲೇ ಅವರ ತಲೆ, ಕಿವಿಯ ಹಿಂಭಾಗ ಮತ್ತು ಬೆನ್ನಿಗೆ ಉಗ್ರರು ಗುಂಡಿನ ಮಳೆಗರೆದರು ಎಂದು ಹೇಳುತ್ತಾ ಮಹಾರಾಷ್ಟ್ರದ ಪುಣೆಯ ಯುವತಿಯೊಬ್ಬರು ಕಣ್ಣೀರು ಹಾಕಿದ್ದಾರೆ.
ಹೋಗು, ಮೋದಿಗೆ ಹೇಳು ಎಂದರು
ನನ್ನ ಪತಿಯನ್ನು ಮುಸ್ಲಿಂ ಅಲ್ಲ ಎಂಬ ಕಾರಣಕ್ಕಾಗಿಯೇ ಗುಂಡು ಹಾರಿಸಲಾಯಿತು ಎಂದು ಘಟನೆಯಲ್ಲಿ ಪಾರಾದ ಮಹಿಳೆಯೊಬ್ಬರು ವಿವರಿಸಿದ್ದಾರೆ. ಪತಿಯನ್ನು ಕೊಂದು ನಮ್ಮನ್ನು ಯಾಕೆ ಉಳಿಸಿದ್ದೀರಿ. ನನ್ನನ್ನೂ, ನನ್ನ ಮಗನನ್ನೂ ಇಲ್ಲೇ ಕೊಂದು ಬಿಡಿ ಎಂದು ನಾನು ಉಗ್ರರಲ್ಲಿ ಕೇಳಿಕೊಂಡೆ. ಆಗ ಅವರು, ನಿಮ್ಮನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳು ಎಂದರು ಎಂದೂ ಮಹಿಳೆಯೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಮಹಿಳೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತನ್ನ ಪತಿಯನ್ನು ಉಳಿಸಿಕೊಡುವಂತೆ ಕಣ್ಣೀರಿಡುತ್ತಲೇ ಮನವಿ ಮಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ನವವಿವಾಹಿತೆಯೊಬ್ಬಳು ತನ್ನ ಪತಿಯ ಮೃತದೇಹದ ಪಕ್ಕ ನಿಸ್ತೇಜಳಾಗಿ ಕುಳಿತಿದ್ದ ಫೋಟೋವೊಂದು ಎಂಥ ಕಲ್ಲುಹೃದಯವನ್ನೂ ಕರಗಿಸುವಂತಿತ್ತು. ನೆಲದ ಮೇಲೆ ಬಿದ್ದಿದ್ದ ಮೃತದೇಹದ ಪಕ್ಕದಲ್ಲಿ ಮಗುವೊಂದು ಅಳುತ್ತಾ ಕುಳಿತಿದ್ದ ದೃಶ್ಯ ಯಾತನಾಮಯವಾಗಿತ್ತು.
ಗುಂಡಿಗೆ ಬಲಿಯಾದ ನೌಕಾಧಿಕಾರಿಗೆ ವಾರದ ಹಿಂದೆ ಮದುವೆಯಾಗಿತ್ತು
ಏಪ್ರಿಲ್ 16ರಂದು ಮದುವೆಯಾಗಿದ್ದ ನೌಕಾಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್(26) ಅವರೂ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ರಜೆಯಲ್ಲಿದ್ದ ಅವರು ತಮ್ಮ ಪತ್ನಿಯೊಂದಿಗೆ ಹನಿಮೂನ್ ಗೆಂದು ಪಹಲ್ಗಾಮ್ ಗೆ ಬಂದಿದ್ದರು. 2 ವರ್ಷಗಳ ಹಿಂದಷ್ಟೇ ಅವರು ನೌಕಾಪಡೆಗೆ ಸೇರ್ಪಡೆಯಾಗಿ, ಕೇರಳದ ಕೊಚ್ಚಿಯಲ್ಲಿ ನಿಯೋಜಿತರಾಗಿದ್ದರು. ಅವರ ಸಾವಿಗೆ ನೌಕಾಪಡೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಒಬ್ಬೊಬ್ಬರನ್ನೂ ಹುಡುಕಿ ಬೇಟೆಯಾಡುತ್ತೇವೆ:
ಉಗ್ರರ ದಾಳಿಯ ಮಾಹಿತಿ ಸಿಗುತ್ತಲೇ ಕೆಂಡಾಮಂಡಲರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಈ ಹೀನ ಮತ್ತು ಘೋರ ಕೃತ್ಯದಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ. ಒಬ್ಬೊಬ್ಬರನ್ನೂ ಹುಡುಕಿ ಬೇಟೆಯಾಡುತ್ತೇವೆ” ಎಂದು ಆಕ್ರೋಶಭರಿತರಾಗಿ ನುಡಿದರು. ಅಮಾಯಕ ಪ್ರವಾಸಿಗರ ಮೇಲೆ ನಡೆದ ದಾಳಿ ಖಂಡನೀಯ. ಇದಕ್ಕೆ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರಧಾನಿ ನರೇಂದ್ರ ಮೋದಿಯವರೂ ಟ್ವೀಟ್ ಮಾಡಿ, ಉಗ್ರರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಅವರ ದುಷ್ಟ ಸಂಚುಗಳು ಎಂದಿಗೂ ಸಫಲವಾಗುವುದಿಲ್ಲ. ಭಯೋತ್ಪಾದನೆಯನ್ನು ಮಟ್ಟ ಹಾಕುವ ನಮ್ಮ ಸಂಕಲ್ಪ ಎಂದಿಗೂ ಅಚಲವಾಗಿರುತ್ತದೆ ಎಂದಿದ್ದಾರೆ.
ಶ್ರೀನಗರಕ್ಕೆ ದೌಡು
ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೊಡನೆ ಅಮಿತ್ ಶಾ ಅವರು ಶ್ರೀನಗರಕ್ಕೆ ದೌಡಾಯಿಸಿದರು. ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರೂ ಅಮಿತ್ ಶಾ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ನಂತರ ಕೂಡಲೇ ಕಾಶ್ಮೀರಕ್ಕೆ ತೆರಳುವಂತೆ ಸೂಚಿಸಿದರು. ಅದರಂತೆ, ಅಮಿತ್ ಶಾ ಅವರು ದೆಹಲಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿ, ಮುಗಿದ ಕೂಡಲೇ ಶ್ರೀನಗರಕ್ಕೆ ಧಾವಿಸಿದರು.
ಮೋದಿ ಪ್ರವಾಸ ಮೊಟಕು
ಪ್ರಧಾನಿ ಮೋದಿಯವರ 2 ದಿನಗಳ ಸೌದಿ ಅರೇಬಿಯಾ ಪ್ರವಾಸ ಮಂಗಳವಾರ ಬೆಳಗ್ಗೆ ಆರಂಭವಾಗಿತ್ತು. ರಾತ್ರಿ ಹೊತ್ತು ದಾಳಿಯ ಸುದ್ದಿ ಸಿಗುತ್ತಲೇ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ದಿಢೀರ್ ವಾಪಸಾದರು. ಸೌದಿ ಅರೇಬಿಯಾ ಸರ್ಕಾರವು ಮಂಗಳವಾರ ರಾತ್ರಿ ತಮಗೆಂದೇ ಆಯೋಜಿಸಿದ್ದ ವಿಶೇಷ ಔತಣಕೂಟದಲ್ಲೂ ಮೋದಿ ಭಾಗಿಯಾಗಲಿಲ್ಲ. ಬುಧವಾರ ಮುಂಜಾನೆ ಮೋದಿ ಸ್ವದೇಶಕ್ಕೆ ಬಂದಿಳಿದರು. ಆದರೆ ಸೌದಿಯಿಂದ ವಾಪಸಾಗುವಾಗ ಮೋದಿಯವರ ವಿಮಾನವು ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಬರದೇ ಬೇರೆ ಮಾರ್ಗವಾಗಿ ಭಾರತಕ್ಕೆ ಆಗಮಿಸಿದೆ.
ವಿಮಾನ ನಿಲ್ದಾಣದಲ್ಲೇ ಮೋದಿ ಸಭೆ
ಬುಧವಾರ ಬೆಳಗ್ಗೆ ಭಾರತಕ್ಕೆ ಬಂದಿಳಿದ ಪ್ರಧಾನಿ ಮೋದಿಯವರು ಸ್ವಲ್ಪವೂ ತಡ ಮಾಡದೇ ವಿಮಾನ ನಿಲ್ದಾಣದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಅವರೊಂದಿಗೆ ದಾಳಿ ನಂತರದ ಸ್ಥಿತಿಯ ಬಗ್ಗೆ ಮಾತುಕತೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು.
ಹೊಣೆಹೊತ್ತುಕೊಂಡ ಟಿಆರ್ ಎಫ್
ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಅಂಗ ಸಂಸ್ಥೆಯಾದ ದಿ ರೆಸಿಸ್ಟೆಂಟ್ ಫ್ರಂಟ್ ಅಂದರೆ ಟಿಆರ್ಎಫ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಹುಟ್ಟಿಕೊಂಡ ಉಗ್ರ ಸಂಘಟನೆ ಇದಾಗಿದೆ. 2023ರಲ್ಲಿ ಈ ಸಂಘಟನೆಯನ್ನು ಭಾರತ ಸರ್ಕಾರವು ಉಗ್ರ ಸಂಘಟನೆ ಎಂದು ಘೋಷಿಸಿದೆ.
ದಾಳಿಗೆ ವ್ಯಾಪಕ ಖಂಡನೆ
ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಈ ದಾಳಿಯನ್ನು ಪಕ್ಷಭೇದ ಮರೆತು ಎಲ್ಲ ರಾಜಕೀಯ ಪಕ್ಷಗಳೂ ಖಂಡಿಸಿವೆ. ಇದೊಂದು ಘೋರ ಹಾಗೂ ಅಮಾನವೀಯ ಕೃತ್ಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬಣ್ಣಿಸಿದ್ದಾರೆ. ಇಂತಹ ದಾಳಿಗಳು ಮಾನವೀಯತೆಗೆ ಕಳಂಕ. ಭಯೋತ್ಪಾದನೆಯ ವಿರುದ್ಧ ಹೋರಾಡಲು ಇಡೀ ರಾಷ್ಟ್ರವೇ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಜ್ಯಕ್ಕೆ ಬಂದ ಅತಿಥಿಗಳ ಮೇಲೆ ದಾಳಿ ನಡೆಸಿದವರು ಅಮಾನವೀಯ ಮೃಗಗಳು ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಡಿದು ಮಹಾರಾಷ್ಟ್ರ, ಕೇರಳ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ, ಇಸ್ರೇಲ್ ಪ್ರಧಾನಿ ನೆತನ್ಯಾಹು, ರಷ್ಯಾ ಅಧ್ಯಕ್ಷ ಪುಟಿನ್ ಸೇರಿದಂತೆ ಜಾಗತಿಕ ನಾಯಕರು ಕೂಡ ಘಟನೆಯನ್ನು ಖಂಡಿಸಿದ್ದಾರೆ. ಜನಸಾಮಾನ್ಯರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇಂದು ಕಾಶ್ಮೀರ ಬಂದ್
ದಾಳಿಯನ್ನು ಖಂಡಿಸಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಇಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿವೆ. ಜಮ್ಮು ಕಾಶ್ಮೀರದಲ್ಲೂ ಭಾರೀ ಪ್ರತಿಭಟನೆಗಳು ಆರಂಭವಾಗಿವೆ. ಇದೇ ವೇಳೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ಪ್ರತ್ಯೇಕತಾವಾದಿ ನಾಯಕ ಮಿರ್ವೇಜ್ ಉಮರ್ ಫಾರೂಕ್ ಅವರು ಇಂದು ಕಾಶ್ಮೀರ ಬಂದ್ ಗೆ ಕರೆ ನೀಡಿದ್ದಾರೆ. ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೆಚ್ಚುವರಿ ಪೊಲೀಸ್ ಹಾಗೂ ಅರೆಸೇನಾಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾದ ಅಮಿತ್ ಶಾ
ನಿನ್ನೆ ರಾತ್ರಿಯೇ ಶ್ರೀನಗರಕ್ಕೆ ಬಂದಿಳಿದಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರು ಇಂದು ಮುಂಜಾನೆ ಶ್ರೀನಗರದಲ್ಲಿ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಿ ಸಂತೈಸಿದರು. ಅದಾದ ಬಳಿಕ ಪಹಲ್ಗಾಂಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಘಟನೆ ನಡೆದ ಸ್ಥಳವನ್ನು ಅವರು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಗ್ರರ ರೇಖಾಚಿತ್ರ ಬಿಡುಗಡೆ
ಭದ್ರತಾ ಸಂಸ್ಥೆಗಳು ಇಂದು ಪಹಲ್ಗಾಂ ದಾಳಿಕೋರ ಉಗ್ರರ ರೇಖಾಚಿತ್ರವನ್ನು ಬಿಡುಗಡೆಮಾಡಿದ್ದಾರೆ. ಮೂವರು ಉಗ್ರರ ಚಿತ್ರಗಳನ್ನು ಸಿದ್ಧಪಡಿಸಲಾಗಿದ್ದು, ಅವರನ್ನು ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಿ ರೆಸಿಸ್ಟೆಂಟ್ ಫ್ರಂಟ್ ಸಂಘಟನೆಗೆ ಸೇರಿದವರು ಎಂದು ಹೇಳಲಾಗಿದೆ. ದಾಳಿಯಲ್ಲಿ ಕನಿಷ್ಠ 5-6 ಉಗ್ರರು ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ರಾಕ್ಷಸರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಕೂಡ ಭಾಗಿಯಾಗಲಿದೆ. ಉಗ್ರರು ಅರಣ್ಯಗಳಲ್ಲಿ ಅಡಗಿರುವ ಸಾಧ್ಯತೆಯೂ ಇರುವ ಕಾರಣ, ಅವರ ಹೆಡೆಮುರಿ ಕಟ್ಟಲು ಹೆಲಿಕಾಪ್ಟರ್ ಗಳ ಮೂಲಕವೂ ಶೋಧ ಕಾರ್ಯ ನಡೆಸಲಾಗುತ್ತಿದೆ.