ಬೆಂಗಳೂರು: ಕಪ್ಪು ನಮ್ಮದು ಸರಿ, ಆದರೆ ತಪ್ಪು ಯಾರದ್ದು? ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತಕ್ಕೆ 11 ಜನ ಬಲಿಯಾಗಿದ್ದು, ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಲ್ತುಳಿತ (Chinnaswamy Stampede) ಸರ್ಕಾರದ ಪ್ರಾಯೋಜಿತ. ಅದು ಅಮಾಯಕರ ಹತ್ಯಾಕಾಂಡ ಎಂದಿದ್ದಾರೆ.
ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದು ಐಪಿಎಲ್ ಅಧ್ಯಕ್ಷ ಹೇಳಿದ್ದಾರೆ. ಸರ್ಕಾರ ಕೇಳಿದ್ದಕ್ಕೆ ಗ್ರೌಂಡ್ ಕೊಟ್ಟಿದ್ದೇನೆ ಎಂದು ಕೆಎಸ್ಸಿಎ ಹೇಳಿದೆ. ಇದರಲ್ಲಿ ಕೆಎಸ್ಸಿಎ ಅವರದ್ದು ತಪ್ಪಿಲ್ಲ. ಆರ್ಸಿಬಿಯವರು ಎರಡು ಕಿ.ಮೀ ಮೆರವಣಿಗೆಗೆ ಕೇಳಿದ್ದರು. ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದು ಯಾರು ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ಪಂದ್ಯ ಮುಗಿಯುತ್ತಿದ್ದಂತೆ ಪೊಲೀಸರು ಬೆಳಗಿನ ಜಾವದವರೆಗೂ ಕೆಲಸ ಮಾಡಿದ್ದಾರೆ. ಪಾಪ ಅವರಿಗೆ ಇಡೀ ರಾತ್ರಿ ನಿದ್ದೆಯಿಲ್ಲ. ಆದರೆ, ಮಾರನೇ ದಿನವೇ ಮತ್ತೆ ಅವರನ್ನು ಡ್ಯೂಟಿಗೆ ಹಾಕಲಾಗಿದೆ. ಅವರಿಗೆ ಹೇಗೆ ಕೆಲಸ ಮಾಡಲು ಸಾಧ್ಯ? ಆ ಸಣ್ಣ ಕಾಮನ್ ಸೆನ್ಸ್ ಕೂಡ ಇವರಿಗೆ ಇಲ್ಲದಾಯಿತೇ ಎಂದು ಕಿಡಿಕಾರಿದ್ದಾರೆ.
ಹೈಕೋರ್ಟ್ ನಿರ್ಬಂಧಿತ ಸ್ಥಳ. ಅಲ್ಲಿ ಡ್ರೋನ್ ನಿಯೋಜಿಸಿದ್ದಾರೆ. ಇದು ಮುಠ್ಠಾಳ ಕೆಲಸ ಅಲ್ವಾ ಎಂದು ಪ್ರಶ್ನಿಸಿದ್ದಾರೆ.