ಪೂಂಚ್: ಬಿಜೆಪಿ ಹಾಗೂ ಆರೆಸ್ಸೆಸ್ ದೇಶದಲ್ಲಿ ದ್ವೇಷ ಬಿತ್ತುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಜಾತಿ, ಧರ್ಮ, ರಾಜ್ಯ ಮತ್ತು ಭಾಷೆಗಳ ಮಧ್ಯೆ ಒಡಕು ಮೂಡಿಸಿ, ಸಂಘರ್ಷ ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯು ಪಹಾರಿ ಮತ್ತು ಗುಜ್ಜರ್ ಸಮುದಾಯದ ಮಧ್ಯೆ ಬಿರುಕು ಮೂಡಿಸಲು ಯತ್ನಿಸಿದೆ. ಆದರೆ, ಅವರ ಯೋಜನೆ ವಿಫಲವಾಗಿದೆ. ದ್ವೇಷವನ್ನು ಪ್ರೀತಿಯಿಂದ ಮಾತ್ರ ಜಯಿಸಲು ಸಾಧ್ಯ. ಒಂದು ಕಡೆ ದ್ವೇಷವನ್ನು ಹರಡುವವರಿದ್ದಾರೆ ಮತ್ತು ಇನ್ನೊಂದು ಕಡೆ ಪ್ರೀತಿಯನ್ನು ಪ್ರಚಾರ ಮಾಡುವವರು ಇದ್ದಾರೆ. ಕಾಂಗ್ರೆಸ್ ಎಲ್ಲರನ್ನು ಒಟ್ಟುಗೂಡಿಸುವ ಮೂಲಕ ಮತ್ತು ಎಲ್ಲರಿಗೂ ಅವರ ಹಕ್ಕುಗಳನ್ನು ನೀಡುವ ಮೂಲಕ ದೇಶವನ್ನು ಹಿಂದೆಯೂ ಮುನ್ನಡೆಸಿತ್ತು. ಅದೇ ಸಿದ್ಧಾಂತ ಮೇಲೆ ಈಗಲೂ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಸಮರ್ಪಕ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ವಿದ್ಯಾವಂತರಿಗೆ ಉದ್ಯೋಗ ಸಿಗುತ್ತಿಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ.