ಡೆಹ್ರಾಡೂನ್/ಅಲ್ಮೋರಾ: “ವಯಸ್ಸಾದ ಮೇಲೆ ಮದುವೆಯಾಗುತ್ತೀರಾ? ಇಲ್ಲಿ ಮದುವೆಯಾಗಲು ಸಾಧ್ಯವಾಗದಿದ್ದರೆ, ನಾವು ಬಿಹಾರದಿಂದ ಹುಡುಗಿಯನ್ನು ತಂದು ಕೊಡುತ್ತೇವೆ. ಅಲ್ಲಿ 20,000 ರಿಂದ 25,000 ರೂಪಾಯಿಗೆಲ್ಲ ಹುಡುಗಿಯರು ಲಭ್ಯವಿದ್ದಾರೆ,” ಎಂದು ಉತ್ತರಾಖಂಡ ಸಚಿವೆ ರೇಖಾ ಆರ್ಯ ಅವರ ಪತಿ ಗಿರಿಧಾರಿ ಲಾಲ್ ಸಾಹು ನೀಡಿರುವ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಅವರ ಪತಿ ಗಿರಿಧಾರಿ ಲಾಲ್ ಸಾಹು ಅವರು ಕಳೆದ ತಿಂಗಳು ಅಲ್ಮೋರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ರೀತಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು, “ನನ್ನ ಜೊತೆ ಬನ್ನಿ, ನಾನು ನಿಮಗೆ ಮದುವೆ ಮಾಡಿಸುತ್ತೇನೆ,” ಎಂದು ಹೇಳುತ್ತಿರುವುದು ಕಂಡುಬಂದಿದೆ.
ವಿಪಕ್ಷಗಳ ಆಕ್ರೋಶ
ಸಾಹು ಅವರ ಈ ಹೇಳಿಕೆಗೆ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಬಿಹಾರ ರಾಜ್ಯ ಮಹಿಳಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಉತ್ತರಾಖಂಡ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗಣೇಶ್ ಗೋಡಿಯಾಲ್ ಪ್ರತಿಕ್ರಿಯಿಸಿ, “ಸಚಿವೆ ಆರ್ಯ ಅವರ ಪತಿಯ ಈ ಹೇಳಿಕೆ ಭಾರತದ ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ. ಹೆಣ್ಣುಮಕ್ಕಳು ಬಿಹಾರ, ಕೇರಳ, ಉತ್ತರಾಖಂಡ ಎಲ್ಲಿಯವರೇ ಆಗಿರಲಿ, ಇದು ಖಂಡನೀಯ. ಇದು ಬಿಜೆಪಿಯವರು ಮಹಿಳೆಯರಿಗೆ ಎಷ್ಟು ಗೌರವ ನೀಡುತ್ತಾರೆ ಎಂಬುದನ್ನು ತೋರಿಸುತ್ತದೆ,” ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಜ್ಯೋತಿ ರೌಟೇಲಾ, “ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯ ಪತಿಯೇ ಇಂತಹ ಅವಮಾನಕರ ಮಾತುಗಳನ್ನಾಡುವುದು ನಾಚಿಕೆಗೇಡಿನ ಸಂಗತಿ. ಇಂತಹ ಮನಸ್ಥಿತಿಯು ಮಾನವ ಕಳ್ಳಸಾಗಣೆ, ಬಾಲ್ಯವಿವಾಹ ಮತ್ತು ಮಹಿಳೆಯರ ಶೋಷಣೆಯಂತಹ ಸಾಮಾಜಿಕ ಪಿಡುಗುಗಳನ್ನು ಉತ್ತೇಜಿಸುತ್ತದೆ,” ಎಂದು ಕಟುವಾಗಿ ಟೀಕಿಸಿದ್ದಾರೆ.
ವಿವಾದದ ಬೆನ್ನಲ್ಲೇ ಸಾಹು ಕ್ಷಮೆಯಾಚನೆ
ವಿವಾದ ಭುಗಿಲೇಳುತ್ತಿದ್ದಂತೆ ಬಿಜೆಪಿ ರಾಜ್ಯ ಘಟಕವು ಸಾಹು ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಮಾತನಾಡಿ, “ಪಕ್ಷವು ಮಹಿಳೆಯರ ವಿರುದ್ಧದ ಇಂತಹ ದ್ವೇಷಪೂರಿತ ಚಿಂತನೆ ಮತ್ತು ಹೇಳಿಕೆಗಳನ್ನು ಬಲವಾಗಿ ಖಂಡಿಸುತ್ತದೆ. ಸಾಹು ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತ ಗಿರಿಧಾರಿ ಲಾಲ್ ಸಾಹು ಅವರು ಸ್ಪಷ್ಟೀಕರಣ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ತಮ್ಮ ಮಾತುಗಳನ್ನು ತಿರುಚಲಾಗಿದೆ ಎಂದು ಹೇಳಿಕೊಂಡಿದ್ದಾರೆ. “ನಾನು ನನ್ನ ಸ್ನೇಹಿತನ ಮದುವೆ ಬಗ್ಗೆ ಮಾತನಾಡುತ್ತಿದ್ದೆ. ನನ್ನ ಮಾತುಗಳು ಯಾರಿಗಾದರೂ ನೋವುಂಟು ಮಾಡಿದ್ದರೆ, ನಾನು ಕೈಮುಗಿದು ಕ್ಷಮೆಯಾಚಿಸುತ್ತೇನೆ,” ಎಂದು ತಿಳಿಸಿದ್ದಾರೆ.
ಬಿಹಾರ ಮಹಿಳಾ ಆಯೋಗದಿಂದ ನೋಟಿಸ್
ಬಿಹಾರ ರಾಜ್ಯ ಮಹಿಳಾ ಆಯೋಗ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಆಯೋಗದ ಅಧ್ಯಕ್ಷೆ ಅಪ್ಸರಾ ಅವರು, “ಅವರ ಹೇಳಿಕೆ ಅತ್ಯಂತ ಖಂಡನೀಯ ಮತ್ತು ಇದು ಅವರ ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ. ಪತ್ನಿ ಸಚಿವೆಯಾಗಿದ್ದರೂ ಮಹಿಳೆಯರ ಬಗ್ಗೆ ಇಂತಹ ಹೇಳಿಕೆ ನೀಡುವುದು ಹೇಗೆ ಸಾಧ್ಯ? ನಾವು ಅವರಿಗೆ ನೋಟಿಸ್ ಜಾರಿ ಮಾಡುತ್ತೇವೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ತಿರುಪತಿ ದೇಗುಲದ ಗೋಪುರವೇರಿದ ಕುಡುಕ | ಕೆಳಗಿಳಿಯಲು ‘ಕ್ವಾರ್ಟರ್’ ಬಾಟಲಿಗೆ ಡಿಮ್ಯಾಂಡ್!



















