ಶ್ರೇಯಸ್ ಅಯ್ಯರ್ ಮೂರನೇ ಏಕದಿನ ಪಂದ್ಯದ ನಡುವೆ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಅಲ್ಲಿ ಅವರಿಗೆ ಮೊದಲು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಶ್ರೇಯಸ್ ಅಯ್ಯರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಈ ಬಗ್ಗೆ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಕ್ಯಾನ್ಬೇರಾದಲ್ಲಿ ನಾಳೆ ನಡೆಯುವ ಟಿ20 ಪಂದ್ಯಕ್ಕೂ ಮೊದಲು ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಸೂರ್ಯಕುಮಾರ್ ಅವರು ಮಾತನಾಡಿ, ಶ್ರೇಯಸ್ ಅಯ್ಯರ್ ಟಿ20 ತಂಡದಲ್ಲಿ ಇಲ್ಲದಿದ್ದರೂ ಇಡೀ ಭಾರತ ತಂಡ ಅವರೊಂದಿಗೆ ಸಂಪರ್ಕದಲ್ಲಿದೆ. ಅವರ ಆರೋಗ್ಯ ಸ್ಥಿರವಾಗಿದ್ದು ಐಸಿಯುನಿಂದ ಈಗಾಗಲೇ ಹೊರ ಬಂದಿದ್ದಾರೆ. ಅಯ್ಯರ್ ಎಲ್ಲರ ಜೊತೆ ಮಾತನಾಡುತ್ತಿದ್ದಾರೆ. ಮೆಸೇಜ್ಗಳಿಗೆ ರಿಪ್ಲೇ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನನಗೆ ಯಾವಾಗ ಶ್ರೇಯಸ್ ಅಯ್ಯರ್ ಇಂಜುರಿಗೆ ಒಳಗಾಗಿದ್ದಾರೆ ಎಂದು ಗೊತ್ತಾಯಿತೋ ತಕ್ಷಣ ಭೌತಚಿಕಿತ್ಸಕ ಕಮಲೇಶ್ ಜೈನ್ ಅವರಿಗೆ ಫೋನ್ ಮಾಡಿ ಅಪ್ಡೇಟ್ ತೆಗೆದುಕೊಂಡೆ. ಬಳಿಕ ಅಯ್ಯರ್ಗೆ ಮೆಸೇಜ್ ಮಾಡಿದೆ. ಅದಕ್ಕೆ ಅವರು ರಿಪ್ಲೇ ಮಾಡಿದ್ದಾರೆ. ಅಂದರೆ ಶ್ರೇಯಸ್ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಅವರ ಜೊತೆ ಇದ್ದು, ಎಲ್ಲರ ಜೊತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಅಂತಹ ಟ್ಯಾಲೆಂಟೆಡ್ ಪ್ಲೇಯರ್ಗೆ ಅಪರೂಪಕ್ಕೆ ಒಮ್ಮೆ ಅಪರೂಪದ ಗಾಯಗಳು ಸಂಭವಿಸುತ್ತವೆ. ಇಂತಹ ಆಕಸ್ಮಿಕ ಘಟನೆಗಳು ಯಾವಗಲೋ ಒಮ್ಮೆ ನಮ್ಮ ಅದೃಷ್ಟ ಕೆಟ್ಟಾಗ ಸಂಭವಿಸುತ್ತವೆ. ಸದ್ಯ ಅವರಿಗೆ ಏನು ಆಗಿಲ್ಲ, ಚೆನ್ನಾಗಿದ್ದಾರೆ. ನಾವು ಟಿ20 ಸರಣಿ ಮುಗಿಸಿಕೊಂಡು ಹೋಗುವಾಗ ಶ್ರೇಯಸ್ ಅಯ್ಯರ್ ಅವರನ್ನು ಜೊತೆಯಲ್ಲಿ ಭಾರತಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಸೂರ್ಯಕುಮಾರ್ ಹೇಳಿದ್ಧಾರೆ.
ಈಗಾಗಲೇ ಒಡಿಐ ಸರಣಿಯನ್ನು ಸೋತಿರುವ ಟೀಮ್ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ನಾಳೆ ಮೊದಲ ಮ್ಯಾಚ್ ಕ್ಯಾನ್ಬೇರಾದಲ್ಲಿ ನಡೆಯಲಿದ್ದು, ಸದ್ಯ ಎಲ್ಲಾ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಏಷ್ಯಾ ಕಪ್ನಲ್ಲಿ ಗೆಲುವು ಪಡೆದಿರುವ ಸೂರ್ಯಕುಮಾರ್ ಪಡೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಭರವಸೆಯಲ್ಲಿದೆ.
ಇದನ್ನೂ ಓದಿ : SJ-100 ಪ್ಯಾಸೆಂಜರ್ ವಿಮಾನ ತಯಾರಿಕೆ : ರಷ್ಯನ್ ಕಂಪನಿ ಜೊತೆ ಎಚ್ಎಎಲ್ ಒಪ್ಪಂದ



















