ನವದೆಹಲಿ: ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Attack) ವೇಳೆ ಭದ್ರತಾ ಲೋಪ ಆಗಿದ್ದು ನಿಜ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.”ಏನೂ ತಪ್ಪೇ ಆಗಿರದಿದ್ದರೆ, ನಾವು ಇಲ್ಲಿ ಏಕೆ ಕುಳಿತುಕೊಳ್ಳುತ್ತಿದ್ದೆವು? ಎಲ್ಲೋ ಲೋಪ ಆಗಿದೆ. ಅದನ್ನು ನಾವು ಕಂಡುಹಿಡಿಯಬೇಕಾಗಿದೆ” ಎಂದು ಆಡಳಿತ ಪಕ್ಷದ ನಾಯಕರೊಬ್ಬರು ಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ತಿಳಿಸಿದರು ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬೈಸರನ್ನಲ್ಲಿ 26 ಜನ ಪ್ರವಾಸಿಗರ ಸಾವಿಗೆ ಕಾರಣವಾದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ನಾಯಕರಿಗೆ ಘಟನೆ ಬಗ್ಗೆ ಮಾಹಿತಿ ನೀಡಲು ಸರ್ಕಾರವು ಗುರುವಾರ ಸರ್ವಪಕ್ಷ ಸಭೆಯನ್ನು ನಡೆಸಿತ್ತು.ಸರ್ವಪಕ್ಷ ಸಭೆಯಲ್ಲಿ, ಪ್ರತಿಪಕ್ಷಗಳ ಹಲವು ನಾಯಕರು ಭದ್ರತೆಯಲ್ಲಿ ಆಗಿರುವ ವೈಫಲ್ಯಗಳ ಕುರಿತು ಪ್ರಶ್ನಿಗಳನ್ನು ಕೇಳಿದ್ದಾರೆ ಎನ್ನಲಾಗಿದೆ. “ಅಂತಹ ಭೀಕರ ದಾಳಿ ನಡೆಯುವಾಗ ಭದ್ರತಾ ಪಡೆಗಳು ಎಲ್ಲಿದ್ದವು? ಕೇಂದ್ರ ಮೀಸಲು ಪೊಲೀಸ್ ಪಡೆ ಎಲ್ಲಿತ್ತು?” ಎಂದು ಹಲವು ನಾಯಕರು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಸರ್ಕಾರ, ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಬೈಸರನ್ ಪ್ರದೇಶವನ್ನು ಪ್ರವಾಸಿಗರಿಗೆ ಮುಕ್ತಗೊಳಿಸುವ ಮುನ್ನ ಸ್ಥಳೀಯ ಅಧಿಕಾರಿಗಳು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದೆ. ಇದೇ ವೇಳೆ, ಅಂತಹ ಭೀಕರ ದಾಳಿ ನಡೆದ ಬಳಿಕವೂ ಪೊಲೀಸರಾಗಲೀ, ಸೇನೆಯಾಗಲೀ ಘಟನಾ ಸ್ಥಳಕ್ಕೆ ಬರಲು ವಿಳಂಬವಾಗಿದ್ದೇಕೆ ಎಂಬ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ಸರ್ಕಾರ, ದಾಳಿ ನಡೆದ ಸ್ಥಳವನ್ನು ತಲುಪಬೇಕೆಂದರೆ 45 ನಿಮಿಷಗಳ ಕಾಲ ಎತ್ತರದ ಪ್ರದೇಶದಲ್ಲಿ ನಡೆಯಬೇಕು. ತುರ್ತು ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ವಹಿಸಲು ಯಾವುದೇ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್ಒಪಿ) ಅಲ್ಲಿ ಜಾರಿಯಲ್ಲಿಲ್ಲ ಎಂದು ವಿವರಿಸಿತು ಎನ್ನಲಾಗಿದೆ.
ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ಭಯೋತ್ಪಾದನೆ ವಿರುದ್ಧ ಭಾರತ ಒಗ್ಗಟ್ಟಿನಿಂದ ಹೋರಾಡಬೇಕು ಎಂಬ ನಿರ್ಧಾರಕ್ಕೆ ಎಲ್ಲಾ ಪಕ್ಷಗಳು ಬಂದಿವೆ ಎಂದು ಹೇಳಿದ್ದಾರೆ.
“ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಎಲ್ಲಾ ಪಕ್ಷಗಳು ಸರ್ಕಾರದೊಂದಿಗೆ ಇರುವುದಾಗಿ ಭರವಸೆ ನೀಡಿವೆ. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಅದನ್ನು ಬೆಂಬಲಿಸುತ್ತೇವೆ ಎಂದು ಎಲ್ಲಾ ಪಕ್ಷಗಳ ನಾಯಕರು ಒಂದೇ ಧ್ವನಿಯಲ್ಲಿ ಹೇಳಿದ್ದಾರೆ. ಸಭೆ ಸಕಾರಾತ್ಮಕವಾಗೆ ಕೊನೆಗೊಂಡಿತು” ಎಂದೂ ರಿಜಿಜು ಹೇಳಿದ್ದರು.
ಏತನ್ಮಧ್ಯೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರೂ ಪ್ರತಿಕ್ರಿಯಿಸಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಯಾವುದೇ ಕ್ರಮ ತೆಗೆದುಕೊಳ್ಳಲು ಪ್ರತಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿವೆ ಎಂದು ಹೇಳಿದ್ದಾರೆ.
ಸಭೆಯಲ್ಲಿದ್ದವರು ಯಾರು?
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಉನ್ನತ ಸಚಿವರು ಸರ್ವಪಕ್ಷ ಸಭೆಯಲ್ಲಿ ಸರ್ಕಾರವನ್ನು ಪ್ರತಿನಿಧಿಸಿದರು. ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಸಭೆ ಸದನದ ನಾಯಕ ಜೆ.ಪಿ.ನಡ್ಡಾ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು.
ಇದಲ್ಲದೇ ಎನ್ಸಿಪಿ-ಎಸ್ಪಿ ನಾಯಕಿ ಸುಪ್ರಿಯಾ ಸುಳೆ, ಎನ್ಸಿಪಿ ನಾಯಕ ಪ್ರಫುಲ್ ಪಟೇಲ್, ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ಬಿಜೆಡಿಯ ಸಸ್ಮಿತ್ ಪಾತ್ರಾ, ಲಾವು ಶ್ರೀ ಕೃಷ್ಣ ದೇವರಾಯಲು (ಟಿಡಿಪಿ), ಶ್ರೀಕಾಂತ್ ಶಿಂಧೆ (ಶಿವಸೇನೆ), ಸಂಜಯ್ ಸಿಂಗ್ (ಎಎಪಿ), ಸುದೀಪ್ ಬಂಡೋಪಾಧ್ಯಾಯ (ಟಿಎಂಸಿ), ಪ್ರೇಮಚಂದ್ ಗುಪ್ತಾ (ಆರ್ಜೆಡಿ), ಟಿ ಶಿವ (ಡಿಎಂಕೆ) ಮತ್ತು ರಾಮ್ ಗೋಪಾಲ್ ಯಾದವ್ (ಎಸ್ಪಿ) ಸಭೆಯಲ್ಲಿ ಭಾಗವಹಿಸಿದ್ದರು.