ಕೋಟಾ: ಸರಿಯಾಗಿ 6 ವರ್ಷಗಳ ಹಿಂದೆ ನೋವು, ದುಃಖದ ಮಡುವಿನಲ್ಲಿ ಮುಳುಗಿದ್ದ ಆ ಕುಟುಂಬದಲ್ಲಿ ಈಗ ಮುಗುಳ್ನಗು… ಮನೆಯಲ್ಲಿ ಮದುವೆಯ ಸಂಭ್ರಮ….
ಅದರಲ್ಲೂ ವಿಶೇಷವಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೇ ಸ್ವತಃ ಆ ಮನೆಗೆ ಬಂದು ಮನೆ ಮಗಳ ಮದುವೆಯನ್ನು ನೆರವೇರಿಸಿಕೊಟ್ಟಾಗ ಎಲ್ಲರ ಕಣ್ಣಂಚಲ್ಲೂ ನೀರು… ಬಿರ್ಲಾ ಅವರ ಮೊಗದಲ್ಲಿ ಸಾರ್ಥಕ ಭಾವ…
ಹೌದು, 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ(Pulwama attack)ದಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧ ಹೇಮರಾಜ್ ಅವರ ಪುತ್ರಿಯ ವಿವಾಹವನ್ನು ಈಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತಾವೇ ಸ್ವತಃ ನಿಂತು ನಡೆಸಿಕೊಟ್ಟಿದ್ದಾರೆ. ಈ ಮೂಲಕ 6 ವರ್ಷಗಳ ಹಿಂದೆ ಈ ಕುಟುಂಬಕ್ಕೆ ಕೊಟ್ಟಿದ್ದ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಇದರ ಫೋಟೋ, ವಿಡಿಯೋಗಳು ಈಗ ವೈರಲ್(Viral news) ಆಗಿವೆ.
ರಾಜಸ್ಥಾನದ ಕೋಟಾ-ಬುಂಡಿ ಕ್ಷೇತ್ರದ ಸಂಸದರೂ ಆಗಿರುವ ಬಿರ್ಲಾ ಅವರು ಯೋಧ ಹೇಮರಾಜ್ ಪುತ್ರಿ ರೀನಾ ಮೀನಾ(26) ಅವರ ವಿವಾಹವನ್ನು ನಡೆಸಿಕೊಡುವ ಬಗ್ಗೆ 6 ವರ್ಷದ ಹಿಂದೆಯೇ ಉಡುಗೊರೆ ನೀಡಿ ವಾಗ್ದಾನ ಮಾಡಿದ್ದರು. ಶುಕ್ರವಾರ ಸಂಗೋಡ್ ಗ್ರಾಮದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವಧುವಿನ ತಾಯಿಯ ಅಣ್ಣನ ಸ್ಥಾನ ವಹಿಸಿ. ವಿವಾಹ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

2019ರಲ್ಲಿ ಪುಲ್ವಾಮಾದಲ್ಲಿ ಭಾರೀ ಪ್ರಮಾಣದ ಸ್ಫೋಟಕ ತುಂಬಿದ್ದ ವಾಹನವನ್ನು ಸೇನಾ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ ಉಗ್ರರು, 40 ಸಿಆರ್ಪಿಎಫ್ ಯೋಧರನ್ನು ಹತ್ಯೆಗೈದಿದ್ದರು. ಈ ವೇಳೆ ಹೇಮರಾಜ್ ಅವರೂ ಹುತಾತ್ಮರಾಗಿದ್ದರು. ಆ ಸಮಯದಲ್ಲಿ ಕೋಟಾ-ಬುಂದಿ ಸಂಸದರಾಗಿದ್ದ ಓಂ ಬಿರ್ಲಾ ಅವರು, ಹುತಾತ್ಮ ಯೋಧನ ಮನೆಗೆ ಭೇಟಿ ಕೊಟ್ಟು ಕುಟುಂಬ ಸದಸ್ಯರನ್ನು ಸಂತೈಸಿದ್ದರಲ್ಲದೇ, ನೀವು ಯಾವತ್ತೂ ಒಬ್ಬಂಟಿಗರಲ್ಲ. ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದು ಮಾತು ಕೊಟ್ಟಿದ್ದರು. ನಾನು ನಿಮ್ಮ ಅಣ್ಣನಂತೆ ಎಂದೂ ಯೋಧ ಹೇಮರಾಜ್ ಅವರ ಪತ್ನಿ ಮಧುಬಾಲಾರನ್ನು ಬಿರ್ಲಾ ಸಮಾಧಾನಿಸಿದ್ದರು. ತದನಂತರ ಪ್ರತಿ ವರ್ಷ ರಕ್ಷಾಬಂಧನದ ದಿನದಂದು ಆ ಮನೆಗೆ ಭೇಟಿ ನೀಡುತ್ತಿದ್ದ ಬಿರ್ಲಾ ಅವರು, ತಂಗಿ ಮಧುಬಾಲಾರಿಂದ ರಕ್ಷೆ ಕಟ್ಟಿಸಿಕೊಳ್ಳುತ್ತಿದ್ದರು.
ಈಗ ಕೊಟ್ಟ ಮಾತಿನಂತೆ ಅವರು ಮಧುಬಾಲಾ ಅವರ ಮಗಳ ಮದುವೆಯನ್ನು ತಾವೇ ನಿಂತು ಮಾಡಿಸಿದ್ದಾರೆ. “ರೀನಾಳ ಮಾವನಾಗಿ ಇಂದು ಈ ಮದುವೆ ನಡೆಸಿಕೊಡುವುದು ನನ್ನ ಕರ್ತವ್ಯ” ಎಂದು ಹೇಳಿರುವ ಬಿರ್ಲಾ ಅವರು, ಮಾವನ ಸ್ಥಾನದಲ್ಲಿ ನಿಂತು ಮದುಮಗಳಿಗೆ ಸಾಂಪ್ರದಾಯಿಕ ಉಡುಗೊರೆಗಳನ್ನೂ ನೀಡಿದ್ದಾರೆ.