ನವದೆಹಲಿ : ದೆಹಲಿಯ ಅಬಕಾರಿ ನೀತಿ ಹಗರಣದ ಆರೋಪದಲ್ಲಿ ದೋಷಮುಕ್ತ ಎಂದು ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾವುಕರಾದ ಘಟನೆ ನಡೆದಿದೆ. ನ್ಯಾಯಾಲಯದಿಂದ ಖುಲಾಸೆಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಎರಡು ವರ್ಷಗಳಲ್ಲಿ ತಾವು ಅನುಭವಿಸಿದ ನೋವು ಮತ್ತು ಅವಮಾನದ ಬಗ್ಗೆ ವಿವರಿಸುತ್ತಲೇ ಏಕಾಏಕಿ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಅವರ ಜೊತೆಯಲ್ಲಿದ್ದ ಆಪ್ತ ಗೆಳೆಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೇಜ್ರಿವಾಲ್ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು.
ವಿಚಾರಣಾ ನ್ಯಾಯಾಲಯದ ತೀರ್ಪಿನ ನಂತರ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ಇದು ಕೇವಲ ಕಾನೂನು ಹೋರಾಟವಲ್ಲ, ನಮ್ಮ ವಿರುದ್ಧ ಹೆಣೆಯಲಾಗಿದ್ದ ಬೃಹತ್ ರಾಜಕೀಯ ಪಿತೂರಿಯ ಅಂತ್ಯ” ಎಂದು ಬಣ್ಣಿಸಿದರು. “ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬ ಹಾಲಿ ಮುಖ್ಯಮಂತ್ರಿಯನ್ನು ಮನೆಯಿಂದ ಎಳೆದುಕೊಂಡು ಹೋಗಿ ಆರು ತಿಂಗಳು ಜೈಲಿನಲ್ಲಿ ಇಡಲಾಯಿತು. ಉಪಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾ ಅವರನ್ನು 2 ವರ್ಷ ಜೈಲಲ್ಲಿಡಲಾಯಿತು. ಆಮ್ ಆದ್ಮಿ ಪಕ್ಷವನ್ನು ನಾಶಮಾಡಲು ನಮ್ಮ ಐವರು ಪ್ರಮುಖ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ತಳ್ಳಲಾಯಿತು,” ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಕಟ್ಟರ್ ಇಮಾಂದಾರ್’ ಎಂಬ ಸತ್ಯ ಸಾಬೀತು
ತಮ್ಮ ಪ್ರಾಮಾಣಿಕತೆಯ ಬಗ್ಗೆ ಮಾತನಾಡುತ್ತಾ ಕೇಜ್ರಿವಾಲ್ ಕಣ್ಣೀರಿಟ್ಟರು. “ಇಷ್ಟು ದಿನ ಟಿವಿ ಚಾನೆಲ್ಗಳಲ್ಲಿ ಚರ್ಚೆಗಳು ನಡೆಯುತ್ತಿದ್ದವು, ಕೇಜ್ರಿವಾಲ್ ಒಬ್ಬ ಭ್ರಷ್ಟ ಎಂದು ಸುದ್ದಿಗಳು ಬಿತ್ತರವಾಗುತ್ತಿದ್ದವು. ಆದರೆ ನಾನು ಕೇವಲ ಪ್ರಾಮಾಣಿಕತೆಯಿಂದಲೇ ಬದುಕನ್ನು ಕಟ್ಟಿಕೊಂಡವನು. ಇಂದು ನ್ಯಾಯಾಲಯವು ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷ ‘ಕಟ್ಟರ್ ಇಮಾಂದಾರ್’ (ಅಪ್ಪಟ ಪ್ರಾಮಾಣಿಕ) ಎಂದು ಸಾಬೀತುಪಡಿಸಿದೆ,” ಎಂದು ಗದ್ಗದಿತರಾದರು. ಜತೆಗೆ, ಕೇಜ್ರಿವಾಲ್ ಭ್ರಷ್ಟ ಅಲ್ಲ, ನಾನು ಭ್ರಷ್ಟನಲ್ಲ ಎಂದು ಹೇಳುತ್ತಾ ಜೋರಾಗಿ ಅತ್ತರು. ಈ ವೇಳೆ ಸುತ್ತಮುತ್ತಲಿದ್ದ ಬೆಂಬಲಿಗರು “ಧೈರ್ಯ ತಂದುಕೊಳ್ಳಿ ಸರ್” ಎಂದು ಅವರಿಗೆ ಸಮಾಧಾನಪಡಿಸಲು ಪ್ರಯತ್ನಿಸಿದರು.
ಹೋರಾಟದ ಹಾದಿಯಲ್ಲಿ ಹೊಸ ಚೈತನ್ಯ
2006ರಲ್ಲಿ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತರಾಗಿದ್ದ ಕೇಜ್ರಿವಾಲ್, ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ರಾಜಕೀಯಕ್ಕೆ ಬಂದವರು. ಈಗ ಅದೇ ಭ್ರಷ್ಟಾಚಾರದ ಆರೋಪದಿಂದ ಮುಕ್ತರಾಗಿರುವುದು ಪಕ್ಷಕ್ಕೆ ಹೊಸ ಆಕ್ಸಿಜನ್ ನೀಡಿದಂತಾಗಿದೆ. ಸುಮಾರು ಎರಡು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಮನೀಶ್ ಸಿಸೋಡಿಯಾ ಮತ್ತು ಕೇಜ್ರಿವಾಲ್ ಅವರ ಭಾವುಕ ಭೇಟಿಯು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ.
“ಸತ್ಯಮೇವ ಜಯತೇ”:
“ಇದು ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕೆ ಸಂದ ಜಯ. ಸರ್ವಾಧಿಕಾರಿ ಧೋರಣೆಗೆ ನ್ಯಾಯಾಲಯವು ಕಪಾಳಮೋಕ್ಷ ಮಾಡಿದೆ. ಬಿಜೆಪಿಯು ಸುಳ್ಳು ಕೇಸುಗಳ ಮೂಲಕ ದೆಹಲಿ ಸರ್ಕಾರವನ್ನು ಉರುಳಿಸಲು ಯತ್ನಿಸಿತ್ತು, ಆದರೆ ಈಗ ಅವರ ಮುಖಕ್ಕೆ ಮಸಿ ಬಳಿದಂತಾಗಿದೆ,” ಎಂದು ಆಪ್ ನಾಯಕ ಸಂಜಯ್ ಸಿಂಗ್ ಕಿಡಿಕಾರಿದ್ದಾರೆ. “ಕೇಜ್ರಿವಾಲ್ ಅವರನ್ನು ರಾಜಕೀಯವಾಗಿ ಮುಗಿಸಲು ನಡೆಸಿದ ಸಂಚು ವಿಫಲವಾಗಿದೆ. ಈ ಪ್ರಕರಣವು ಕೇವಲ ರಾಜಕೀಯ ಪ್ರೇರಿತ ಎಂಬುದು ಈಗ ಜಗತ್ತಿಗೇ ತಿಳಿಯಿತು,” ಎಂದು ದೆಹಲಿ ಮಾಜಿ ಸಿಎಂ ಆತಿಶಿ ಮರ್ಲೇನಾ ಹೇಳಿದ್ದಾರೆ. “ಕೇಂದ್ರ ಸಂಸ್ಥೆಗಳ ದುರುಪಯೋಗಕ್ಕೆ ಇದೊಂದು ಸ್ಪಷ್ಟ ಉದಾಹರಣೆ” ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ತಾಂತ್ರಿಕ ಬಿಡುಗಡೆ ಅಷ್ಟೇ: ಬಿಜೆಪಿ
ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ ಆದರೆ ಭ್ರಷ್ಟಾಚಾರ ನಡೆದಿಲ್ಲ ಎಂದು ಇದರ ಅರ್ಥವಲ್ಲ ಎಂದು ಬಿಜೆಪಿ ವಾದಿಸಿದೆ. “ಸಿಬಿಐ ಸರಿಯಾದ ಸಾಕ್ಷ್ಯಗಳನ್ನು ನೀಡುವಲ್ಲಿ ವಿಫಲವಾಗಿರಬಹುದು, ಆದರೆ ಅಬಕಾರಿ ನೀತಿಯನ್ನು ಹಿಂಪಡೆದಿದ್ದೇ ಅವ್ಯವಹಾರಕ್ಕೆ ಸಾಕ್ಷಿ,” ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂಡಿಬಂದ ಬೃಹತ್ ಮೊತ್ತಗಳು | ಶ್ರೀಲಂಕಾ, ಭಾರತದ ಐತಿಹಾಸಿಕ ಸಾಧನೆ



















