ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ನಾಯಕ ಹಾಗೂ ಭಾರತ ವಿರೋಧಿ ಧೋರಣೆಯ ಹೋರಾಟಗಾರ ಷರೀಫ್ ಉಸ್ಮಾನ್ ಹಾದಿ ಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಹಳಿ ತಪ್ಪಿಸುವ ಉದ್ದೇಶದಿಂದ ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳೇ ಈ ಹತ್ಯೆ ನಡೆಸಿವೆ ಎಂದು ಮೃತನ ಸಹೋದರ ಶರೀಫ್ ಒಮರ್ ಹಾದಿ ಗಂಭೀರ ಆರೋಪ ಮಾಡಿದ್ದಾರೆ.
ಇಂಕ್ವಿಲಾಬ್ ಮಂಚ್ ಸಂಘಟನೆ ಆಯೋಜಿಸಿದ್ದ ‘ಶಹೀದಿ ಶಪಥ್’ (ಹುತಾತ್ಮರ ಪ್ರತಿಜ್ಞೆ) ಕಾರ್ಯಕ್ರಮದಲ್ಲಿ ಮಾತನಾಡಿದ ಒಮರ್ ಹಾದಿ, ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
“ನೀವೇ ಕೊಲ್ಲಿಸಿ, ಈಗ ನಾಟಕವಾಡುತ್ತಿದ್ದೀರಿ”
ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ ಒಮರ್, “ಉಸ್ಮಾನ್ ಹಾದಿಯನ್ನು ಕೊಂದಿದ್ದು ನೀವೇ. ಈಗ ಆ ಹತ್ಯೆಯನ್ನೇ ನೆಪವಾಗಿಟ್ಟುಕೊಂಡು ಚುನಾವಣೆಯನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಸಂಚು ರೂಪಿಸುತ್ತಿದ್ದೀರಿ,” ಎಂದು ಕಿಡಿಕಾರಿದರು. ಫೆಬ್ರವರಿಯೊಳಗೆ ರಾಷ್ಟ್ರೀಯ ಚುನಾವಣೆ ನಡೆಯಬೇಕೆಂದು ತಮ್ಮ ಸಹೋದರ ಬಯಸಿದ್ದ. ಆದ್ದರಿಂದ ಅಧಿಕಾರಿಗಳು ಚುನಾವಣಾ ವಾತಾವರಣವನ್ನು ಹಾಳುಗೆಡವಬಾರದು ಎಂದು ಅವರು ಆಗ್ರಹಿಸಿದರು.
“ಯಾವುದೇ ಏಜೆನ್ಸಿಗಳು ಅಥವಾ ‘ವಿದೇಶಿ ಯಜಮಾನ’ರಿಗೆ ತಲೆಬಾಗದ ಕಾರಣಕ್ಕಾಗಿಯೇ ನನ್ನ ಸಹೋದರನನ್ನು ಹತ್ಯೆ ಮಾಡಲಾಗಿದೆ,” ಎಂದು ಅವರು ಇದೇ ವೇಳೆ ಆರೋಪಿಸಿದರು.
ಸರ್ಕಾರಕ್ಕೆ ಎಚ್ಚರಿಕೆ
ಹತ್ಯೆಯ ಆರೋಪಿಗಳನ್ನು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ ಅವರು, “ಸರ್ಕಾರ ಈವರೆಗೆ ತನಿಖೆಯಲ್ಲಿ ಯಾವುದೇ ಪ್ರಗತಿ ತೋರಿಸಿಲ್ಲ. ಒಂದು ವೇಳೆ ಉಸ್ಮಾನ್ ಹಾದಿಗೆ ನ್ಯಾಯ ಸಿಗದಿದ್ದರೆ, ನೀವೂ ಕೂಡ ಮುಂದೊಂದು ದಿನ ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕಾದ ಸ್ಥಿತಿ ಬರುತ್ತದೆ,” ಎಂದು ಎಚ್ಚರಿಕೆ ನೀಡಿದರು.
ಏನಿದು ಪ್ರಕರಣ?
ಕಳೆದ ವರ್ಷದ ಜುಲೈನಲ್ಲಿ ನಡೆದ ಬಾಂಗ್ಲಾದೇಶದ ದಂಗೆಯಲ್ಲಿ ಮುಂಚೂಣಿಯಲ್ಲಿದ್ದ ಹಾಗೂ ಭಾರತ ವಿರೋಧಿ ನಿಲುವು ಹೊಂದಿದ್ದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರನ್ನು ಡಿಸೆಂಬರ್ 12 ರಂದು ಢಾಕಾದ ಬಿಜಾಯ್ನಗರ ಪ್ರದೇಶದಲ್ಲಿ ಗುಂಡಿಕ್ಕಲಾಗಿತ್ತು. ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಹತ್ತಿರದಿಂದ ತಲೆಗೆ ಗುಂಡು ಹಾರಿಸಿದ್ದರು. ಸಿಂಗಾಪುರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 18 ರಂದು ಅವರು ಮೃತಪಟ್ಟಿದ್ದರು.
ಈ ಹತ್ಯೆಯನ್ನು ಖಂಡಿಸಿ ಬಾಂಗ್ಲಾದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಹಂತಕರ ಪತ್ತೆಗೆ ಸರ್ಕಾರಕ್ಕೆ 30 ದಿನಗಳ ಗಡುವನ್ನು ನೀಡಲಾಗಿದೆ.
ಇದನ್ನೂ ಓದಿ : ಟೀಮ್ ಇಂಡಿಯಾಗೆ ಇಶಾನ್ ಕಿಶನ್ ‘ರೀ-ಎಂಟ್ರಿ’ ; ಬಾಗಿಲು ತಟ್ಟಲಿಲ್ಲ, ಒದ್ದು ಒಳಬಂದ ಜಾರ್ಖಂಡ್ ಡೈನಮೈಟ್!



















