ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
ನಿಯಮ ಉಲ್ಲಂಘಿಸಿ ಸಾಯಿ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆರೋಪ ಈಗ ಅವರ ವಿರುದ್ಧ ಕೇಳಿ ಬಂದಿದೆ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಲೋಕಾಯುಕ್ತ ಎಡಿಜಿಪಿ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 2011ರಲ್ಲಿ ಗಣಿ ಗುತ್ತಿಗೆಯಲ್ಲಿ ಅಕ್ರಮ ಆಗಿದೆ ಎಂದು ಸಂತೋಷ್ ಹೆಗಡೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕಿರಲಿಲ್ಲ.
ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ತನಿಖೆಗೆ ಆದೇಶ ನೀಡುವಂತೆ ಪತ್ರ ಬರೆದಿದ್ದಾರೆ. ಈ ಪತ್ರದ ಬೆನ್ನಲ್ಲೇ ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳು, ನ್ಯಾ.ಸಂತೋಷ್ ಹೆಗಡೆ ವರದಿ ಆಧರಿಸಿಯೇ ತನಿಖೆ ಶುರು ಮಾಡಿದ್ದಾರೆ. ಇನ್ನೊಂದೆಡೆ ಲೋಕಾಯುಕ್ತ ಎಸ್ ಐಟಿಯಿಂದ ಕುಮಾರಸ್ವಾಮಿ ಜಾಮೀನು ರದ್ದುಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ.
ಶ್ರೀಸಾಯಿ ಮಿನರಲ್ಸ್ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿದ್ದರು. ಈಗ ತನಿಖೆಯನ್ನು ಲೋಕಾಯುಕ್ತ ಆರಂಭಸಿದೆ. ಕುಮಾರಸ್ವಾಮಿ ಜಾಮೀನು ರದ್ದು ಕೋರಿ ಎಸ್ ಐಟಿ, ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಹೀಗಾಗಿ ಗಂಗೇನಹಳ್ಳಿ ಜತೆ, ಶ್ರೀಸಾಯಿ ಮಿನರಲ್ಸ್ ಪ್ರಕರಣ ಕುಮಾರಸ್ವಾಮಿಗೆ ಉರುಳಾಗುವ ಸಾಧ್ಯತೆಗಳಿವೆ.
ಬಳ್ಳಾರಿಯ ಸಂಡೂರು ತಾಲೂಕಿನಲ್ಲಿರುವ ಸರ್ಕಾರದ 550 ಎಕರೆ ಪ್ರದೇಶಕ್ಕೆ ಗಣಿ ಗುತ್ತಿಗೆ ಮಂಜೂರಾತಿ ಮಾಡುವಂತೆ 2006 ಏಪ್ರಿಲ್ನಲ್ಲೇ ಅರ್ಜಿ ಸಲ್ಲಿಸಲಾಗಿತ್ತು. ಸೋಮನಾಥ ವಿ.ಸಾಕ್ರೆ ರಾಜಕುಮಾರ್ ಅಗರವಾಲ್ ಅವರ ಕಂಪನಿ ಇದಾಗಿದೆ. ಗಣಿ ಗುತ್ತಿಗೆಗೆ ಕೋರಿ ಅರ್ಜಿಯೊಂದಿಗೆ ಎರಡು ಡಿಡಿ, ಚೆಕ್ ಸಲ್ಲಿಸಿದ್ದರು ಎನ್ನಲಾಗಿದೆ.
ಆದರೆ, ವಿನೋದ್ ಗೋಯಲ್ ಇಲಾಖೆ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.
ಜಯಚಂದ್ರ, ಜವರೇಗೌಡ ಎಂಬುವವರ ಜೊತೆಗೆ ಶಾಮೀಲಾಗಿ ಅಕ್ರಮವೆಸಗಿರುವ ಆರೋಪ ಕೂಡ ಕೇಳಿ ಬಂದಿದೆ. ಆದರೆ, ವಿನೋದ್ ಯಾವುದೇ ಅರ್ಜಿ ಹಾಕಿರಲಿಲ್ಲ ಎಂದು ಕೂಡ ತಿಳಿದು ಬಂದಿದೆ. ಸಿಎಂ ಆಗಿದ್ದ ಕುಮಾರಸ್ವಾಮಿ ಒಳಸಂಚಿನಿಂದ ಸಂಡೂರು ಬಳಿಯ 550 ಎಕರೆ ಭೂಮಿ ಮಂಜೂರು ಆರೋಪ ಇದೆ. 2007ರಲ್ಲಿ ಇಲಾಖೆಗೆ ಕಡತ ಸಲ್ಲಿಸಲು ಖುದ್ದು ಕುಮಾರಸ್ವಾಮಿಯೇ ನಿರ್ದೇಶನ ನೀಡಿರುವ ಆರೋಪವಿದೆ.
ಇದರೊಂದಿಗೆ ಕುಮಾರಸ್ವಾಮಿ ಖನಿಜ ರಿಯಾಯಿತಿ ನಿಯಾಮವಳಿ 1960ಕ್ಕೆ ವಿರುದ್ಧವಾಗಿ ಆದೇಶ ನೀಡಿದ್ದು, ಯಾವುದೇ ಸ್ಪಷ್ಟ ಕಾರಣ ನೀಡದಿರುವ ಆರೋಪವೂ ಇದೆ. ನಾನು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇನೆ. ಎಲ್ಲವನ್ನೂ ಪರಿಶೀಲನೆ ಮಾಡಿಯೇ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಗೆ ಭೂಮಿ ಮಂಜೂರು ಮಾಡಲಾಗಿದೆ ಎಂದು 2007 ರ ಕಡತದಲ್ಲಿ ಕುಮಾರಸ್ವಾಮಿ ಬರೆದಿರುವ ಕುರಿತು ಆರೋಪ ಕೂಡ ಇದೆ. ಹೀಗಾಗಿ ಈ ಎಲ್ಲ ಆರೋಪಗಳ ಪ್ರಕರಣದ ಹಿನ್ನೆಲೆಯಲ್ಲಿ ಈಗ ಲೋಕಾಯುಕ್ತ ತನಿಖೆ ಕೈಗೊಂಡಿದೆ.