ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಕಾಮಗಾರಿಯಿಂದ ಯಡವಟ್ಟೊಂದು ನಡೆದಿದ್ದು, ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ನಡೆದಿದೆ.
ಕಾಸಿಂ ಸಾಬ್ (35) ಸಾವನ್ನಪ್ಪಿರುವ ದುರ್ದೈವಿ. ಕೋಗಿಲು ಕ್ರಾಸ್ ಬಳಿ ಈ ದುರಂತ ನಡೆದಿದೆ. ಲಾರಿಯಲ್ಲಿ ವೈಡಕ್ಟ್ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ಮೆಟ್ರೋ ಕಾಮಗಾರಿಗಾಗಿ 18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡಕ್ಟ್ ತೆಗೆದುಕೊಂಡು ಹೋಗಲಾಗುತ್ತಿತ್ತು. ಕೋಗಿಲು ಕ್ರಾಸ್ ನಲ್ಲಿ ತಿರುವು ವೇಳೆ ಈ ದುರಂತ ಸಂಭವಿಸಿದೆ.
ಈ ವೇಳೆ ಟ್ರ್ಯಾಕ್ ಗೆ ಹಾಕುವ ಬೃಹತಾಕಾರದ ತಡೆಗೋಡೆ ಉರುಳಿದೆ. ಪರಿಣಾಮ ಲಾರಿ ತುಂಡಾಗಿದೆ. ಹೀಗಾಗಿ ಬೃಹತ್ ವಯಾಡಕ್ಟ್ ಲಾರಿ ಪಕ್ಕದಲ್ಲೇ ನಿಂತಿದ್ದ ಆಟೋದ ಮೇಲೆ ಬಿದ್ದಿದೆ. ಆಟೋದಲ್ಲಿದ್ದ ಪ್ಯಾಸೆಂಜರ್, ಲಾರಿ ಕಂಡ ಕೂಡಲೇ ಕೆಳಗೆ ಇಳಿದಿದ್ದಾರೆ. ಆದರೆ ಆಟೋ ಚಾಲಕ ಇಳಿಯುವಷ್ಟರಲ್ಲಿ ವಯಾಡಕ್ಟ್ ಆತನ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಟೋ ನುಜ್ಜುಗುಜ್ಜಾಗಿದೆ.
ರಸ್ತೆ ಬ್ಲಾಕ್ ಮಾಡದೆ, ಸೆಕ್ಯುರಿಟಿ ವಾಹನ ಇಲ್ಲದೆ ಬಂದಿದ್ದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ವೈಡಕ್ಟ್ ಸಾಗಿಸುತ್ತಿದ್ದ ಲಾರಿ ಒನ್ ವೇನಲ್ಲಿ ಬಂದಿದ್ದರ ಕುರಿತು ಕೂಡ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚಾಲಕನನ್ನು ಅರೆಸ್ಟ್ ಮಾಡಲಾಗಿದೆ. BMRCL ಹಾಗೂ ಗುತ್ತಿಗೆ ಪಡೆದಿದ್ದ ಖಾಸಗಿ ಕಂಪನಿಗೆ ನೋಟಿಸ್ ನೀಡಲು ತಯಾರಿ ನಡೆದಿದೆ.