ಪಹಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಮತ್ತೊಂದು ದೊಡ್ಡ ಶಾಕ್ ನೀಡಿದೆ.
ಪಾಕಿಸ್ತಾನದಲ್ಲಿ ತಯಾರಾಗುವ ಮತ್ತು ಪಾಕಿಸ್ತಾನಿಗಳ ಮಾಲೀಕತ್ವದ ಕಂಪನಿಗಳ ಎಲ್ಲ ವಸ್ತುಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆಮದು ಮಾಡಿಕೊಳ್ಳುವುದರ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಉಗ್ರರು 26 ಮಂದಿಯನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಈಗ ಭಾರತ ನೆರೆರಾಷ್ಟ್ರದೊಂದಿಗಿನ ನೇರ ಅಥವಾ ಪರೋಕ್ಷ ಆಮದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈಗಾಗಲೇ ಪಾಕ್ ನೊಟ್ಟಿಗಿದ್ದ ಏಕೈಕ ಭೂ ವ್ಯವಹಾರಿಕ ತಾಣ ಅಟ್ಟಾರಿ-ವಾಘಾ ಗಡಿಯನ್ನು ಬಂದ್ ಮಾಡಲಾಗಿದೆ.
ಇದೀಗ ಅನ್ಯ ರಾಷ್ಟ್ರಗಳ ಮೂಲಕ ಭಾರತಕ್ಕೆ ಬರುತ್ತಿದ್ದ ಪಾಕಿಸ್ತಾನದಲ್ಲಿ ಸಿದ್ಧವಾದ ಇಲ್ಲವೇ ಪಾಕ್ ಮೂಲದ ಉದ್ಯಮಿಯ ಸಂಸ್ಥೆಯಿಂದ ಆಮದಾಗುವ ಎಲ್ಲ ವಸ್ತುಗಳನ್ನೂ ನಿರ್ಬಂಧಿಸಲಾಗಿದೆ. ಅಡುಗೆ ಎಣ್ಣೆಗೆ ಬಳಕೆಯಾಗುವ ಕಚ್ಚಾವಸ್ತು, ಹತ್ತಿ, ಡ್ರೈಫ್ರೂಟ್ಸ್ ಮತ್ತು ಔಷಧಿಗಳು ಹೆಚ್ಚಾಗಿ ಪಾಕ್ ನಿಂದ ಆಮದಾಗುತ್ತಿದ್ದವು. ಆದರೆ, ಈಗ ಅವುಗಳಿಗೆ ಸಂಪೂರ್ಣವಾಗಿ ತಡೆಯೊಡ್ಡಲಾಗಿದೆ.