ಶಿವಮೊಗ್ಗ: ಅಂಗನವಾಡಿಯಲ್ಲಿ ಬೇರೊಂದು ಬಾಲಕನ ಜೊತೆ ಜಗಳವಾಡಿ ಕಚ್ಚಿದ ಬಾಲಕನಿಗೆ ಅಂಗನವಾಡಿ ಸಹಾಯಕಿ ಬರೆ ಹಾಕಿರುವ ಘಟನೆ ಸೊರಬ ತಾಲೂಕು ಚಿಕ್ಕಕಸವಿ ಗ್ರಾಮದಲ್ಲಿ ನಡೆದಿದೆ.
ಚಕ್ಕಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರೂವರೆ ವರ್ಷದ ಮಗ ಯೋಧಮೂರ್ತಿಗೆ ಬರೆ ಹಾಕಲಾಗಿದೆ ಎಂಬ ಆರೋಪ ಮಾಡಲಾಗಿದೆ.
ಬಾಲಕ ಎಂದಿನಂತೆ ಗುರುವಾರ ಅಂಗನವಾಡಿಗೆ ಬಂದಿದ್ದಾನೆ. ಈ ವೇಳೆ ಬಾಲಕ ತನ್ನ ಸಹಪಾಠಿಯೊಂದಿಗೆ ಜಗಳಮಾಡಿಕೊಂಡು ಆತನಿಗೆ ಕಚ್ಚಿದ್ದಾನೆ. ಇದರಿಂದ ಕೋಪಗೊಂಡ ಅಂಗನವಾಡಿ ಸಹಾಯಕಿ ಬೆಂಕಿಯಲ್ಲಿ ಚಾಕು ಕಾಯಿಸಿ, ಬಾಲಕನ ಎರಡು ಗಲ್ಲಕ್ಕೆ ಬರೆ ಹಾಕಿದ್ದಾರೆ ಎಂದು ದೂರಲಾಗಿದೆ. ಇದರಿಂದ ಬಾಲಕನ ಎರಡು ಗಲ್ಲ ಸುಟ್ಟು ಗಾಯಗೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಬಾಲಕ ಮನೆಗೆ ಬಂದಾಗ ಪೋಷಕರಿಗೆ ವಿಷಯ ಗೊತ್ತಾಗಿದ್ದು, ಪೋಷಕರು ಅಂಗನವಾಡಿಗೆ ಹೋದಾಗ ಹೇಮಮ್ಮ ಅಲ್ಲಿಂದ ಪರಾರಿಯಾಗಿದ್ದಾರೆ. ಇದರಿಂದ ಪೋಷಕರು ನಿನ್ನೆ ರಾತ್ರಿ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಗನನ್ನು ಇಂದು ಅಂಗನವಾಡಿಗೆ ಕಳುಹಿಸದೇ ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಬಾಲಕನ ತಂದೆ ಚಂದ್ರಪ್ಪ ಮಾತನಾಡಿ, “ನನ್ನ ಮಗನನ್ನು ಬೆಳಗ್ಗೆ ಅಂಗನವಾಡಿಗೆ ಕಳುಹಿಸಿದ್ದೆ. ಅಲ್ಲಿ ನನ್ನ ಮಗ ಬೇರೆ ಯಾವುದೋ ಹುಡುಗನ ಜೊತೆ ಗಲಾಟೆ ಮಾಡಿ, ಅವನ ಬಾಯಿಗೆ ಕಚ್ಚಿದ ಅಂತ, ಅಂಗನವಾಡಿ ಸಹಾಯಕಿ ಮಗನಿಗೆ ಬರೆ ಹಾಕಿದ್ದಾರೆ. ಚಾಕುವನ್ನು ಗ್ಯಾಸ್ನಲ್ಲಿ ಬಿಸಿ ಮಾಡಿ ಎರಡೂ ಗಲ್ಲಕ್ಕೂ ಬರೆ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಬಾರದ ಬೆಳೆ; ಎತ್ತುಗಳ ಮಾರಾಟಕ್ಕೆ ಮುಂದಾದ ರೈತ



















