ಸಿಂಗಾಪುರ: ಸಿಂಗಾಪುರದ ಶಾಲೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್(Pawan Kalyan’s son) ಅವರು ಗಾಯಗೊಂಡಿದ್ದಾರೆ.
ಮಾರ್ಕ್ ಅವರ ಕೈ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಜೊತೆಗೆ ಅಗ್ನಿ ಅವಘಡದ ವೇಳೆ ಹೊಗೆಯು ಅವರ ದೇಹ ಸೇರಿರುವ ಕಾರಣ ಉಸಿರಾಟಕ್ಕೂ ಸಮಸ್ಯೆಯಾಗಿದೆ ಎಂದು ಆರಂಭಿಕ ವರದಿಗಳು ತಿಳಿಸಿವೆ. ಸದ್ಯ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅಲ್ಲೂರಿ ಸೀತಾರಾಮ ರಾಜು (ಎಎಸ್ಆರ್) ಜಿಲ್ಲೆಯ ಮಾನ್ಯಂನಲ್ಲಿ ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಅದನ್ನು ಮುಗಿಸಿದ ಬಳಿಕ ಅವರು ವಿಶಾಖಪಟ್ಟಣಂನಿಂದ ಸಿಂಗಾಪುರಕ್ಕೆ ತೆರಳುವ ನಿರೀಕ್ಷೆಯಿದೆ. ಮಾನ್ಯಮ್ ಭೇಟಿಯ ನಂತರ, ಅವರು ತಮ್ಮ ಉಳಿದ ಎಲ್ಲಾ ಕಾರ್ಯಕ್ರಮಗಳನ್ನೂ ರದ್ದು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪವನ್ ಕಲ್ಯಾಣ್ ಅವರ 2 ದಿನಗಳ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಹೀಗಾಗಿ ಕಾರ್ಯಕ್ರಮವನ್ನು ಬಿಟ್ಟು ತೆರಳಲು ಅವರಿಗೆ ಇಷ್ಟವಿರಲಿಲ್ಲ. ಆದರೆ, ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು, ಮೊದಲು ಸಿಂಗಾಪುರಕ್ಕೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿ ಎಂದು ಮನವೊಲಿಸಿದ ಬಳಿಕ ಅವರು ಹೊರಡಲು ಒಪ್ಪಿಕೊಂಡರು. ಕಲ್ಯಾಣ್ ಅವರು ಬುಡಕಟ್ಟು ಗ್ರಾಮಕ್ಕೆ ಭೇಟಿ ನೀಡುವುದಾಗಿ ಜನರಿಗೆ ಭರವಸೆ ನೀಡಿದ್ದರು. ತಮ್ಮ ಮಾತು ತಪ್ಪುವುದು ಅವರಿಗೆ ಇಷ್ಟ ಇರಲಿಲ್ಲ ಎಂದು ಅವರ ಜನಸೇನಾ ಪಕ್ಷ ಟ್ವೀಟ್ ನಲ್ಲಿ ತಿಳಿಸಿದೆ.
“ನಾನು ಅರಕು ಬಳಿಯ ಕುರಿಡಿ ಗ್ರಾಮಕ್ಕೆ ಭೇಟಿ ನೀಡುವುದಾಗಿ ನಿನ್ನೆ ಆ ಗ್ರಾಮದ ಬುಡಕಟ್ಟು ಜನರಿಗೆ ಭರವಸೆ ನೀಡಿದ್ದೆ… ಆದ್ದರಿಂದ ನಾನು ಆ ಹಳ್ಳಿಗೆ ಹೋಗಿ, ಅವರೊಂದಿಗೆ ಮಾತನಾಡುತ್ತೇನೆ ಮತ್ತು ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಯತ್ನಿಸುತ್ತೇನೆ” ಎಂದು ಪವನ್ ಕಲ್ಯಾಣ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆ ನಿಟ್ಟಿನಲ್ಲಿ ಸೋಮವಾರದಿಂದ ಕಲ್ಯಾಣ್ ಅವರ ಎಎಸ್ಆರ್ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳ ಪ್ರವಾಸ ನಿಗದಿಯಾಗಿತ್ತು.



















