ಮುಂಬೈ: ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಭಾಷಾ ಸಮರ(Language row) ತೀವ್ರಗೊಂಡಿರುವಂತೆಯೇ ಮುಂಬೈನಲ್ಲಿ ವಾಸಿಸಲು ಮರಾಠಿ ತಿಳಿದಿರಲೇಬೇಕೆಂಬ ಅಗತ್ಯವಿಲ್ಲ ಎಂದು ಪ್ರತಿಪಾದಿಸುವ ಮೂಲಕ ಆರ್ಎಸ್ಎಸ್ ಹಿರಿಯ ಮುಖಂಡ(RSS leader) ಭಯ್ಯಾಜಿ ಜೋಶಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಮಹಾರಾಷ್ಟ್ರದ ಘಾಟ್ಕೋಪರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋಶಿ ಅವರು ಈ ಹೇಳಿಕೆ ನೀಡಿದ್ದು, ಇದರ ವಿರುದ್ಧ ಶಿವಸೇನೆ (ಯುಬಿಟಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
“ಮುಂಬೈ(Mumbai) ಒಂದೇ ಭಾಷೆಯನ್ನು ಹೊಂದಿಲ್ಲ. ಮುಂಬೈನ ಪ್ರತಿಯೊಂದು ಭಾಗವು ವಿಭಿನ್ನ ಭಾಷೆಯನ್ನು ಹೊಂದಿದೆ. ಘಾಟ್ಕೋಪರ್ ಪ್ರದೇಶದ ಭಾಷೆ ಗುಜರಾತಿ. ಹಾಗಾಗಿ ನೀವು ಮುಂಬೈ(Mumbai)ನಲ್ಲಿ ವಾಸಿಸುತ್ತಿದ್ದರೆ, ನೀವು ಮರಾಠಿ ಕಲಿಯುವ ಅಗತ್ಯವಿಲ್ಲ” ಎಂದು ಜೋಶಿ ಹೇಳಿದ್ದಾರೆ. ಜೋಶಿ ಅವರು ಈ ಭಾಷಣ ಮಾಡುವ ವೇಳೆ ಮಹಾರಾಷ್ಟ್ರ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರೂ ವೇದಿಕೆಯಲ್ಲಿದ್ದರು.
ಸ್ಥಳೀಯ ಭಾಷೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮರಾಠಿಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಹಿರಿಯ ಆರ್ಎಸ್ಎಸ್ ನಾಯಕನಿಂದ ಈ ಹೇಳಿಕೆ ಹೊರಬಿದ್ದಿದೆ. ಶಿವಸೇನೆ ಮತ್ತು ರಾಜ್ ಠಾಕ್ರೆ ಅವರ ಎಂಎನ್ಎಸ್ನಂತಹ ರಾಜಕೀಯ ಪಕ್ಷಗಳು ದೈನಂದಿನ ವ್ಯವಹಾರದಲ್ಲಿ ಮರಾಠಿಯನ್ನು ಬಳಸಲೇಬೇಕೆಂದು ಆಕ್ರಮಣಕಾರಿಯಾಗಿ ಎಲ್ಲರ ಮೇಲೂ ಒತ್ತಡ ಹೇರುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಅಲ್ಲದೇ, ಮಹಾರಾಷ್ಟ್ರದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಮರಾಠಿ ಮಾತನಾಡಲು ನಿರಾಕರಿಸಿದ ವ್ಯಕ್ತಿಗಳ ಮೇಲೂ ದಾಳಿಗಳು ನಡೆದಂಥ ಘಟನೆಗಳೂ ವರದಿಯಾಗಿವೆ.
ಇದನ್ನೂ ಓದಿ: 140 ಕೋಟಿ ಜನರಿರುವ ದೇಶದಲ್ಲಿ ಶತಕೋಟ್ಯಧೀಶರ ಸಂಖ್ಯೆ ಎಷ್ಟು? ಇಲ್ಲಿದೆ ಮಾಹಿತಿ
ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಜೋಶಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಥಾಣೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಜಯ್ ರಾವತ್, “ಬಿಜೆಪಿಯ ನೀತಿ ನಿರೂಪಕ ಮತ್ತು ಆರ್ಎಸ್ಎಸ್ ನಾಯಕ ಭಯ್ಯಾಜಿ ಜೋಶಿ ಅವರು ನಿನ್ನೆ ಮುಂಬೈಗೆ ಬಂದು ಮರಾಠಿ ರಾಜಧಾನಿಯ (ಮುಂಬೈ) ಭಾಷೆ ಅಲ್ಲ ಎಂದು ಹೇಳಿದ್ದಾರೆ. ಅವರಿಗೆ ಈ ರೀತಿ ಮಾತನಾಡುವ ಹಕ್ಕನ್ನು ಕೊಟ್ಟವರು ಯಾರು? ನೀವು ಕೋಲ್ಕತ್ತಾಗೆ ಹೋಗಿ ಬಂಗಾಳಿ ಅವರ ಭಾಷೆ ಅಲ್ಲ ಎಂದು ಹೇಳುತ್ತೀರಾ? ನೀವು ಲಕ್ನೋಗೆ ಹೋಗಿ ಯೋಗಿ ಆದಿತ್ಯನಾಥ್ ಅವರ ಮುಂದೆ ಹಿಂದಿ ಅವರ ಭಾಷೆ ಅಲ್ಲ ಎಂದು ಹೇಳುತ್ತೀರಾ? ನೀವು ಚೆನ್ನೈಗೆ ಹೋಗಿ ಅವರ ಭಾಷೆ ತಮಿಳು ಅಲ್ಲ ಎಂದು ಹೇಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ (ಎನ್ಇಪಿ) ‘ತ್ರಿಭಾಷಾ ಸೂತ್ರ’ ಕುರಿತು ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಕೇಂದ್ರ ಸರ್ಕಾರದ ನಡುವೆ ವಿವಾದ ಭುಗಿಲೆದ್ದಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.
ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಈ ಕ್ರಮವನ್ನು ದಕ್ಷಿಣದ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನವೆಂದು ದೀರ್ಘಕಾಲದಿಂದ ಆರೋಪಿಸುತ್ತಾ ಬಂದಿದ್ದರೆ, ಕೇಂದ್ರ ಸರ್ಕಾರವು ಎಲ್ಲ ಪ್ರದೇಶಗಳಲ್ಲೂ ಯುವಕರಿಗೆ ಉದ್ಯೋಗ ಸಿಗಲಿ ಎಂಬ ನಿಟ್ಟಿನಲ್ಲಿ ತ್ರಿಭಾಷಾ ಸೂತ್ರ ಜಾರಿ ಮಾಡಿರುವುದಾಗಿ ವಾದಿಸುತ್ತಿದೆ.