ಭೋಪಾಲ್ : ಆಂಬ್ಯುಲೆನ್ ಡೋರ್ ಜಾಮ್ ಆದ ಕಾರಣ ಹೊರಬರಲಾರದೆ ತೀವ್ರ ಅಸ್ವಸ್ಥರಾಗಿದ್ದ 67 ವರ್ಷದ ರೋಗಿಯೊಬ್ಬರು ಮೃತಪಟ್ಟ ದುರ್ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಸಂಭವಿಸಿದೆ.
ಮೃತರನ್ನು ರಾಮ್ ಪ್ರಸಾದ್ ಎಂದು ಗುರುತಿಸಲಾಗಿದೆ. ಅವರನ್ನು ರಾಮನಗರ ಸಮುದಾಯ ಆರೋಗ್ಯ ಕೇಂದ್ರದಿಂದ ಸತ್ನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕುಟುಂಬ ಸದಸ್ಯರ ಪ್ರಕಾರ ಶನಿವಾರ (ಜನವರಿ 24) ಬೆಳಗ್ಗೆ ಮನೆಯಲ್ಲಿ ಬಿಸಿ ನೀರು ಕಾಯಿಸಿಕೊಳ್ಳುತ್ತಿದ್ದಾಗ ರಾಮ್ ಪ್ರಸಾದ್ ಕುಸಿದು ಬಿದ್ದರು. ಮೊದಲು ಅವರನ್ನು ರಾಮನಗರ ಸಿಎಚ್ಸಿಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ 108 ತುರ್ತು ಆಂಬ್ಯುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಆಂಬ್ಯುಲೆನ್ಸ್ ಸತ್ನಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಆಸ್ಪತ್ರೆಯ ಗೇಟ್ ತಲುಪಿತು. ಆದರೆ, ಸ್ವಲ್ಪ ಸಮಯದ ನಂತರ, ವಾಹನದ ಹಿಂಭಾಗದ ಬಾಗಿಲು ಜಾಮ್ ಆಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ರೋಗಿಯು ಆಂಬ್ಯುಲೆನ್ಸ್ ಒಳಗೆ ಒದ್ದಾಡಿದ್ದಾರೆ. ಬಾಗಿಲನ್ನು ತೆಗೆಯಲು ಅಲ್ಲಿದ್ದವರು ಶತ ಪ್ರಯತ್ನ ನಡೆಸಿದ್ದು, ಉಪಕರಣಗಳನ್ನು ಬಳಸಿ ಬಾಗಿಲನ್ನು ಬಲವಂತವಾಗಿ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆಂಬ್ಯುಲೆನ್ಸ್ ಚಾಲಕ ಕಿಟಕಿಯ ಮೂಲಕ ವಾಹನದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ.
ದೀರ್ಘಕಾಲದ ಹೋರಾಟದ ನಂತರ, ಕೊನೆಗೂ ಬಾಗಿಲನ್ನು ಬಲವಂತವಾಗಿ ತೆಗೆಯಲಾಯಿತು. ರಾಮ್ ಪ್ರಸಾದ್ ಅವರನ್ನು ಸ್ಟ್ರೆಚರ್ನಲ್ಲಿ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಯ ಒಳಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ವಿಜಯಪುರ | ಚಿನ್ನದ ಅಂಗಡಿ ದರೋಡೆ ಮಾಡಿ ಗುಂಡು ಹಾರಿಸಿ ಪರಾರಿದ ಖದೀಮರು ; ಓರ್ವನಿಗೆ ಗಾಯ



















