ನವದೆಹಲಿ: “ಅಲ್ಲಾಹನು ನನ್ನನ್ನು ಒಂದು ಉದ್ದೇಶದೊಂದಿಗೆ ಜೀವಂತವಾಗಿರಿಸಿದ್ದಾನೆ. ಅವಾಮಿ ಲೀಗ್ ಸದಸ್ಯರನ್ನು ಗುರಿಯಾಗಿಸುತ್ತಿರುವವರಿಗೆ ತಕ್ಕ ಶಿಕ್ಷೆಯಾಗುವಂಥ ಒಂದು ದಿನ ಮುಂದೆ ಬರಲಿದೆ. ನಾನು ಬರುತ್ತಿದ್ದೇನೆ” ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಹೇಳಿದ್ದಾರೆ.
ಬಾಂಗ್ಲಾದಲ್ಲಿ ನಡೆದ ರಾಷ್ಟ್ರವ್ಯಾಪಿ ಆಂದೋಲನ, ಅಸ್ಥಿರತೆಯ ನಂತರ ಭಾರತಕ್ಕೆ ಪಲಾಯನ ಮಾಡಿರುವ ಅವಾಮಿ ಲೀಗ್ ಅಧ್ಯಕ್ಷೆ, ಸಾಮಾಜಿಕ ಮಾಧ್ಯಮ ಸಂವಾದವೊಂದರಲ್ಲಿ ತಮ್ಮ ಪಕ್ಷದ ನಾಯಕರ ಕುಟುಂಬ ಸದಸ್ಯರೊಂದಿಗೆ ನಡೆಸಿದ ಮಾತುಕತೆ ವೇಳೆ ಈ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರ ವಿರುದ್ಧ ಕಿಡಿಕಾರಿದ ಹಸೀನಾ, ಯೂನುಸ್ “ಜನರನ್ನು ಎಂದಿಗೂ ಪ್ರೀತಿಸದ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. “ಅವರು ಕಡಿಮೆ ಮೊತ್ತವನ್ನು ಹೆಚ್ಚಿನ ಬಡ್ಡಿದರದಲ್ಲಿ ಸಾಲ ನೀಡುತ್ತಾ, ಬಂದ ಹಣವನ್ನು ವಿದೇಶದಲ್ಲಿ ಐಷಾರಾಮಿ ಜೀವನ ನಡೆಸಲು ಬಳಸಿದರು. ಆಗ ನಮಗೆ ಅವನ ನಕಲುತನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಅವರಿಗೆ ಸಾಕಷ್ಟು ಸಹಾಯ ಮಾಡಿದೆವು. ನಂತರದಲ್ಲಿ ಅವರಲ್ಲಿ ಅಧಿಕಾರದ ಲಾಲಸೆ ಬೆಳೆಯಿತು. ಅದು ಈಗ ಇಡೀ ಬಾಂಗ್ಲಾದೇಶವನ್ನು ಸುಟ್ಟು ಹಾಕುತ್ತಿದೆ” ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶವು ಒಂದು ಕಾಲದಲ್ಲಿ ಅಭಿವೃದ್ಧಿಯ ಮಾದರಿಯಾಗಿತ್ತು. ಈಗ ಅದು “ಭಯೋತ್ಪಾದಕ ದೇಶ” ವಾಗಿ ಮಾರ್ಪಟ್ಟಿದೆ. ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಕೊಲ್ಲಲಾಗುತ್ತಿದೆ. ಅವಾಮಿ ಲೀಗ್, ಪೊಲೀಸರು, ವಕೀಲರು, ಪತ್ರಕರ್ತರು, ಕಲಾವಿದರು, ಎಲ್ಲರನ್ನೂ ಗುರಿಯಾಗಿಸಲಾಗುತ್ತಿದೆ. ದೇಶದಲ್ಲಿ ಮಾಧ್ಯಮಗಳಿಗೂ ನಿರ್ಬಂಧ ಹಾಕಲಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ಅತ್ಯಾಚಾರಗಳು, ಕೊಲೆಗಳು, ಡಕಾಯಿತಿಗಳು, ಯಾವುದನ್ನೂ ವರದಿ ಮಾಡಲು ಸಾಧ್ಯವಿಲ್ಲ ಎಂದೂ ಮಾಜಿ ಪ್ರಧಾನಿ ಆರೋಪಿಸಿದ್ದಾರೆ.
ತಮ್ಮ ತಂದೆ, ಬಾಂಗ್ಲಾದೇಶದ ಮೊದಲ ಅಧ್ಯಕ್ಷ ಶೇಖ್ ಮುಜಿಬುರ್ ರಹಮಾನ್ ಸೇರಿದಂತೆ ತಮ್ಮ ಇಡೀ ಕುಟುಂಬದ ಭಯಾನಕ ಹತ್ಯೆಗಳನ್ನು ಇದೇ ವೇಳೆ ನೆನಪಿಸಿಕೊಂಡ ಹಸೀನಾ ಅವರು, “ನನ್ನ ತಂದೆ, ತಾಯಿ, ಸಹೋದರ, ಎಲ್ಲರನ್ನೂ ನಾನು ಒಂದೇ ದಿನದಲ್ಲಿ ಕಳೆದುಕೊಂಡಿದ್ದೇನೆ. ನಂತರದಲ್ಲಿ ಅವರು ನಮ್ಮನ್ನು ನಮ್ಮ ದೇಶಕ್ಕೆ ಮರಳಲೂ ಬಿಡಲಿಲ್ಲ. ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ನನಗೆ ಅರ್ಥವಾಗುತ್ತಿದೆ. ಅಲ್ಲಾಹನು ನನ್ನನ್ನು ರಕ್ಷಿಸುತ್ತಿದ್ದಾನೆ, ಬಹುಶಃ ಅವನು ನನ್ನ ಮೂಲಕ ಕೆಲವು ಉದ್ದೇಶಗಳನ್ನು ಪೂರ್ಣಗೊಳಿಸಲು ಬಯಸುತ್ತಿರಬಹುದು. ಅಪರಾಧಗಳನ್ನು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಇದು ನನ್ನ ಪ್ರತಿಜ್ಞೆ” ಎಂದು ಅವರು ಹೇಳಿದರು.
ಇದೇ ವೇಳೆ, ಬೆಂಬಲಿಗರೊಬ್ಬರು “ನೀವು ಹೇಗಿದ್ದೀರಿ” ಎಂದು ಪ್ರಶ್ನಿಸಿದ್ದು, ಅದಕ್ಕೆ ಶೇಖ್ ಹಸೀನಾ, “ನಾನು ಜೀವಂತವಾಗಿದ್ದೇನೆ, ಮಗಾ” ಎಂದು ಉತ್ತರಿಸಿದರು. ಇನ್ನೊಬ್ಬ ಬೆಂಬಲಿಗ, “ಅಲ್ಲಾಹನು ನಿಮಗೆ ಮತ್ತೆ ಅವಕಾಶವನ್ನು ನೀಡಲಿ” ಎಂದು ಹಾರೈಸಿದಾಗ, ಪ್ರತಿಕ್ರಿಯಿಸಿದ ಹಸೀನಾ, “ಖಂಡಿತಾ. ಅದಕ್ಕಾಗಿಯೇ ಅಲ್ಲಾಹನು ನನ್ನನ್ನು ಜೀವಂತವಾಗಿರಿಸಿದ್ದಾನೆ. ನಾನು ಬಂದೇ ಬರುತ್ತೇನೆ” ಎಂದು ಹೇಳಿದರು.