ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಇದರ ಮಧ್ಯೆ ವಿರೋಧ ಪಕ್ಷಗಳು ಕೂಡ ಆಕ್ರೋಶ ಹೊರ ಹಾಕುತ್ತಿವೆ. ಡೀಸೆಲ್, ಪೆಟ್ರೋಲ್, ಹಾಲು, ನೀರು, ವಿದ್ಯುತ್, ಬಸ್ ದರ ಹೀಗೆ ಬಹುತೇಕ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಈಗ ಈ ಸಾಲಿಗೆ ವಿದ್ಯಾರ್ಥಿಗಳ ಪಠ್ಯ ಪುಸ್ತಕ ಕೂಡ ಬಂದು ನಿಂತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಎಕ್ಸ್ ಮೂಲಕ ಆಕ್ರೋಶ ಹೊರ ಹಾಕಿರುವ ಬಿ.ವೈ.ವಿಜಯೇಂದ್ರ ಎಕ್ಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಸಮರಕ್ಕೆ ವಿದ್ಯಾರ್ಥಿಗಳೂ ಹೊರತಲ್ಲ”
ನಾಡಿನ ಜನರ ಮೇಲೆ ನಿತ್ಯವೂ ಒಂದಿಲ್ಲೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಾ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ
ಇದೀಗ ನಾಡಿನ ಮಕ್ಕಳ ಅಕ್ಷರ ದೀವಿಗೆಯನ್ನೂ ಬಿಸಿಯಾಗಿಸಿದೆ.
ಈಗಾಗಲೇ ಕೆಲವು ಪಠ್ಯ ಪುಸ್ತಕಗಳ ಬೆಲೆ 100% ಹೆಚ್ಚಾಗಿದ್ದು,
ಇದೀಗ ಮತ್ತೆ ಶೇ. 10% ಏರಿಸಲು ಹೊರಟಿರುವ ನಡೆ ಕಾಂಗ್ರೆಸ್ ಸರ್ಕಾರದ ಶಿಕ್ಷಣ ವಿರೋಧಿ ನಡೆಗೆ ಹಿಡಿದ ಕೈಗನ್ನಡಿಯಾಗಿದೆ.
ಈಗಾಗಲೇ ನಾಡಿನ ಸಾರ್ವಜನಿಕರ ಶಾಪಕ್ಕೆ ಗುರಿಯಾಗಿರುವ ರಾಜ್ಯ ಸರ್ಕಾರ
ಈ ಕೂಡಲೇ ಲಕ್ಷಾಂತರ ಪೋಷಕರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುವ ಪಠ್ಯ ಪುಸ್ತಕಗಳ ದರ ಏರಿಕೆಯ ನಿಲುವು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದು ಕಿಡಿಕಾರಿದ್ದಾರೆ.