ಅಲಿಗಡ: ‘ಎಲ್ಲ ಹಿಂದೂಗಳಿಗೂ ಒಂದೇ ದೇವಸ್ಥಾನ, ಒಂದೇ ಬಾವಿ, ಒಂದೇ ಸ್ಮಶಾನವಿರಬೇಕು. ಈ ತತ್ವವನ್ನು ಪಾಲಿಸಿದರೆ ಮಾತ್ರ ಜಾತಿ ತಾರತಮ್ಯಗಳು ನಿವಾರಣೆಯಾಗಿ, ಹಿಂದೂ ಸಮುದಾಯವು ಒಗ್ಗಟ್ಟಾಗಿರಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸರಸಂಘ ಚಾಲಕ ಮೋಹನ್ ಭಾಗವತ್ ಕರೆ ಕೊಟ್ಟಿದ್ದಾರೆ.
ಉತ್ತರಪ್ರದೇಶದ ಅಲಿಗಡದಲ್ಲಿ 5 ದಿನಗಳ ಪ್ರವಾಸ ಕೈಗೊಂಡಿರುವ ಅವರು, ಎಚ್ಬಿ ಇಂಟರ್ನ್ಯಾಷನಲ್ ಕಾಲೇಜು ಮತ್ತು ಪಂಚಾನ್ ನಗರಿ ಪಾರ್ಕ್ನಲ್ಲಿ ಎರಡು ಶಾಖಾಗಳ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಶಾಂತಿ ಸ್ಥಾಪನೆಯ ಜಾಗತಿಕ ಹೊಣೆಗಾರಿಕೆಯನ್ನು ಭಾರತವು ಸಾಧಿಸಬೇಕೆಂದರೆ ನೈಜ ಸಾಮಾಜಿಕ ಏಕತೆಯನ್ನು ಸಾಧಿಸುವ ಅಗತ್ಯತೆ ಹೆಚ್ಚಿದೆ. ಸಂಸ್ಕಾರ ಎನ್ನುವುದು ಹಿಂದೂ ಸಮಾಜದ ಅಡಿಪಾಯವಿದ್ದಂತೆ. ಹೀಗಾಗಿ ಆರೆಸ್ಸೆಸ್ನ ಎಲ್ಲ ಸ್ವಯಂಸೇವಕರೂ ಸಂಪ್ರದಾಯ, ಪರಂಪರೆ, ಸಾಂಸ್ಕೃತಿಕ ಮೌಲ್ಯ ಹಾಗೂ ನೈತಿಕ ಸಿದ್ಧಾಂತಗಳನ್ನು ಒಳಗೊಂಡ ಸಮಾಜವನ್ನು ನಿರ್ಮಿಸಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಆರೆಸ್ಸೆಸ್ನ ಸ್ವಯಂಸೇವಕರೆಲ್ಲರೂ ಸಮಾಜದ ಎಲ್ಲ ವರ್ಗಗಳನ್ನೂ ತಲುಪಬೇಕು, ಎಲ್ಲ ವರ್ಗದವರನ್ನೂ ತಮ್ಮ ಮನೆಗಳಿಗೆ ಆಹ್ವಾನಿಸಬೇಕು. ಬೇರುಮಟ್ಟದಲ್ಲೇ ಸಾಮರಸ್ಯ ಮತ್ತು ಏಕತೆಯ ಸಂದೇಶವನ್ನು ಸಾರಬೇಕು. ಆಗ ತಾರತಮ್ಯ ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ. ಎಲ್ಲ ಹಬ್ಬಗಳನ್ನು ಕೂಡ ಸಾಮೂಹಿಕವಾಗಿ ಆಚರಿಸುವ ಮೂಲಕ ರಾಷ್ಟ್ರೀಯವಾದ ಮತ್ತು ಸಾಮಾಜಿಕ ಒಗ್ಗಟ್ಟಿನ ಅಡಿಪಾಯವನ್ನು ಬಲಿಷ್ಠಪಡಿಸಬೇಕು ಎಂದೂ ಸಲಹೆ ನೀಡಿದ್ದಾರೆ.
ಏಪ್ರಿಲ್ 17ರಿಂದ ಮೋಹನ್ ಭಾಗವತ್ ಅವರ ಉತ್ತರಪ್ರದೇಶ ಪ್ರವಾಸ ಆರಂಭವಾಗಿದ್ದು, ಆರೆಸ್ಸೆಸ್ ಪ್ರಚಾರಕರ ಸರಣಿ ಸಭೆಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ.