ನವದೆಹಲಿ: ಪಹಲ್ಗಾಮ್ ನಲ್ಲಿ ಜನರ ಧರ್ಮದ ಹೆಸರು ಕೇಳಿ ದಾಳಿ ನಡೆಸಿದ್ದ ಉಗ್ರರಿಗೆ ಭಾರತೀಯ ಸೇನೆಯು ತಕ್ಕ ಪಾಠ ಕಲಿಸಿದೆ. ಆ ಮೂಲಕ ಭಾರತದ ತಂಟೆಗೆ ಬಂದರೆ ಯಾವ ಕಾರ್ಯಾಚರಣೆಗೂ ಸಿದ್ಧ, ಉಗ್ರರನ್ನು ಮಟ್ಟಹಾಕಿಯೇ ಸಿದ್ಧ ಎಂಬ ಸಂದೇಶವನ್ನು ರವಾನಿಸಿದೆ. ಅಷ್ಟೇ ಅಲ್ಲ, ಅಜ್ಮಲ್ ಕಸಬ್ ಹಾಗೂ ಡೇವಿಡ್ ಹೇಡ್ಲಿ ತರಬೇತಿ ಪಡೆದ ಉಗ್ರರ ಶಿಬಿರವನ್ನೂ ಭಾರತದ ಸೇನೆ ಧ್ವಂಸಗೊಳಿಸುವ ಮೂಲಕ ಪರಾಕ್ರಮ ಮೆರೆದಿದೆ.
ರಾತ್ರೋರಾತ್ರಿ ಭಾರತೀಯ ಸೇನೆ ನಡೆಸಿದ ದಾಳಿಯ ಕುರಿತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಹಿರಿಯ ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖರೇಷಿ ಅವರು ಸುದ್ದಿಗೋಷ್ಠಿಯಲ್ಲಿ ಇಂಚಿಂಚೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಮುಂಬೈ ದಾಳಿಯ ರೂವಾರಿಗಳಾದ ಅಜ್ಮಲ್ ಕಸಬ್ ಹಾಗೂ ಡೇವಿಂಡ್ ಹೇಡ್ಲಿ ಸೇರಿ ಹಲವು ಉಗ್ರರು ತರಬೇತಿ ಪಡೆದಿದ್ದ ಉಗ್ರರ ನೆಲೆಯನ್ನೇ ಧ್ವಂಸಗೊಳಿಸಲಾಗಿದೆ” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
“ಪಾಕಿಸ್ತಾನದ ಲಾಹೋರ್ ನಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದ್ದ ಮುರಿಡ್ಕೆ ಎಂಬಲ್ಲಿ ಲಷ್ಕರೆ ತಯ್ಬಾದ ನೆಲೆ ಇತ್ತು. ಇಲ್ಲಿಯೇ ಹಲವು ಉಗ್ರರು ತರಬೇತಿ ಪಡೆದಿದ್ದರು. ಈ ಉಗ್ರರ ನೆಲೆ ಸೇರಿ ಒಂಬತ್ತು ನೆಲೆಗಳ ಕುರಿತು ಸೇನೆಯು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿತ್ತು. ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಾರಣ ಆಪರೇಷನ್ ಸಿಂಧೂರ ಯಶಸ್ವಿಯಾಗಿದೆ” ಎಂದು ವಿವರಿಸಿದ್ದಾರೆ.
“ಪಹಲ್ಗಾಮ್ ನಲ್ಲಿ ನಡೆಸಿದ ದಾಳಿಗೆ ಈಗ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಆ ಮೂಲಕ ಪತಿಯರನ್ನು ಕಳೆದುಕೊಂಡ ಭಾರತದ ನಾರಿಯರಿಗೆ ನ್ಯಾಯ ದೊರಕಿಸಿಕೊಡಲಾಗಿದೆ. ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಾವು ದಾಳಿ ಮಾಡಿಲ್ಲ. ನಮ್ಮ ಗುರಿಯೇನಿದ್ದರೂ ಉಗ್ರರ ನೆಲೆಗಳಾಗಿದ್ದವು” ಎಂದು ಕೂಡ ಮಾಹಿತಿ ನೀಡಿದ್ದಾರೆ.