ಬೆಂಗಳೂರು: ವಂಚಿಕಿ ಐಶ್ವರ್ಯ ಗೌಡ (Aishwarya Gowda) ಪ್ರಕರಣಕ್ಕೆ (Fraud Case) ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿಗೆ (Vinay Kulkarni) ಇಡಿ (Enforcement Directorate) ಸಮನ್ಸ್ ಜಾರಿ ಮಾಡಿದೆ.
ಇಡಿ ಮಂಗಳವಾರವೇ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ಜಾರಿ ಮಾಡಿತ್ತು. ಆದರೆ, ಕೆಲಸವಿದೆ ಎಂದು ವಿಚಾರಣೆಗೆ ಗೈರಾಗಿದ್ದರು. ಈಗ ಮತ್ತೆ ಇಡಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳು ಐಶ್ವರ್ಯ ಗೌಡ ಮನೆ, ಕಚೇರಿ, ಶಾಸಕ ವಿನಯ್ ಕುಲಕರ್ಣಿ ಮನೆ ಸೇರಿದಂತೆ 14 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಹಲವು ಮಹತ್ವದ ದಾಖಲೆಗಳು ಸಿಕ್ಕಿದ್ದವು. ಅಲ್ಲದೇ, 2.25 ಕೋಟಿ ರೂ. ನಗದು ಪತ್ತೆಯಾಗಿರುವುದಾಗಿ ಇಡಿ ಪ್ರಕಟಣೆ ಮೂಲಕ ತಿಳಿಸಿತ್ತು. ಐಶ್ವರ್ಯಗೌಡ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿತ್ತು. ಈ ಕಾರನ್ನು ಕೂಡ ಸೀಜ್ ಮಾಡಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ವಿನಯ ಕುಲಕರ್ಣಿಗೂ ನೋಟಿಸ್ ನೀಡಲಾಗಿದೆ.