\ನವದೆಹಲಿ: ಕಳೆದ ವರ್ಷದ ಜೂನ್ನಲ್ಲಿ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಭೀಕರ ಏರ್ ಇಂಡಿಯಾ ವಿಮಾನ ದುರಂತಕ್ಕೆ ತಾಂತ್ರಿಕ ದೋಷ ಕಾರಣವಲ್ಲ, ಬದಲಾಗಿ ಇದು ಪೈಲಟ್ವೊಬ್ಬರ ಉದ್ದೇಶಪೂರ್ವಕ ಕೃತ್ಯ ಎಂಬ ಆಘಾತಕಾರಿ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ವಿಮಾನದ ಇಂಜಿನ್ಗೆ ಇಂಧನ ಪೂರೈಸುವ ಸ್ವಿಚ್ಗಳನ್ನು ಮ್ಯಾನುವಲ್ ಆಗಿ ಆಫ್ ಮಾಡಿದ್ದೇ ಈ ದುರಂತಕ್ಕೆ ನೇರ ಕಾರಣ ಎಂದು ಇಟಲಿಯ ಪ್ರಖ್ಯಾತ ದಿನಪತ್ರಿಕೆ ‘ಕೊರಿಯರ್ ಡೆಲ್ಲಾ ಸೆರಾ’ ವರದಿ ಮಾಡಿದೆ.
ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಆರಂಭದಲ್ಲಿ ಇದು ಯಾಂತ್ರಿಕ ವೈಫಲ್ಯ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ, ವಾಷಿಂಗ್ಟನ್ ಮತ್ತು ನವದೆಹಲಿಯ ಅಧಿಕಾರಿಗಳ ನಡುವೆ ನಡೆದ ಇತ್ತೀಚಿನ ಚರ್ಚೆಗಳನ್ನು ಉಲ್ಲೇಖಿಸಿರುವ ವರದಿಯು, ವಿಮಾನದ ಬ್ಲ್ಯಾಕ್ ಬಾಕ್ಸ್ ದತ್ತಾಂಶಗಳು ಯಾವುದೇ ತಾಂತ್ರಿಕ ದೋಷವನ್ನು ದೃಢಪಡಿಸಿಲ್ಲ ಎಂದು ಹೇಳಿದೆ. ಬದಲಾಗಿ, ಇಂಜಿನ್ ಇಗ್ನಿಷನ್ ಮತ್ತು ಶಟ್ಡೌನ್ ನಿಯಂತ್ರಿಸುವ ಸ್ವಿಚ್ಗಳನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿತ್ತು ಎಂಬುದು ತನಿಖಾಧಿಕಾರಿಗಳ ನಂಬಿಕೆಯಾಗಿದೆ.

ಕಾಕ್ಪಿಟ್ ಧ್ವನಿಮುದ್ರಿಕೆಯಲ್ಲಿ ಬಯಲಾದ ರಹಸ್ಯ
ಅಪಘಾತದ ನಂತರ ಲಭ್ಯವಾದ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್)ನಲ್ಲಿನ ಸಂಭಾಷಣೆ ತನಿಖೆಗೆ ಹೊಸ ತಿರುವು ನೀಡಿದೆ. ವಿಮಾನ ಪತನಗೊಳ್ಳುವ ಮುನ್ನ ಒಬ್ಬ ಪೈಲಟ್, “ನೀನು ಯಾಕೆ ಇಂಧನ ಪೂರೈಕೆಯನ್ನು ಕಡಿತಗೊಳಿಸಿದೆ?” ಎಂದು ಕೇಳಿರುವುದು ದಾಖಲಾಗಿದೆ. ಅದಕ್ಕೆ ಮತ್ತೊಬ್ಬ ಪೈಲಟ್, “ನಾನು ಹಾಗೆ ಮಾಡಿಲ್ಲ” ಎಂದು ಉತ್ತರಿಸಿದ್ದಾರೆ. ಈ ಸಂಭಾಷಣೆಯು ಕಾಕ್ಪಿಟ್ನಲ್ಲಿ ನಡೆದ ಗೊಂದಲ ಮತ್ತು ಅನಿರೀಕ್ಷಿತ ನಿರ್ಧಾರಗಳನ್ನು ಎತ್ತಿ ತೋರಿಸುತ್ತಿದೆ. ಘಟನೆಯಲ್ಲಿ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಸೇರಿದಂತೆ ಒಟ್ಟು 260 ಮಂದಿ ಸಾವನ್ನಪ್ಪಿದ್ದರು.
ಪೈಲಟ್ ಖಿನ್ನತೆಯೇ ದುರಂತಕ್ಕೆ ಕಾರಣವೇ?
ಈ ಇಡೀ ಪ್ರಕರಣದಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಪಾತ್ರದ ಬಗ್ಗೆ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ. ಅಪಘಾತದ ಒಂದು ತಿಂಗಳ ನಂತರ ಹೊರಬಿದ್ದ ಮಾಹಿತಿಯ ಪ್ರಕಾರ, ಸುಮೀತ್ ಅವರು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರ ವೈಯಕ್ತಿಕ ಜೀವನದ ಸಮಸ್ಯೆಗಳು ಮತ್ತು ವಿಚ್ಛೇದನದಂತಹ ಸಂಗತಿಗಳು ಅವರ ಮಾನಸಿಕ ಒತ್ತಡಕ್ಕೆ ಕಾರಣವಾಗಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಸುಮೀತ್ ಅವರ ತಂದೆ ಈ ಆರೋಪಗಳನ್ನು ಕಟುವಾಗಿ ತಳ್ಳಿಹಾಕಿದ್ದು, ತನ್ನ ಮಗ ಮಾನಸಿಕವಾಗಿ ಆರೋಗ್ಯವಾಗಿದ್ದ ಎಂದು ವಾದಿಸಿದ್ದಾರೆ.
ಪ್ರಸ್ತುತ ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ಬಗ್ಗೆ ಅಂತಿಮ ವರದಿಯನ್ನು ಸಿದ್ಧಪಡಿಸುತ್ತಿದ್ದು, ಎಲ್ಲರ ಕಣ್ಣು ಅದರತ್ತ ನೆಟ್ಟಿದೆ.



















