ಏಪ್ರಿಲ್ 11… ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಶುರುವಾಗಿತ್ತು. ಮುರಿದುಬಿದ್ದಿದ್ದ ದೋಸ್ತಿಯ ಹಡಗು ಮತ್ತೆ ನೀರಿಗಿಳಿದಿತ್ತು. ಎಐಎಡಿಎಂಕೆ ಜೊತೆ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಘೋಷಿಸಿತ್ತು. ಖುದ್ದು ಪಕ್ಷದ ಸರ್ವೋಚ್ಛ ನಾಯಕ ಅಮಿತ್ ಶಾ ದೆಹಲಿಯಿಂದ ಚೆನ್ನೈಗೆ ಬಂದದ್ದಲ್ಲದೆ…. ಪಳನಿಸ್ವಾಮಿಯೇ ನಮ್ಮ ನಾಯಕ ಅಂತಲೂ ಘೋಷಿಸಿದರು. ಅಷ್ಟೇ.. ಕರೆಕ್ಟಾಗಿ ಒಂದು ವಾರ ಕೂಡಾ ಪೂರ್ಣವಾಗಿಲ್ಲ..ಅಷ್ಟರಲ್ಲೇ ದೋಸ್ತಿ ಕೂಟದಲ್ಲಿ ಭಿನ್ನರಾಗ ಶುರುವಾಗಿದೆ.
ಎಐಎಡಿಎಂಕೆಗೆ ಅಲ್ಪಸಂಖ್ಯಾತ ಮತಗಳು ಕೈತಪ್ಪೋ ಭೀತಿ
ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಎಲ್ಲವೂ ಸುಸೂತ್ರ ಅಂತಲೇ ಭಾವಿಸಲಾಗಿತ್ತು. ಆದರೆ, ಹಾಗಾಗಿಲ್ಲ. ಮೈತ್ರಿ ಘೋಷಣೆಗಿನ್ನೂ ವಾರ ತುಂಬುವ ಮೊದಲು ದ್ರಾವಿಡ ನಾಯಕರು ಕ್ಯಾತೆ ತೆಗೆದಿದ್ದಾರೆ. ತಮಿಳುನಾಡಿನ ದ್ರಾವಿಡ ಸಿದ್ಧಾಂತಗಳಿಗೆ ಬಿಜೆಪಿ ಜೊತೆಗಿನ ಸಖ್ಯ ಒಳಿತಲ್ಲ ಅಂತಾ ಬಹಿರಂಗವಾಗೇ ಎಡಿಎಂಕೆ ನಾಯಕರು ಟೀಕಿಸಿದ್ದಾರೆ. ಅಷ್ಟೇ ಅಲ್ಲಾ ಇದರ ಒಳಮರ್ಮ ಪಕ್ಷದ ಅಲ್ಪಸಂಖ್ಯಾತ ಮತಗಳು ಕೈತಪ್ಪೋ ಭೀತಿಯೂ ಕೆಲ ನಾಯಕರಲ್ಲಿ ಆವರಿಸಿದೆ.
ವಿಧಾನಸಭಾ ಚುನಾವಣೆಗಷ್ಟೇ ಬಿಜೆಪಿ ಜೊತೆ ಮೈತ್ರಿ!
ಅಚ್ಚರಿ ಬೆಳವಣಿಗೆಯಲ್ಲಿ ಸ್ವತ ಪಳನಿಸ್ವಾಮಿ ನೀಡಿರೋ ಹೇಳಿಕೆ ಬಿಜೆಪಿ ನಿದ್ದೆಗೆಡಿಸಿದೆ. ದ್ರಾವಿಡ ನಾಡಿನಲ್ಲಿ ಕೇಸರಿ ಬಾವುಟ ಹಾರಿಸಬೇಕೆನ್ನೋ ಮೋದಿ-ಅಮಿತ್ ಶಾ ಜೋಡಿ ಕನಸಿಗೆ ಪಳನಿಸ್ವಾಮಿ ಹೇಳಿಕೆ ತಣ್ಣೀರೆರಚಿದಂತಿದೆ. ಹೌದು! ಬಿಜೆಪಿ ಜೊತೆ ಮೈತ್ರಿ ಕೇವಲ ವಿಧಾನಸಭಾ ಚುನಾವಣೆಗೆ ಮಾತ್ರ. ಹಾಗಂತ ಎನ್ ಡಿಎ ಕೂಟಕ್ಕೆ ದೆಹಲಿಯಲ್ಲಿ ಹೇಗೆ ಮೋದಿಯೋ? ಇಲ್ಲಿ ನಾನು ಅಂತಾ ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಅನ್ನೋದನ್ನು ಪಳನಿಸ್ವಾಮಿ ತಳ್ಳಿ ಹಾಕಿದ್ದಾರೆ. ಇದರರ್ಥ ಒಂದೊಮ್ಮೆ ಬಿಜೆಪಿ ಎಡಿಎಂಕೆ ಸರ್ಕಾರ ಆಡಳಿತಕ್ಕೆ ಬಂದ್ರೆ ಕೇಸರಿ ಪಡೆಯ ಯಾರೊಬ್ಬರಿಗೂ ಸಂಪುಟದಲ್ಲಿ ಸ್ಥಾನವಿಲ್ವಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.
ಅಮ್ಮನ ಕಟ್ಟಾಳುಗಳಿಗೆ ಅಣ್ಣಾಮಲೈ ಮೇಲೆ ಸಿಟ್ಟು
ಬಿಜೆಪಿ ಪಾಲಿಗೆ ನಿಜಕ್ಕೂ ಅಣ್ಣಾಮಲೈ ವಿಲನ್ ಆಗ್ತಿದ್ದಾರಾ. ಅವತ್ತು ಮಾಜಿ ಐಪಿಎಸ್ ಅಧಿಕಾರಿ ನೀಡಿದ ಜಯಲಲಿತಾ ಕುರಿತಾದ ಹೇಳಿಕೆ ಇವತ್ತಿಗೂ ಅಮ್ಮನ ನಿಷ್ಠರನ್ನು ಕೆರಳಿಸಿದೆ. ಹೀಗಾಗಿಯೇ ಪಕ್ಷದ ಅಧ್ಯಕ್ಷ ಗಿರಿ ಕಳೆದುಕೊಂಡಿರೋ ಅಣ್ಣಾಮಲೈ ಭವಿಷ್ಯದಲ್ಲಿ ಸಂಪುಟ ಸೇರೋ ಕನಸು ಕಾಣ್ತಿದ್ದಾರೆ. ಆದ್ರೆ ಪಳನಿಸ್ವಾಮಿ ಅಂಡ್ ಗ್ಯಾಂಗ್ ಮಾತ್ರ ಯಾವ ಬಿಜೆಪಿ ನಾಯಕನಿಗೂ ಕ್ಯಾಬಿನೇಟ್ ಗೆ ಎಂಟ್ರಿ ಇಲ್ಲಾ ಅಂತಾ ಈಗಲೇ ಕಡ್ಡಿ ಮುರಿದಂತೆ ಹೇಳುತ್ತಿದೆ.
ಹಾಗಿದ್ದರೆ ಬಿಜೆಪಿ ಜೊತೆಗಿನ ದೋಸ್ತಿ ಉದ್ದೇಶವೇನು, 4 ಪ್ರತಿಷತವಿದ್ದ ವೋಟ್ ಶೇರ್ 11ಕ್ಕೆ ಏರಿದೆ ನಿಜ..ಹಾಗಂತಾ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುತ್ತಾ…ಅಷ್ಟೇ ಅಲ್ಲಾ ಪನ್ನೀರ್ ಸೆಲ್ವಂ ಮತ್ತು ದಿನಕರನ್ ನಡೆಯೂ ಈಗ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಇದೆಲ್ಲದರ ನಡುವೆ ಎಐಎಡಿಎಂಕೆ ಜೊತೆ ಮೈತ್ರಿಯೇ ಮುಂದುವರಿಯೋದು ಅನುಮಾನ ಅನ್ನೋ ವಿಶ್ಲೇಷಣೆಯೂ ತಮಿಳು ನೆಲದಲ್ಲಿ ಆರಂಭವಾಗಿದೆ.