ಉಡುಪಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಟಿ ರಕ್ಷಿತಾ ಪ್ರೇಮ್ ಭೇಟಿ ನೀಡಿದ್ದಾರೆ.
ಈಗಾಗಲೇ ಕ್ಷೇತ್ರದ ಸಾನಿಧ್ಯ ದೇವತೆ ಮಾರಿಯಮ್ಮ ಹಲವಾರು ಕಾರಣಿಕಗಳಿಗೆ ಪ್ರಸಿದ್ಧಿಯಾಗಿದೆ. ಕ್ಷೇತ್ರಕ್ಕೆ ಖ್ಯಾತ ನಟ ನಟಿಯರು, ನ್ಯಾಯಾಧೀಶರು, ಅಧಿಕಾರಿಗಳು, ರಾಜಕೀಯ ನೇತಾರರು, ಕ್ರೀಡಾ ಪಟುಗಳು ಒಳಗೊಂಡು ಹಲವಾರು ಗಣ್ಯ ವ್ಯಕ್ತಿಗಳು ಭೇಟಿ ನೀಡಿದ್ದಾರೆ. ಸಂಕಲ್ಪದಂತೆ ನೆರವೇರಿಸಿಕೊಡುತ್ತಾರೆ ಮಾರಿಯಮ್ಮ ಎಂಬ ಖ್ಯಾತಿಯೂ ಇದೆ.
ಇಂದು (ಆ.20ರ ಬುಧವಾರ) ಕಟೀಲು ದೇವಸ್ಥಾನಕ್ಕೆ ಆಗಮಿಸಿದ್ದ ನಟಿ ರಕ್ಷಿತಾ ಪ್ರೇಮ್ ಅವರು ಕಾಪುವಿಗೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರ್ಶನ ಪಡೆದುಕೊಂಡಿದ್ದಾರೆ.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಸಮ್ಮುಖದಲ್ಲಿ ನಟಿಯನ್ನು ಗೌರವಿಸಿ ಮಾರಿಯಮ್ಮನ ಅನುಗ್ರಹ ಪ್ರಸಾದ ನೀಡಿದರು.
ರಕ್ಷಿತಾ ಪ್ರೇಮ್ ಅನ್ನದಾನ ಸೇವೆ ನೀಡಿ, ಬಳಿಕ ಇಷ್ಟಾರ್ಥ ಸಿದ್ದಿಗಾಗಿ ಘಂಟಾನಾದ ಸೇವೆ ಸಲ್ಲಿಸಿದರು.
ಬಳಿಕ ವರದಿಗಾರರೊಂದಿಗೆ ಮಾತನಾಡಿದ ರಕ್ಷಿತಾ, ಕಳೆದ ವಾರವಷ್ಟೇ ನನ್ನ ತಾಯಿ ಈ ಕ್ಷೇತ್ರಕ್ಕೆ ಬಂದು ಹರಕೆ ಹೇಳಿಕೊಂಡಿದ್ದರು. ನಾನು ಕೂಡಾ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯಬೇಕು ಅಂದುಕೊಂಡಿದ್ದೆ. ಆದರೆ ಅಮ್ಮ ನನ್ನನ್ನು ಇಷ್ಟು ಬೇಗ ಕರೆಸಿಕೊಳ್ಳುತ್ತಾಳೆ ಎಂದು ಅಂದುಕೊಂಡಿರಲಿಲ್ಲ ಎಂದ ಅವರು, ದೇವಸ್ಥಾನ ಬಹಳ ಸುಂದರವಾಗಿ ಮೂಡಿಬಂದಿದೆ ಎಂದಿದ್ದಾರೆ.

















