ನವದೆಹಲಿ: ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಇನ್ನೂ ಸಾಮರ್ಥ್ಯ ಸಾಬೀತುಪಡಿಸಬೇಕಿದೆ ಎಂಬ ಟೀಕೆಗಳನ್ನು ಭಾರತದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಕಟುವಾಗಿ ಆಕ್ಷೇಪಿಸಿದ್ದಾರೆ. ತಮ್ಮ ವೃತ್ತಿಜೀವನದ ಈ ಹಂತದಲ್ಲಿ ಈ ಇಬ್ಬರು ದಿಗ್ಗಜರು ಯಾರಿಗೂ ಏನನ್ನೂ ಸಾಬೀತುಪಡಿಸಬೇಕಿಲ್ಲ ಎಂದು ಅಶ್ವಿನ್ ಪ್ರತಿಪಾದಿಸಿದ್ದು, ಅವರ ಮೇಲಿನ ಟೀಕೆಗಳು ಹಾಸ್ಯಾಸ್ಪದ ಎಂದು ಬಣ್ಣಿಸಿದ್ದಾರೆ.
ಯುವ ಆಟಗಾರರಿಗೆ ಇವರೇ ಮಾದರಿ
ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರದರ್ಶನವನ್ನು ಅಶ್ವಿನ್ ಉಲ್ಲೇಖಿಸಿದ್ದಾರೆ. ಕೊಹ್ಲಿ ಮೂರು ಪಂದ್ಯಗಳಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 302 ರನ್ ಗಳಿಸಿ ‘ಪ್ಲೇಯರ್ ಆಫ್ ದ ಸೀರೀಸ್’ ಪ್ರಶಸ್ತಿಗೆ ಭಾಜನರಾದರೆ, ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾ ಸರಣಿಯ ಶ್ರೇಷ್ಠ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಿದ್ದರು. ರೋಹಿತ್ ತಮ್ಮ ಫಿಟ್ನೆಸ್ ಸುಧಾರಿಸಿಕೊಂಡು ಬಂದ ರೀತಿ ಮತ್ತು ವಿರಾಟ್ ಅವರ ಬ್ಯಾಟಿಂಗ್ ಲಯ ಅದ್ಭುತವಾಗಿದೆ. ಇಷ್ಟು ಸುದೀರ್ಘ ವೃತ್ತಿಜೀವನದಲ್ಲಿ ಏಳು-ಬೀಳುಗಳು ಸಹಜ. ಆದರೆ, ಕ್ರೀಡೆಯ ಮೇಲಿರುವ ಬದ್ಧತೆ ಮತ್ತು ಅವರು ಮಾಡುತ್ತಿರುವ ತ್ಯಾಗಗಳು ಮುಂದಿನ ತಲೆಮಾರಿನ ಕ್ರಿಕೆಟಿಗರಿಗೆ ದೊಡ್ಡ ಪಾಠವಾಗಬೇಕು ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ ಯೋಜನೆಯ ಚರ್ಚೆ
ಮುಂದಿನ 2027ರ ಏಕದಿನ ವಿಶ್ವಕಪ್ಗೆ ಗೌತಮ್ ಗಂಭೀರ್ ಮತ್ತು ಆಯ್ಕೆಗಾರರ ಯೋಜನೆಗಳಲ್ಲಿ ಈ ಹಿರಿಯ ಜೋಡಿ ಇದೆಯೇ ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ, ಕಳೆದ ಆರು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಎರಡು ಶತಕ ಮತ್ತು ರೋಹಿತ್ ಮೂರು ಅರ್ಧಶತಕಗಳನ್ನು ಸಿಡಿಸುವ ಮೂಲಕ ತಮ್ಮ ಮೇಲಿನ ಅನುಮಾನಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಇವರಿಬ್ಬರ ವೃತ್ತಿಪರತೆಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಅಶ್ವಿನ್ ಸಮರ್ಥಿಸಿಕೊಂಡಿದ್ದಾರೆ.
ಜನವರಿಯಲ್ಲಿ ಮತ್ತೆ ಕಣಕ್ಕೆ
ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ವಿರಾಟ್ ಮತ್ತು ರೋಹಿತ್ 2025ರ ಸಾಲಿನ ತಮ್ಮ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮುಕ್ತಾಯಗೊಳಿಸಿದ್ದಾರೆ. ವಿರಾಟ್ ಕೊಹ್ಲಿ ಈ ವರ್ಷ ಒಂಬತ್ತನೇ ಬಾರಿಗೆ ಭಾರತದ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಜೋಡಿ ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮತ್ತೆ ಮೈದಾನಕ್ಕಿಳಿಯಲಿದೆ .
ಇದನ್ನೂ ಓದಿ: ಡಿಸೆಂಬರ್ನಲ್ಲಿ ಶ್ರೇಯಸ್ ಅಯ್ಯರ್ ಮುಂದಿನ ಸ್ಕ್ಯಾನ್ ; ಬಳಿಕವಷ್ಟೇ ಪುನಶ್ಚೇತನ ಶಿಬಿರ ಆರಂಭ



















