ಅಮೇರಿಕಾದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ 112 ಭಾರತೀಯರನ್ನು ಗಡಿಪಾಡು ಮಾಡಿ ಕರೆತಂದ ಮೂರನೇ ವಿಮಾನ ಭಾನುವಾರ ರಾತ್ರಿ ಅಮೃತಸರದಲ್ಲಿ ಲ್ಯಾಂಡ್ ಆಗಿದೆ. ಅಮೇರಿಕಾ ವಾಯುಪಡೆಯ C-17 ಗ್ಲೋಬ್ಮಾಸ್ಟರ್ ವಿಮಾನವು ರಾತ್ರಿ 10 ಗಂಟೆಗೆ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಕಳೆದ 10 ದಿನಗಳಲ್ಲಿ ಇದು ಮೂರನೇ ವಿಮಾನ ಇದಾಗಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಕಾನೂನುಬಾಹಿರ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು ಭಾರತೀಯರನ್ನು ಗಡಿಪಾರು ಮಾಡಲಾಗುತ್ತಿದೆ.
ಈ 112 ಗಡಿಪಾರು ಮಾಡಿ ಭಾರತೀಯರಲ್ಲಿ, 44 ಜನ ಹರಿಯಾಣದಿಂದ, 33 ಜನ ಗುಜರಾತ್, 31 ಜನ ಪಂಜಾಬ್, 2 ಜನ ಉತ್ತರ ಪ್ರದೇಶ, ಹಾಗೂ ತಲಾ ಒಬ್ಬರು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದವರಿದ್ದಾರೆ. ಈ ಅಕ್ರಮ ವಲಸಿಗರ ಕೆಲವು ಕುಟುಂಬದ ಸದಸ್ಯರು ಅಮೃತಸರದ ಶ್ರೀ ಗುರು ರಾಮದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ತಮ್ಮ ಕುಟುಂಬದವರನ್ನು ಕರೆದುಕೊಂಡು ಹೋಗಲು ಕಾಯುತ್ತಿದ್ದರು.
ಇಮಿಗ್ರೇಷನ್, ಪರಿಶೀಲನೆ ಮತ್ತು ಹಿಂದಿನ ದಾಖಲೆಗಳ ಪರಿಶೀಲನೆ ಮುಗಿದ ಬಳಿಕ, ಗಡಿಪಾರು ಮಾಡಲಾದ ವ್ಯಕ್ತಿಗಳನ್ನು ತಮ್ಮ ತಮ್ಮ ಊರಿಗೆ ತೆರಳಲು ಅನುಮತಿ ನೀಡಲಾಗುತ್ತದೆ. ಅಧಿಕಾರಿಗಳು ಅವರ ಸ್ವಂತ ರಾಜ್ಯಗಳಿಗೆ ಪ್ರಯಾಣ ವ್ಯವಸ್ಥೆ ಮಾಡಿರುವುದಾಗಿ ವರದಿ ತಿಳಿಸಿದೆ. ಶನಿವಾರ ತಡರಾತ್ರಿ, ಅಮೇರಿಕಾ ಸೇನಾ ವಿಮಾನ 116 ಭಾರತೀಯ ವಲಸಿಗರನ್ನು ಹೊತ್ತುಕೊಂಡು ಅಮೃತಸರ ವಿಮಾನ ನಿಲ್ದಾಣಕ್ಕೆ ಇಳಿದಿತ್ತು. ಅವರೆಲ್ಲರೂ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಹೇಳಿಕೊಂಡಿದ್ದರು.
ಈ 116 ತೊಲಗಿಸಲಾದ ಭಾರತೀಯರಲ್ಲಿ 65 ಜನ ಪಂಜಾಬ್, 33 ಜನ ಹರಿಯಾಣ, 8 ಜನ ಗುಜರಾತ್, ತಲಾ 2 ಜನ ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ತಲಾ ಒಬ್ಬರು ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಿಂದ ಬಂದಿದ್ದರು.
ಬೇಡಿ ಹಾಕಿ ಕರೆದುಕೊಂಡು ಬಂದಿದ್ದರು
“ನಮ್ಮ ಕಾಲುಗಳಿಗೆ ಬೇಡಿಗಳು ಹಾಕಲಾಗಿತ್ತು ಮತ್ತು ಕೈಗಳನ್ನು ಕಟ್ಟಲಾಗಿತ್ತು. ಆ ವಿಮಾನದಲ್ಲಿ 3 ಮಹಿಳೆಯರು ಮತ್ತು 3 ಮಕ್ಕಳು ಇದ್ದರು, ಆದರೆ ಅವರಿಗೆ ಆ ರೀತಿ ಮಾಡಿರಲಿಲ್ಲ . ಅಮೃತಸರ ವಿಮಾನ ನಿಲ್ದಾಣಕ್ಕೆ ತಲುಪುವ ಮುನ್ನವೇ ಬೇಡಿಗಳನ್ನು ತೆಗೆದುಹಾಕಲಾಯಿತು,” ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಪಂಜಾಬ್ನ ಪಟಿಯಾಲಾ ಜಿಲ್ಲೆಯ ರಾಜಪುರದ ಇಬ್ಬರನ್ನು ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣಲೇ ಬಂಧಿಸಲಾಯಿತು. ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ ಮತ್ತು ಪ್ರದೀಪ್ ಸಿಂಗ್ ವಿರುದ್ಧ 2023ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಫೆಬ್ರವರಿ 5ರಂದು, ಅಮೇರಿಕಾದಿಂದ 104 ಭಾರತೀಯರನ್ನು ಗಡೀಪಾರು ಮಾಡಲಾಗಿತ್ತು. ಅವರಲ್ಲಿ 13 ಮಕ್ಕಳು ಸೇರಿದ್ದರು
ಅಮೃತಸರ ವಿಮಾನ ನಿಲ್ದಾಣದಿಂದ ಹೊರಬಂದ ತಕ್ಷಣ, ಮೊದಲ ವಿಮಾನದಲ್ಲಿ ಆಗಮಿಸಿದ್ದ ಜಸ್ಪಾಲ್ ಸಿಂಗ್ ಎಂಬುವರು ಮಾತನಾಡಿ, “ನಾವು ಇನ್ನೊಂದು ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಭಾವಿಸಿದ್ದೆವು. ನಂತರ ಒಬ್ಬ ಪೊಲೀಸ್ ಅಧಿಕಾರಿ ನಮಗೆ ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ಕೈಗಳನ್ನು ಕಟ್ಟಲಾಗಿತ್ತು. ಕಾಲುಗಳಿಗೆ ಬೇಡಿಗಳನ್ನು ಹಾಕಲಾಗಿತ್ತು,” ಎಂದು ಹೇಳಿದ್ದರು.
ಅಮೇರಿಕಾದಿಂದ ಇದುವರೆಗೆ ಒಟ್ಟು 332 ಭಾರತೀಯರನ್ನು ಮೂರು ವಿಮಾನಗಳ ಮೂಲಕ ಗಡಿಪಾರು ಮಾಡಿ ಕಳುಹಿಸಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅಮೃತಸರ ವಿಮಾನ ನಿಲ್ದಾಣದಲ್ಲಿ ಯುಎಸ್ ವಿಮಾನಗಳನ್ನು ಇಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ “ನಮ್ಮ ಪವಿತ್ರ ನಗರವನ್ನು ಅಕ್ರಮ ವಲಸಿಗರ ಕೇಂದ್ರವನ್ನಾಗಿ ಮಾಡಬೇಡಿ” ಎಂದು ಅವರು ಕಿಡಿ ಕಾರಿದ್ದಾರೆ.