ನವದೆಹಲಿ : ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಕೆಲವು ತಿಂಗಳ ಹಿಂದೆ ನಡೆದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೇ ಹತ್ಯೆ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಆದರೆ, ಈ ಹತ್ಯೆಗೂ ಕೆಲವೇ ಗಂಟೆಗಳ ಮೊದಲು ಹನಿಯೇ ಅವರನ್ನು ತಾವು ಭೇಟಿಯಾಗಿದ್ದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಗಡ್ಕರಿ, ಇರಾನ್ನ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತದ ಪ್ರತಿನಿಧಿಯಾಗಿ ಟೆಹ್ರಾನ್ಗೆ ತೆರಳಿದ್ದ ಸಂದರ್ಭವನ್ನು ಮೆಲುಕು ಹಾಕಿದರು.
ಆ ರಾತ್ರಿ ನಡೆದಿದ್ದೇನು?
“ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ನಾನು ಇರಾನ್ಗೆ ತೆರಳಿದ್ದೆ. ಸಮಾರಂಭಕ್ಕೂ ಮುನ್ನ ಟೆಹ್ರಾನ್ನ ಪಂಚತಾರಾ ಹೋಟೆಲ್ ಒಂದರಲ್ಲಿ ವಿವಿಧ ದೇಶಗಳ ಗಣ್ಯರು ಅನೌಪಚಾರಿಕವಾಗಿ ಸೇರಿದ್ದೆವು. ಅಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೇ ಕೂಡ ಇದ್ದರು. ನಾನು ಅವರನ್ನು ಭೇಟಿಯಾದೆ. ಅವರು ಅಧ್ಯಕ್ಷರು ಮತ್ತು ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಪ್ರಮಾಣವಚನ ಸಮಾರಂಭಕ್ಕೆ ತೆರಳುವುದನ್ನು ನಾನು ಕಂಡಿದ್ದೆ,” ಎಂದು ಗಡ್ಕರಿ ವಿವರಿಸಿದರು.
ಸಮಾರಂಭ ಮುಗಿದ ಬಳಿಕ ಗಡ್ಕರಿ ಅವರು ಹೋಟೆಲ್ಗೆ ಮರಳಿದ್ದರು. “ಆದರೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಭಾರತದಲ್ಲಿರುವ ಇರಾನ್ ರಾಯಭಾರಿ ನನ್ನ ಬಳಿ ಬಂದು, ನಾವು ತಕ್ಷಣ ಹೊರಡಬೇಕೆಂದು ಹೇಳಿದರು. ಕಾರಣ ಕೇಳಿದಾಗ, ಹಮಾಸ್ ಮುಖ್ಯಸ್ಥನ ಹತ್ಯೆಯಾಗಿದೆ ಎಂದು ತಿಳಿಸಿದರು. ನನಗೆ ಆಘಾತವಾಯಿತು. ಇದು ಹೇಗೆ ಸಂಭವಿಸಿತು ಎಂದು ಕೇಳಿದಾಗ, ಅವರಿಗೂ ಇನ್ನೂ ಸ್ಪಷ್ಟ ಮಾಹಿತಿ ಇರಲಿಲ್ಲ,” ಎಂದು ಸಚಿವರು ಸ್ಮರಿಸಿಕೊಂಡರು.
ಜುಲೈ 31ರಂದು ನಸುಕಿನ ಜಾವ 1:15ರ ಸುಮಾರಿಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಭದ್ರತೆಯಲ್ಲಿರುವ ಸೇನಾ ಸಂಕೀರ್ಣದಲ್ಲಿ ಹನಿಯೇ ಹತ್ಯೆ ನಡೆದಿತ್ತು.
ಹತ್ಯೆಯ ನಿಗೂಢತೆ ಮತ್ತು ಮೊಸಾದ್ ನಂಟು
ಹತ್ಯೆ ನಡೆದು ತಿಂಗಳುಗಳೇ ಕಳೆದರೂ, ಅದು ನಿಖರವಾಗಿ ಹೇಗೆ ಸಂಭವಿಸಿತು ಎಂಬ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ ಎಂದು ಗಡ್ಕರಿ ಅಭಿಪ್ರಾಯಪಟ್ಟರು. “ಮೊಬೈಲ್ ಫೋನ್ ಬಳಕೆಯಿಂದ ಲೊಕೇಶನ್ ಟ್ರ್ಯಾಕ್ ಆಗಿ ಹತ್ಯೆಯಾಯಿತೇ ಅಥವಾ ಬೇರೆ ದಾರಿಯಲ್ಲಿ ಕೃತ್ಯ ಎಸಗಲಾಯಿತೇ ಎಂಬುದು ಚರ್ಚೆಯಲ್ಲಿದೆ,” ಎಂದರು.
ಇದೇ ವೇಳೆ, ಇಸ್ರೇಲ್ನ ಗುಪ್ತಚರ ಸಂಸ್ಥೆ ‘ಮೊಸಾದ್’ ಈ ಕೃತ್ಯದ ಹಿಂದೆ ಇದೆ ಎಂಬ ವರದಿಗಳನ್ನೂ ಗಡ್ಕರಿ ಉಲ್ಲೇಖಿಸಿದರು. ‘ದಿ ಟೆಲಿಗ್ರಾಫ್’ ವರದಿಯ ಪ್ರಕಾರ, ಮೊಸಾದ್ ಇರಾನ್ ಭದ್ರತಾ ಏಜೆಂಟ್ಗಳನ್ನು ಬಳಸಿಕೊಂಡು ಹನಿಯೇ ತಂಗಿದ್ದ ಕಟ್ಟಡದಲ್ಲಿ ಸ್ಫೋಟಕಗಳನ್ನು ಇರಿಸಿತ್ತು ಎಂದು ಹೇಳಲಾಗಿದೆ. ಮೇ ತಿಂಗಳಲ್ಲಿಯೇ ಹತ್ಯೆಗೆ ಸಂಚು ರೂಪಿಸಲಾಗಿತ್ತಾದರೂ, ಜನಸಂದಣಿಯ ಕಾರಣದಿಂದ ಅದನ್ನು ಕೈಬಿಟ್ಟು, ಜುಲೈನಲ್ಲಿ ಈ ಕೃತ್ಯ ಎಸಗಲಾಯಿತು ಎಂದು ವರದಿಗಳು ಹೇಳುತ್ತವೆ.
ತಮ್ಮ ಭಾಷಣದಲ್ಲಿ ಇಸ್ರೇಲ್ ಅನ್ನು ಉದಾಹರಣೆಯಾಗಿ ನೀಡಿದ ಗಡ್ಕರಿ, “ಒಂದು ದೇಶ ಪ್ರಬಲವಾಗಿದ್ದರೆ, ಯಾರೂ ಅದರ ಮೇಲೆ ಕೈ ಇಡಲು ಸಾಧ್ಯವಿಲ್ಲ. ಇಸ್ರೇಲ್ ಚಿಕ್ಕ ರಾಷ್ಟ್ರವಾದರೂ, ತಂತ್ರಜ್ಞಾನ ಮತ್ತು ಸೇನಾ ಸಾಮರ್ಥ್ಯದಿಂದ ಜಾಗತಿಕ ಪ್ರಭಾವ ಹೊಂದಿದೆ,” ಎಂದು ಬಣ್ಣಿಸಿದರು.
ಇದನ್ನೂ ಓದಿ : 17 ವರ್ಷಗಳ ವನವಾಸ ಅಂತ್ಯ | ಬಾಂಗ್ಲಾಗೆ ಮರಳಿದ ‘ಡಾರ್ಕ್ ಪ್ರಿನ್ಸ್’ ತಾರಿಕ್ ರೆಹಮಾನ್.. ಭಾರತದ ಮೇಲೇನು ಪರಿಣಾಮ?



















