ತಮಿಳುನಾಡು ಬಿಜೆಪಿ ಘಟಕಕ್ಕೆ ನೂತನ ಸಾರಥಿ ನೇಮಿಸಲಾಗಿದೆ. ನೈನರಿ ನಾಗೇಂದ್ರರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ತಿರುನಲ್ ವೇಲಿ ಶಾಸಕರಾಗಿರುವ ನಾಗೇಂದ್ರ ಇದೀಗ ಪಕ್ಷದ ಮುಂದಾಳತ್ವ ವಹಿಸಿಕೊಳ್ಳುತ್ತಿದ್ದಾರೆ. ತಮಿಳುನಾಡಿನ ಪ್ರಬಲ ತೇವರ್ ಸಮುದಾಯದ ಮುಖಂಡ ನಾಗೇಂದ್ರ ಮುಂದೆ ಸಾಲು ಸಾಲು ಸವಾಲುಗಳಿದ್ದು ಅವರ ಹೊಣೆಗಾರಿಕೆಯನ್ನೀಗ ಹೆಚ್ಚಿಸಿದೆ. ಈಗಾಗಲೇ ಎಐಎಡಿಎಂಕೆ ಜೊತೆ ಮುಂದಿನ ವರ್ಷ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದೆ. ಹೀಗಾಗಿಯೇ ಗೌಂಡರ್ ಸಮುದಾಯದ ಎಡಿಎಂಕೆ ಮುಖಂಡ ಪಳನಿಸ್ವಾಮಿ ಹಾಗೂ ತೇವರ್ ಸಮುದಾಯದ ನಾಗೇಂದ್ರರನ್ನು ಮುಂದಿಟ್ಟುಕೊಂಡು ದ್ರಾವಿಡ ನಾಡಿನಲ್ಲಿ ಕಮಲ ಅರಳಿಸೋ ಪ್ಲ್ಯಾನ್ ಮಾಡಿದೆ. ಮೋದಿ-ಅಮಿತ್ ಶಾ ಜೋಡಿ.
ಇತ್ತೀಚೆಗಷ್ಟೇ ರಾಜ್ಯ ಘಟಕದ ಅಧ್ಯಕ್ಷಗಿರಿಯಿಂದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈರನ್ನು ಕೆಳಗಿಸಲಾಗಿತ್ತು. ಈ ನಡುವೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಮಿಳು ನೆಲದಲ್ಲಿ ಎರಡಂಕಿ ವೋಟ್ ಶೇರ್ ಪಡೆದಿರೋದು ಬಿಜೆಪಿ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.