ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ನೂತನ ಶಕೆ ಆರಂಭವಾಗಿದೆ. ಯುವ ಬ್ಯಾಟರ್ ಶುಭಮನ್ ಗಿಲ್ ಗೆ ತಂಡದ ಸಾರಥ್ಯ ವಹಿಸಲಾಗಿದೆ.
25 ವರ್ಷದ ಪಂಜಾಬ್ ನ ಸ್ಪೋಟಕ ದಾಂಡಿಗನಿಗೆ ಕಡೆಗೂ ಅಳೆದೂ ತೂಗಿ ನಾಯಕತ್ವದ ಹೊಣೆಗಾರಿಕೆ ನೀಡಲಾಗಿದೆ. ರೋಹಿತ್ ಶರ್ಮಾರ ಉತ್ತರಾಧಿಕಾರಿ ರೇಸ್ ನಲ್ಲಿ ರಿಷಭ್ ಪಂತ್, ಜಸ್ಪ್ರೀತ್ ಬೂಮ್ರಾ, ಕೆಎಲ್ ರಾಹುಲ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಆದ್ರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಅಂತಿಮವಾಗಿ ಗಿಲ್ ಗೆ ಪಟ್ಟಾಭಿಷೇಕ ಮಾಡಿದೆ.
ಉಳಿದಂತೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗೆ ಉಪನಾಕನ ಜವಾಬ್ದಾರಿ ನೀಡಿದೆ. ಇನ್ನು ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಗಿಟ್ಟಿಸಿದ್ದಾರೆ. ಬ್ಯಾಟ್ಸ್ ಮನ್ ಕೆ ಎಲ್ ರಾಹುಲ್ ಹಾಗೂ ಬೌಲರ್ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.

ಇದರೊಟ್ಟಿಗೆ 7 ವರ್ಷಗಳ ಬಳಿಕ ಬ್ಯಾಟರ್ ಕರಣ್ ನಾಯರ್ ರೀ ಎಂಟ್ರಿ ಮಾಡ್ತಿರೋದು ವಿಶೇಷ. ರಣಜಿ, ಐಪಿಎಲ್ ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕರಣ್ ಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಅಷ್ಟೇ ಅಲ್ಲಾ ಯುವ ಬ್ಯಾಟರ್ ಅಭಿಮನ್ಯು ಈಶ್ವರನ್ ಗೂ ಮತ್ತೊಂದು ಅವಕಾಶ ನೀಡಲಾಗಿದೆ.
ಸಾಯಿ ಸುದರ್ಶನ್, ಧ್ರುವ್ ಜುರೇಲ್ ಗೂ ಚಾನ್ಸ್ ನೀಡಲಾಗಿದೆ. ಆದರೆ ತೀವ್ರ ಕುತೂಹಲ ಕೆರಳಿಸಿದ್ದ ಆಟಗಾರರಾದ ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್ ಗೆ ಈ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಮೊಹಮದ್ ಶಮಿಯನ್ನೂ ಆಯ್ಕೆಗೆ ಪರಿಗಣಿಸಲಾಗಿಲ್ಲ.