ಇತ್ತೀಚಿನ ದಿನಗಳಲ್ಲಿ ಎಲ್ಲ ಕಡೆ ಭಯದ ವಾತಾವರಣ ಸೃಷ್ಟಿಯಾಗುತ್ತಿದ್ದು, ನಗರದ ಜಾಮೀಟ್ರಿ ಪಬ್ಗೆ ಕೈಯಲ್ಲಿ ಪಿಸ್ತೂಲ್ ಹಿಡಿದು ಅನುಮಾನಸ್ಪದ ವ್ಯಕ್ತಿಯೊಬ್ಬ ಎಂಟ್ರಿ ಕೊಟ್ಟಿರುವ ಘಟನೆ ನಡೆದಿದೆ.
ಸುಬ್ರಮಣ್ಯ ನಗರ ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯು ಕಳ್ಳತನಕ್ಕೆ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇದೇ ವಿಚಾರಕ್ಕೆ ಸಂಬಂದಪಟ್ಟಂತೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗ್ಗೆ 5ಗಂಟೆ ಸುಮಾರಿಗೆ ನಮಗೆ ಕಾಲ್ ಬಂದಿತ್ತು. ಸೆಕ್ಯುರಿಟಿ ಕಾಲ್ ಮಾಡಿ, ಓರ್ವ ವೆಪನ್ ಹಿಡಿದುಕೊಂಡು ಒಳಗಡೆ ಇದಾನೆ ಅಂತಾ ಕರೆ ಮಾಡಿದ್ದ. ಮಧ್ಯರಾತ್ರಿ 3.30ರ ಸುಮಾರಿಗೆ ಒಳಗಡೆ ಹೋಗಿದ್ದಾನೆ ಎನ್ನುವುದು ಗೊತ್ತಾಗಿದೆ. ಮಾಸ್ಕ್ ಹಾಕಿಕೊಂಡು, ಕೈಗೆ ಗ್ಲೌಸ್ ಹಾಕೊಂಡು ಒಳಗಡೆ ಹೋಗಿದ್ದಾನೆ. ನಂತರ ಸಿಸಿಟಿವಿ ಆಫ್ ಮಾಡಿ ಕಳ್ಳತನ ಮಾಡಿದ್ದಾನೆ. ಎಷ್ಟು ಕಳ್ಳತನ ಆಗಿದೆ ಎನ್ನುವುದು ಗೊತ್ತಾಗಿಲ್ಲ. ನಾವು ಮಾಹಿತಿ ಪಡೆದು ಒಳಗಡೆ ಪರಿಶೀಲನೆ ಮಾಡಿದ್ದೀವಿ. ಒಳಗಡೆ ಆತ ಇಲ್ಲ ಎನ್ನುವುದು ಖಚಿತ ಆಗಿದೆ. ರಾತ್ರಿಯೇ ಆತ ಕಿಚನ್ ಅಥವಾ ಬೇರೆ ಮಾರ್ಗದಿಂದ ಎಸ್ಕೇಪ್ ಆಗಿರಬಹುದು.
ಈಗ ನಾವು ದೂರು ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.