ತಾತ ಮಾಜಿ ಪ್ರಧಾನಿ…ಈಗ ರಾಜ್ಯಸಭಾ ಸದಸ್ಯ. ಚಿಕ್ಕಪ್ಪ ಮಾಜಿ ಸಿಎಂ…ಈಗ ಕೇಂದ್ರ ಸಚಿವ..ಅಪ್ಪ ಮಾಜಿ ಸಚಿವ..ಈಗ ಶಾಸಕ. ರಕ್ತ ಹಂಚಿಕೊಂಡ ಸಹೋದರ ವಿಧಾನ ಪರಿಷತ್ ಸದಸ್ಯ. ಹೀಗೆ..ಅಧಿಕಾರ ಅನ್ನೋದು ಕಾಲು ಮುರಿದು ಮನೆಯಲ್ಲಿ ಬಿದ್ದು ಬಿಟ್ಟಿದೆ. ಯಾವುದೇ ಸರ್ಕಾರ ಬರಲಿ..ಈ ಕುಟುಂಬದ ಅಂಗಳದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ತರಹೇವಾರಿ ಚರ್ಚೆಗಳು..ಈ ಮನೆಗೊಂದಿಷ್ಟು ಆಯಕಟ್ಟಿನ ಸ್ಥಾನಗಳು. ಇದನ್ನು ಕಂಡು ಅದೆಷ್ಟೋ ಜನ ಅಂದುಕೊಂಡಿದ್ದರೋ ಏನು? ಇಂತಹ ಕುಟುಂಬದಲ್ಲಿ ಹುಟ್ಟುವ ಭಾಗ್ಯ ನಮಗೂ ಸಿಗಬೇಕಿತ್ತಲ್ಲ ಅಂತಾ…ಆದರೆ ಈ ಕುಟುಂಬದ ಸಂಸ್ಕೃತಿ ಈಗ ಜಗಜ್ಜಾಹೀರವಾಗಿದೆ. ಆ ಕುರಿತಾದ ಒಂದು ಸ್ಟೋರಿ ಈಗ ನಿಮ್ಮ ಮುಂದೆ…
ಹೌದು! ಪ್ರಜ್ವಲ್ ರೇವಣ್ಣ ತಾನು ಅಧಿಕಾರ ಮತ್ತು ಶ್ರೀಮಂತಿಕೆಯ ಅಪಾಯಕಾರಿ ಮತ್ತು ಸಮಾಜಘಾತುಕ ಕಾಕ್ಟೇಲ್ ಎಂಬುವುದಕ್ಕೆ ಸಾಕ್ಷಿಯಾಗಿ ಜೀವನಪರ್ಯಂತ ಜೈಲಿನಲ್ಲಿ ಉಳಿಯುವ ಶಿಕ್ಷೆಗೆ ಒಳಪಟ್ಟಿದ್ದಾರೆ. ಅವರ ಅಪರಾಧಗಳು ಹೀನ, ಪಾಶವೀ, ಪೈಶಾಚಿಕ, ಸಭ್ಯ ಸಮಾಜ ಧಿಕ್ಕರಿಸುವಂಥವು. ಆದರೆ, ಅಧಿಕಾರವನ್ನೇ ತಮ್ಮ ಮನೆಯಲ್ಲಿ ಕೂಡಿ ಹಾಕಿದ್ದ ಕುಟುಂಬಕ್ಕೆ ಈ ನೋವು ತಡೆದುಕೊಳ್ಳಲಾಗುತ್ತಿಲ್ಲ. ಕುಟುಂಬ ರಾಜಕಾರಣ, ಪುತ್ರ ವ್ಯಾಮೋಹ ಎನ್ನುವ ಮಾತು ದೇವೇಗೌಡರ ವಿರುದ್ಧ ಕೇಳಿ ಬಂದಿದ್ದರೂ ಬದುಕಿನುದ್ದಕ್ಕೂ ಕಚ್ಚೆಗಟ್ಟಿ ಇಟ್ಟುಕೊಂಡು ಹೋರಾಡಿದ ಶುದ್ದ ರಾಜಕಾರಣಿಯಂತೂ ಸತ್ಯ. ಇಂತಹ ಜನಾನುರಾಗಿ ಕುಟುಂಬಕ್ಕೆ ಈಗ ಕೆಟ್ಟ ಕಳಂಕ ಅಂಟಿಕೊಂಡು ಬಿಟ್ಟಿತು.
ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣನ ಹಿರಿಯ ಪುತ್ರ ಪ್ರಜ್ವಲ್ ರೇವಣ್ಣಗೆ ವಿಶೇಷ ನ್ಯಾಯಾಲಯ, ಅತ್ಯಾಚಾರದ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ನೀಡಿದೆ. ಮೊಮ್ಮಗನಿಗೆ ಜೀವಾವಧಿ ಶಿಕ್ಷೆ ಸಿಗುತ್ತಿದ್ದಂತೆ ಟಿವಿಯ ಮುಂದೆಯೇ ಕುಳಿತಿದ್ದ ದೊಡ್ಡ ಗೌಡರು ಪತ್ನಿ ಚೆನ್ನಮ್ಮ ಮುಖವನ್ನೊಮ್ಮೆ ನೋಡಿ ಕಣ್ಣೀರು ಹಾಕಿದರು ಎಂದು ವರದಿಯಾಗುತ್ತಿದೆ. ಆದರೆ, ಜನ ಪ್ರಜ್ವಲ್ ನ ಕಾಮಕಾಂಡಕ್ಕೆ ಧಿಕ್ಕಾರ ಹೇಳಬೇಕೋ? ಇಂತಹ ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳಿಂದ ಇಂತಹ ಅವಮಾನ ಎದುರಿಸಿದ ದೇವೇಗೌಡರಿಗೆ ಸಾಂತ್ವನ ಹೇಳಬೇಕೋ? ತಿಳಿಯದಾಗಿದೆ. ದೇವೇಗೌಡರಿಗೆ ಈಗ 92 ವರ್ಷ. ಧರ್ಮಪತ್ನಿ ಚೆನ್ನಮ್ಮಗೆ 88 ವರ್ಷ. ದೇವೇಗೌಡರದ್ದು ಅಪ್ಪಟ ದೈವಭಕ್ತ ಕುಟುಂಬ. ದೊಡ್ಡಗೌಡರು ಮೊಮ್ಮಗನಿಗಾಗಿ ತಮ್ಮ ಕ್ಷೇತ್ರವನ್ನೇ ಬಿಟ್ಟು ಕೊಟ್ಟಿದ್ದರು. ಬಹುಶಃ ಕೋರ್ಟ್ ತೀರ್ಪು ಹೊರ ಬರುತ್ತಿದ್ದಂತೆ ಅದು ನೆನಪಾಗಿರಬಹುದು…
ಮೊಮ್ಮಗ ಮಾಡಿದ ತಪ್ಪಿಗೆ ಹಿರಿಯ ಜೀವಕ್ಕೆ ವ್ಯಂಗ್ಯವಾಡುವುದು ಮಾತ್ರ ತಪ್ಪು. ಆದರೆ, ತಪ್ಪು ಮಾಡಿದವನಿಗೆ ಕೋರ್ಟ್ ತೀರ್ಪು ನೀಡಿರುವುದು ಮಾತ್ರ ಸರಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನರದ್ದೆಂದು ಹೇಳಲಾಗಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಯಾವುದೇ ವಿಡಿಯೋದಲ್ಲಿ ಅವರ ಮುಖ ಕಂಡಿರಲಿಲ್ಲ. ಆದರೆ ಈಗ ವಿಡಿಯೋಗಳ ಆಧಾರದಲ್ಲಿ ಶಿಕ್ಷೆಯಾಗಿದೆ. ಮೂರು ವರ್ಷಗಳ ಹಿಂದೆ ಫಾರ್ಮ್ ಹೌಸ್ ನಲ್ಲಿ ತಮ್ಮ ಮನೆಗೆಲಸದವಳ ಮೇಲೆ ಮಾಡಿದ್ದ ಅತ್ಯಾಚಾರವು ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆಯಾಗಿದೆ.
ಈಗ ಜನರಲ್ಲಿ ಕೂಡ ಇದೇ ಪ್ರಶ್ನೆ ಮೂಡುತ್ತಿದೆ. ‘ವಿಡಿಯೋದಲ್ಲಿ ಪ್ರಜ್ವಲ್ ಕಾಣಿಸದಿದ್ದರೂ ಎಸ್ಐಟಿ ಹೇಗೆ ಆತನೇ ಎಂದು ಪತ್ತೆ ಮಾಡಿತು? ಈ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಕೂಡ ಇದೆ. ‘ಅನಾಟೋಮಿಕಲ್ ಕಾಂಪಾರಿಷನ್ ಆಫ್ ಜನೆಟಲ್ ಫೀಚರ್ಸ್’ ಎಂಬ ತಂತ್ರಜ್ಞಾನದ ವಿಧಾನದ ಮೂಲಕ ಪ್ರಜ್ವಲ್ ಗೆ ಜೀವಾವಧಿ ಶಿಕ್ಷೆ ವಿಧಿಸುವಂತಾಗಿದೆ. ಈ ತಂತ್ರಜ್ಞಾನ ಟರ್ಕಿ ಹಾಗೂ ಜಪಾನ್ ನಲ್ಲಿದ್ದು ಇದೇ ಮೊದಲ ಬಾರಿಗೆ ಭಾರತದಲ್ಲಿ ಬಳಕೆಯಾಗಿ, ಬಹುಶಃ ಯಶಸ್ವಿ ಕೂಡ ಆಗಿದೆ.
ಇದರೊಂದಿಗೆ ಆಯಾ ಕೇಸ್ ಗಳಿಗೆ ತಕ್ಕಂತೆ ತನಿಖಾಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಪೂರಕವಾಗಿ ಒದಗಿಸಿದ್ದರ ಫಲವಾಗಿ, ವಿಡಿಯೋದಲ್ಲಿ ಇರುವುದು ಅವರೇ ಎಂಬುವುದು ಸಾಬೀತಾಗಿದೆ. ಸಾಂದರ್ಭಿಕ ಸಾಕ್ಷಿಗಳು ಕೂಡ ಪ್ರಕರಣ ಇತ್ಯರ್ಥವಾಗಲು ಸಹಕಾರಿಯಾಗಿವೆ. ಮಹಿಳೆಯು ಎತ್ತಿಟ್ಟಿದ್ದ ಪೆಟ್ಟಿಕೋಟ್ ಪರೀಕ್ಷೆಯಲ್ಲಿ ಕಂಡು ಬಂದ ವೀರ್ಯಾಣುಗಳು ಪ್ರಜ್ವಲ್ ರೇವಣ್ಣನವರ ವೀರ್ಯಾಣುಗಳಿಗೆ ಹೋಲಿಕೆಯಾಗಿದ್ದವು ಎಂಬುವುದು ಪ್ರಕರಣದ ಪ್ರಧಾನ ಸಾಕ್ಷ್ಯವಾಗಿದೆ.
ಪ್ರಜ್ವಲ್ ರೇವಣ್ಣ ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿ, ದೋಷಿ ಎಂದು ಘೋಷಿಸುತ್ತಿದ್ದಂತೆ ಪ್ರಜ್ವಲ್ ಕಣ್ಣೀರಿಟ್ಟಿದ್ದಾರೆ. ನಾನು ಮೆರಿಟ್ ಸ್ಟೂಡೆಂಟ್, ಅಪ್ಪ- ಅಮ್ಮನನ್ನು ನೋಡಿ ಆರು ತಿಂಗಳಾಗಿದೆ. ಶಿಕ್ಷೆ ಪ್ರಕಟಿಸುವ ಮುನ್ನ ಸ್ವಲ್ಪ ಕರುಣೆ ತೋರಿಸಿ ಎಂದೆಲ್ಲಾ ಬೇಡಿಕೊಂಡರು ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದಂತಿದೆ.
ಇಲ್ಲಿ ಪ್ರಮುಖವಾಗಿ ಕಂಡು ಬರುವುದು ಸಂತ್ರಸ್ತೆಯ ದಿಟ್ಟತನ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಸಮುದಾಯ ಧನ್ಯವಾದ ಹೇಳಬೇಕಿರುವುದು ಆ ಸಂತ್ರಸ್ತ ಮಹಿಳೆಗೆ. ಕೇಸ್ ಹಾಕಿಸಿಕೊಂಡಾತ ದೊಡ್ಡ ಪ್ರಭಾವಿ ಮನೆಯಾತ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಪ್ರಾಬಲ್ಯ ಹೊಂದಿದ್ದವರು. ಅಂಥವರಿಂದ ತೀವ್ರ ಒತ್ತಡವಿದ್ದರೂ ಸಹ ಧೈರ್ಯಗೆಡದೇ ನಮಗೆ ನ್ಯಾಯ ಬೇಕೇಬೇಕು ಎಂದು ಆಕೆ ನಮ್ಮ ಜೊತೆಗೆ ನಿಂತಿದ್ದಳು. ಆಕೆಯ ಸಹಕಾರದಿಂದ ನಮಗೆ ಹೆಚ್ಚಿನ ಸಾಕ್ಷ್ಯಾಧಾರ ಕಲೆಹಾಕಲು ಸಾಧ್ಯವಾಯಿತು. ಬಹುಶಃ ಈ ತೀರ್ಪಿನಿಂದಾಗಿ ಆಕೆಗೆ ಸಮಾಧಾನವಾಗಿರಬೇಕು ಎಂದು ಎಸ್ ಐಟಿ ಸಂತಸಪಟ್ಟಿದೆ.
ಮಹಿಳೆ ಮಾಡಿದ ಆರೋಪಗಳಿಗೆ ಸ್ಪಷ್ಟನೆ ಕೇಳಲಾಗಿತ್ತು. ತನಿಖೆ ಮುಗಿಯುವವರೆಗೂ ಧೈರ್ಯದಿಂದ ಇದ್ದರು. ಅತ್ಯಾಚಾರ ಆರೋಪವಾದ ಕಾರಣ ಪ್ರಕರಣವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿತ್ತು. ಸತತವಾಗಿ ಏಳು ತಿಂಗಳು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ 180 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆವು ಎಂದು ಎಸ್ ಐಟಿ ಹೇಳಿದೆ
ಈ ಜೀವಾವಧಿ ಶಿಕ್ಷೆ ಲಿಂಗತ್ವ ಸಮನ್ಯಾಯದ ಪರವಾದ ಎಲ್ಲ ಶಕ್ತಿಗಳಿಗೆ ಸಂದ ಜಯ ಕೂಡ ವ್ಯಾಖ್ಯಾನಿಸಬಹುದು. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಮೊದಲು ಧ್ವನಿ ಎತ್ತಿದ್ದರು. ಈ ಪ್ರಕರಣದ ವಿರುದ್ಧ ಗುಡುಗು ಹಾಕಿದ್ದ ಅವರ ಹೋರಾಟದ ಫಲಶೃತಿಯಾಗಿ ಸರ್ಕಾರವು ತನಿಖೆಯ ಜವಾಬ್ದಾರಿಯನ್ನು ಎಸ್ ಐಟಿ ಹೆಗಲಿಗೆ ವಹಿಸಿತ್ತು. ಯಾವುದೇ ಪಕ್ಷಪಾತ, ಲೋಪ ಇಲ್ಲದೆ ತನಿಖೆ ಕೈಗೊಂಡ ಎಸ್ ಐಟಿ ತಂಡ ಈಗ ಮೊದಲ ಸಂತ್ರಸ್ತೆಗೆ ನ್ಯಾಯ ಒದಗಿಸಿದೆ. ಮಹಿಳಾ ಮಣಿಯರ ಕಣ್ಣೀರು ಈಗ ಸಂತಸದ ಪಣ್ಣೀರಾಗಿ ಮಾರ್ಪಟ್ಟಿದೆ. ಮಹಿಳಾ ಆಯೋಗ ಸರಿಯಾದ ಸಮಯದಲ್ಲಿ ಸೂಕ್ತ ಹೆಜ್ಜೆಯಿಟ್ಟಿರುವುದು ಕೂಡ ತನಿಖೆಗೆ ಪುಷ್ಠಿ ಸಿಗುವಂತಾಗಿದೆ. ಒಂದು ಸರ್ಕಾರದ ಅಂಗ ಸಂಸ್ಥೆ ಸರಿಯಾದ ಸಮಯಕ್ಕೆ ಮೈಗೊಡವಿ ನಿಂತರೆ, ಅನ್ಯಾಯಕ್ಕೆ ತಕ್ಕ ಶಾಸ್ತಿಯಾಗುತ್ತದೆ ಎಂಬುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿ ನಿಂತಿದೆ.
ತೀರ್ಪು ಬರೆಯುವಾಗ ನ್ಯಾಯಾಧೀಶರು ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖ ಮಾಡಿ ಹೆಣ್ಣಿನ ಮಹತ್ವ ತಿಳಿಸಿದ್ದಾರೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ, ಯತ್ರೈತಾಸ್ತುನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ ಅಂದ್ರೆ ಮಹಿಳೆಯರನ್ನು ಎಲ್ಲಿ ಪೂಜಿಸಲಾಗುತ್ತದೆಯೋ ಅಲ್ಲಿ ದೈವತ್ವ ನೆಲೆಸುತ್ತದೆ ಎಂಬುವುದು ಈ ಶ್ಲೋಕದ ಅರ್ಥವಾಗಿದೆ. ಈ ಶ್ಲೋಕದ ಮೂಲಕ ಹೆಣ್ಣಿನ ಮಹತ್ವವನ್ನು ಸಾರಿ ಹೇಳಿದ್ದಾರೆ. ಅಧಿಕಾರ, ಹಣವಿದ್ರೆ ಏನು ಬೇಕಾದ್ರೂ ಮಾಡಬಹುದು ಎನ್ನುವ ಪ್ರಭಾವಿಗಳಿಗೆ ಇದು ದೊಡ್ಡ ಸಂದೇಶವಾಗಿದೆ. ಬಹುಶಃ ಈ ತೀರ್ಪು ಜನಸಾಮಾನ್ಯರ ಮೆಚ್ಚುಗೆಗೂ ಪಾತ್ರವಾಗಿದೆ,. ಹೆಣ್ಣಿನ ಕುಲಕ್ಕೆ, ಸಂತ್ರಸ್ತೆಗೆ ಸಿಕ್ಕ ನ್ಯಾಯ ಇದು ಎನ್ನಲಾಗುತ್ತಿದೆ. ಕ್ಷಮಾಯಾಧರಿತ್ರಿಗೆ ಇನ್ನಾದರೂ ನೆಮ್ಮದಿ ಸಿಗಲಿ ಎಂದು ಹೇಳುತ್ತ…



















