ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೆಣ್ಣೂರು ಬಂಡೆಯ ಕ್ಲಾಸಿಕ್ ರಾಯಲ್ ಗಾರ್ಡನ್ ಹತ್ತಿರ ಶನಿವಾರ ರಾತ್ರಿ 11 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಭಾನುತೇಜಾ(12) ಸಾವನ್ನಪ್ಪಿರುವ ಬಾಲಕ. ಬೈಕ್ ನಲ್ಲಿ ಮಾವನ ಜೊತೆ ಬಾಲಕ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಲಕ ಕೆಳಗೆ ಬೀಳುತ್ತಿದ್ದಂತೆ ಬಾಲಕನ ತಲೆಯ ಮೇಲೆ ಟ್ರಕ್ ಹರಿದಿದೆ.
ಟ್ರಕ್ ನ ಅತೀ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಂಬೇಡ್ಕರ್ ಆಸ್ಪತ್ರೆಗೆ ಮೃತ ಬಾಲಕನ ದೇಹ ರವಾನೆ ಮಾಡಲಾಗಿದೆ. ಬೈಕ್ ಓಡಿಸುತ್ತಿದ್ದ ಬಾಲಕನ ಮಾವನಿಗೂ ಗಾಯಗಳಾಗಿವೆ. ಗಾಯಗೊಂಡ ವ್ಯಕ್ತಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಬಾಲಕ ಭಾನುತೇಜಾ ಕಳೆದ 1 ತಿಂಗಳಿನಿಂದ ವೇದ ಕಲಿಯುತ್ತಿದ್ದ. ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಕಲಿಯುತ್ತಿದ್ದ.
ಭಾನುತೇಜಾ ಮೂಲತಃ ಆಂಧ್ರ ಮೂಲದ ಚಿತ್ತೂರಿನವನು ಎನ್ನಲಾಗಿದೆ. ವೇದ ಕಲಿಯುತ್ತಿರುವುದರಿಂದಾಗಿ ಆರ್.ಟಿ.ನಗರ ದೇವಸ್ಥಾನದಲ್ಲೇ ಗುರುಗಳ ಜೊತೆಗೆ ವಾಸವಿದ್ದ. ಆದರೆ, ಶನಿವಾರ ಹುಟ್ಟು ಹಬ್ಬ ಇದ್ದ ಹಿನ್ನೆಲೆಯಲ್ಲಿ ಭಾನುತೇಜ, ಹೊರಮಾವಿನಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದ. ಹುಟ್ಟು ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ಮರಳಿ ಹೋಗುವಾಗ ಈ ದುರ್ಘಟನೆ ನಡೆದಿದೆ. ಪಾಲಕರು ಚಿತ್ತೂರಿನಿಂದ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.